
ತಮ್ಮ ಮೊದಲ ವಿಶ್ವಕಪ್ ಫೈನಲ್ಗೆ ಸಜ್ಜಾಗಿರುವ ಸಂಜು ಸ್ಯಾಮ್ಸನ್, ಕಳೆದ ಆರು ತಿಂಗಳ ಸವಾಲುಗಳನ್ನು ಮತ್ತು ತಂಡದಲ್ಲಿನ ತಮ್ಮ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಫಾರ್ಮ್ ಕೊರತೆಯಿಂದ ವಿಶ್ವಕಪ್ ಸ್ಥಾನವೇ ಅನಿಶ್ಚಿತವಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮುಂಬೈ: ತಮ್ಮ ವೃತ್ತಿಜೀವನದ ಬೆಸ್ಟ್ ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್, ತಮ್ಮ ಮೊದಲ ವಿಶ್ವಕಪ್ ಫೈನಲ್ಗೆ ಸಜ್ಜಾಗಿದ್ದಾರೆ. ಭಾನುವಾರ ಅಹಮದಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನ, ಕಳೆದ ಆರು ತಿಂಗಳಲ್ಲಿ ಎದುರಿಸಿದ ಸವಾಲುಗಳು ಮತ್ತು ತಂಡದಲ್ಲಿನ ತಮ್ಮ ಹೊಸ ಜವಾಬ್ದಾರಿಗಳ ಬಗ್ಗೆ ಸಂಜು ಮಾತನಾಡಿದ್ದಾರೆ. ನಿನ್ನೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅನುಭವವೇ ಕೈಹಿಡಿಯಿತು
ಹಾಲಿ ಚಾಂಪಿಯನ್ ಭಾರತವನ್ನು ಸತತ ಎರಡನೇ ಬಾರಿಗೆ ಫೈನಲ್ಗೆ ತಲುಪಿಸುವುದರಲ್ಲಿ ಸಂಜು ಪ್ರಮುಖ ಪಾತ್ರ ವಹಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ 97* ರನ್ ಮತ್ತು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 89 ರನ್ ಗಳಿಸಿ, ಸತತ ಎರಡು ಪಂದ್ಯಗಳಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಂದ್ಯದ ನಂತರ ಸಂಜು, “ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ನಾನು ಸುಮಾರು 300ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದೇನೆ. ಬ್ಯಾಟಿಂಗ್ ಕ್ರಮಾಂಕದಲ್ಲಿ 1 ರಿಂದ 6ರವರೆಗಿನ ಯಾವುದೇ ಸ್ಥಾನದಲ್ಲಿ ಆಡಿದ್ದೇನೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದೇನೆ. ಈ ಎಲ್ಲಾ ಸ್ಪಷ್ಟತೆ ನನಗೆ ರನ್ ಗಳಿಸಲು ಸಹಾಯ ಮಾಡುತ್ತಿದೆ,” ಎಂದು ಹೇಳಿದರು.
ಪವರ್ಪ್ಲೇನಲ್ಲಿ ಅಬ್ಬರ
ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಜೊತೆಗೆ ಪವರ್ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡುವುದೇ ತನ್ನ ಕೆಲಸ ಎಂದು ಸಂಜು ಸ್ಪಷ್ಟಪಡಿಸಿದರು. “ಪವರ್ಪ್ಲೇನಲ್ಲೇ ಮ್ಯಾಚ್ ಗೆಲ್ಲೋದು, ಸೋಲೋದು ನಿರ್ಧಾರವಾಗುತ್ತದೆ. ಮೊದಲ ಮೂರ್ನಾಲ್ಕು ಎಸೆತಗಳನ್ನು ನೋಡಿಕೊಂಡು ನಂತರ ಅಟ್ಯಾಕ್ ಮಾಡುವುದೇ ನಮ್ಮ ಶೈಲಿ. ಎಂಟನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲ ಇರುವುದರಿಂದ ಈ ಪ್ಲಾನ್ ಬದಲಿಸುವ ಅಗತ್ಯವಿಲ್ಲ. ಅದು ನಮ್ಮ ದಿನವಾಗಿದ್ದರೆ, ತಂಡವನ್ನು ಮುಂದೆ ಕೊಂಡೊಯ್ಯುತ್ತೇವೆ, ಇಲ್ಲದಿದ್ದರೆ ಇತರರಿಗೆ ಬೆಂಬಲ ನೀಡುತ್ತೇವೆ” ಎಂದು ಸಂಜು ವಿವರಿಸಿದರು.
