
ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಕೃತಿಯು ಗ್ರಾಮೀಣ ಭಾರತದ ಮರ್ಯಾದಾ ಹತ್ಯೆ ಮತ್ತು ಗುಂಪು ಹಿಂಸಾಚಾರದಂತಹ ಜ್ವಲಂತ ಸಮಸ್ಯೆಗಳನ್ನು ನೈಜವಾಗಿ ಚಿತ್ರಿಸುತ್ತದೆ.
ನವದೆಹಲಿ (ಮಾ.16): ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡದ ಗಟ್ಟಿಯಾದ ಕಥಾ ಲೋಕಕ್ಕೆ ರಾಷ್ಟ್ರಮಟ್ಟದ ಮನ್ನಣೆ ದೊರೆತಂತಾಗಿದೆ. ಈ ಪ್ರಶಸ್ತಿಯು ₹1,00,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ಸಮಿತಿಯು ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2025ರ ಜನವರಿ 30ರಂದು ಆರಂಭವಾದ ಸುದೀರ್ಘ ಆಯ್ಕೆ ಪ್ರಕ್ರಿಯೆಯ ನಂತರ ಈ ಅಧಿಕೃತ ಘೋಷಣೆ ಹೊರಬಿದ್ದಿದೆ.
‘ದಡ ಸೇರಿಸು ತಂದೆ’ ಕೃತಿಯ ಹೂರಣ
ಇದು ಅಮರೇಶ ನುಗಡೋಣಿ ಅವರ 6ನೇ ಕಥಾ ಸಂಕಲನವಾಗಿದ್ದು, ಇದರಲ್ಲಿ ಒಟ್ಟು ಎಂಟು ಕಥೆಗಳಿವೆ. ಈ ಕೃತಿಯು ಇಂದಿನ ಗ್ರಾಮೀಣ ಭಾರತದ ಜ್ವಲಂತ ಸಮಸ್ಯೆಗಳನ್ನು ಕನ್ನಡಿ ಹಿಡಿದಿದೆ. ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳು ಮತ್ತು ಗುಂಪು ಹಿಂಸಾಚಾರದ (Mob Violence) ಕ್ರೌರ್ಯವನ್ನು ಇಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಬದುಕಿನ ವೈವಿಧ್ಯತೆ ಹಾಗೂ ಸಮಕಾಲೀನ ಸಮಾಜದ ವಿಘಟನೆಗಳನ್ನು ಈ ಸಂಕಲನವು ಓದುಗರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. 2020ರ ಜನವರಿ 19 ರಂದು ರಾಯಚೂರಿನಲ್ಲಿ ಈ ಕೃತಿ ಲೋಕಾಪರ್ಣೆಯಾಗಿತ್ತು. ಪುಸ್ತಕವನ್ನು ಪಲ್ಲವ ಪ್ರಕಾಶನವು ಹೊರತಂದಿದೆ.