
ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಅಸಭ್ಯ ಚಿತ್ರ, ವೀಡಿಯೋ ತೆಗೆಯುವ ಪಾಪರಾಜಿಗಳ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕಿಡಿಕಾರಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ.
ಶೂಟಿಂಗ್ ನಡೆಯುವಾಗ, ಸಿನಿಮಾ ಕಾರ್ಯಕ್ರಮಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಅಸಭ್ಯ ಚಿತ್ರ, ವೀಡಿಯೋ ತೆಗೆಯುವ ಪಾಪರಾಜಿಗಳ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕಿಡಿಕಾರಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ. ಈ ರೀತಿ ಅಸಭ್ಯ ಭಂಗಿಯ ಫೋಟೋ, ವೀಡಿಯೋ ಮಾಡಿದರೆ ಸೈಬರ್ ಕ್ರೈಮ್ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ನಟಿ ಸಪ್ತಮಿ ಗೌಡ, ಮಾಳವಿಕಾ ಅವಿನಾಶ್, ಶ್ರುತಿ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಯಮಾಲಾ, ‘ಇನ್ನು ಮುಂದೆ ಇಂಥಾ ಘಟನೆ ಮರುಕಳಿಸಬಾರದು. ಸಿನಿಮಾ ಈವೆಂಟ್ಗಳಲ್ಲಿ ನಟಿಯರ ಅಸಭ್ಯ ಚಿತ್ರ ತೆಗೆದರೆ ಅದಕ್ಕೆ ಪಿಆರ್ಓಗಳು ಕಾರಣವಾಗುತ್ತಾರೆ. ಫೋಟೋ ತೆಗೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಈ ಕಾಲದಲ್ಲೂ ಹೆಣ್ಮಕ್ಕಳನ್ನು ಗೌರವಿಸಿ ಎನ್ನಬೇಕಾಗಿರುವುದು ದುರದೃಷ್ಟಕರ: ಶಿವಣ್ಣ
‘ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.ಇತ್ತೀಚೆಗೆ ಸಪ್ತಮಿ ಗೌಡ ಅಸಭ್ಯ ಫೋಟೋ, ವೀಡಿಯೋ ಮಾಡುವವರನ್ನು ಖಂಡಿಸಿದ್ದರು. ಇದೀಗ ಶಿವರಾಜ್ ಕುಮಾರ್, ‘ದಯವಿಟ್ಟು ಆತ್ಮಸಾಕ್ಷಿಯಿಟ್ಟು ಕೆಲಸ ಮಾಡಿ, ಹೆಣ್ಣುಮಕ್ಕಳ, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ’ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶಿವಣ್ಣ ನಿಲುವಿಗೆ ಬೆಂಬಲ ಸೂಚಿಸಿದರೆ, ಹಲವರು ‘ಈ ಆದರ್ಶವನ್ನು ಸಿನಿಮಾದಲ್ಲೂ ಜಾರಿಗೆ ತನ್ನಿ, ನಟಿಯರನ್ನು ಲೈಂಗಿಕ ಪ್ರಚೋದನಕಾರಿಯಾಗಿ ತೋರಿಸಬೇಡಿ, ಐಟಂ ಹಾಡು, ಅಶ್ಲೀಲ ದೃಶ್ಯಗಳು, ಅನಗತ್ಯ ಲಿಪ್ಲಾಕ್ ಹಾಗೂ ಮಹಿಳೆಯರ ಘನತೆಗೆ ಕುಂದು ತರುವಂಥಾ ಡೈಲಾಗ್ಗಳನ್ನು ನಿಷೇಧಿಸಿ’ ಎಂದಿದ್ದಾರೆ.