ಸವಾಲುಗಳಿಂದ ಕೂಡಿದ್ದ ಆರು ತಿಂಗಳು
ವಿಶ್ವಕಪ್ಗೂ ಮುನ್ನ ಕಳೆದ ಕೆಲವು ತಿಂಗಳುಗಳು ಸಂಜು ಪಾಲಿಗೆ ಸುಲಭವಾಗಿರಲಿಲ್ಲ. ಫಾರ್ಮ್ ಕೊರತೆ ಮತ್ತು ತಾಂತ್ರಿಕ ದೋಷಗಳ ಕಾರಣ ಏಷ್ಯಾಕಪ್ನಲ್ಲಿ ಓಪನಿಂಗ್ ಅವಕಾಶ ಸಿಕ್ಕಿರಲಿಲ್ಲ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ವಿಶ್ವಕಪ್ ತಂಡದಲ್ಲಿನ ಸ್ಥಾನವೂ ಅನಿಶ್ಚಿತವಾಗಿತ್ತು. “ಕಳೆದ ಕೆಲವು ತಿಂಗಳುಗಳಲ್ಲಿ ನಾನು ಕಠಿಣ ಸವಾಲುಗಳನ್ನು ಎದುರಿಸಿದ್ದೇನೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಹಂಬಲದಿಂದ ನ್ಯೂಜಿಲೆಂಡ್ ಸರಣಿಯಲ್ಲಿ ನಾನು ಅತಿಯಾಗಿ ಪ್ರಯತ್ನಿಸಿದೆ. ಟಿ20 ಕ್ರಿಕೆಟ್ ಕೆಲವೊಮ್ಮೆ ವಿಚಿತ್ರವಾಗಿರುತ್ತದೆ, ವಿಶ್ವದ ಶ್ರೇಷ್ಠ ಆಟಗಾರರೂ ಇಲ್ಲಿ ರನ್ ಗಳಿಸಲು ಕಷ್ಟಪಡುತ್ತಾರೆ. ಆ ಸಮಯದಲ್ಲಿ ನಾನು ಕ್ರಿಕೆಟ್ಗೆ ಗೌರವ ಕೊಡಲು ಮತ್ತು ಮೂಲಭೂತ ಅಂಶಗಳ ಮೇಲೆ ಗಮನ ಹರಿಸಲು ಕಲಿತೆ,” ಎಂದು ಸಂಜು ತಮ್ಮ ಕಷ್ಟದ ದಿನಗಳನ್ನು ನೆನೆದರು.
ಏಕಾಂತ ಮತ್ತು ಏಕಾಗ್ರತೆ
ಕೆಟ್ಟ ಸಮಯವನ್ನು ಹೇಗೆ ನಿಭಾಯಿಸಿದಿರಿ ಎಂಬ ಪ್ರಶ್ನೆಗೆ “ನಾನು ಎಲ್ಲ ನೆಗೆಟಿವಿಟಿಯಿಂದ ದೂರ ಉಳಿದೆ. ಫೋನ್ ಸ್ವಿಚ್ ಆಫ್ ಮಾಡಿದ್ದೆ. ಸೋಶಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರವಿದ್ದೆ. ಈಗಲೂ ನಾನು ಸೋಶಿಯಲ್ ಮೀಡಿಯಾದ ಗದ್ದಲದಲ್ಲಿಲ್ಲ. ಕಡಿಮೆ ಜನರ ಸಂಪರ್ಕ, ಸರಿಯಾದ ದಿಕ್ಕಿನಲ್ಲಿ ಗಮನಹರಿಸಲು ನನಗೆ ಸಹಾಯ ಮಾಡುತ್ತದೆ.” ಎಂದು ಹೇಳಿದ್ದಾರೆ.
ಸೆಂಚುರಿ ಮಿಸ್ ಆಯ್ತಾ?
ಕಳೆದ ಎರಡು ಪಂದ್ಯಗಳಲ್ಲಿ ಶತಕ ತಪ್ಪಿಸಿಕೊಂಡಿದ್ದರ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಂಜು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು. “ಭಾಯ್, ನನಗೆ ಎರಡು ಸೆಂಚುರಿ ಮಿಸ್ ಆಗಿಲ್ಲ. ನಾನು 97 ಮತ್ತು 89 ರನ್ ಗಳಿಸಿದ್ದೇನೆ. ಅದು ದೊಡ್ಡ ವಿಷಯ. ಹಿಂದೆ ಅದೃಷ್ಟ ನನ್ನ ಕೈ ಹಿಡಿದಿರಲಿಲ್ಲ, ಆದರೆ ಈಗ ನನ್ನ ಜೊತೆಗಿದೆ. ಸೆಂಚುರಿಗಳು ಬಂದೇ ಬರುತ್ತವೆ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಿಂತ ಟಿ20 ವಿಭಿನ್ನ. ಇಲ್ಲಿ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಲು ಪ್ರಯತ್ನಿಸಬೇಕು,” ಎಂದು ಸಂಜು ಸ್ಪಷ್ಟಪಡಿಸಿದರು.