![]()
ಕೇರಳ, ತಮಿಳುನಾಡು ರಾಜ್ಯಗಳ ಚುನಾವಣೆ, ರಾಜ್ಯದಲ್ಲಿ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ಆಗುತ್ತದೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಮೇ ಅಥವಾ ಜೂನ್ನಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಸಲೀಮ್ ಅಹ್ಮದ್ ಹೇಳಿದರು.
ವಿಜಯಪುರ : ಕೇರಳ, ತಮಿಳುನಾಡು ರಾಜ್ಯಗಳ ಚುನಾವಣೆ, ರಾಜ್ಯದಲ್ಲಿ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ಆಗುತ್ತದೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಮೇ ಅಥವಾ ಜೂನ್ನಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಸಚೇತಕ ಸಲೀಮ್ ಅಹ್ಮದ್ ಹೇಳಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಡಿಕೆಶಿ ಹಾಲು ಜೇನು ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲ ಇಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಕಾರ್ಯಾಧ್ಯಕ್ಷನಾಗಿ ನಾನು ಕೆಲಸ ಮಾಡಿರುವೆ. ಇನ್ನುಳಿದ ಮೂವರು ಕಾರ್ಯಾಧ್ಯಕ್ಷರಾಗಿದ್ದವರು ಸಚಿವರಾಗಿದ್ದಾರೆ. ನಾನು ಕೂಡ ಈ ಸರ್ಕಾರ ಬರಲು ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ನನಗೆ ಅಸಮಾಧಾನ ಇಲ್ಲ. ಸದ್ಯ ಶೇ.50 ರಷ್ಟು ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದೇವೆ ಎಂದರು.
ಮುಂಬರುವ ತಾಪಂ, ಜಿಪಂ ಮೇ ತಿಂಗಳಲ್ಲಿ ಬರಲಿದ್ದು, ಗ್ಯಾರಂಟಿಗಳೇ ನಮಗೆ ಶ್ರೀರಕ್ಷೆಯಾಗಲಿದೆ. ಬಿಜೆಪಿ ವೈಫಲ್ಯಗಳನ್ನು ಜನರ ಮುಂದೆ ಇಡುತ್ತೇವೆ. ಎರಡು ಉಪಚುನಾವಣೆಗಳಲ್ಲಿ ನಾವೇ ಗೆಲ್ಲಲಿದ್ದೇವೆ. ಮುಂದಿನ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ 2028ರ ಚುನಾವಣೆಗೆ ಪಕ್ಷ ಸಂಘಟನೆಗೆ ಅನುಕೂಲ ಆಗುತ್ತೆ. ಶೇ.50 ರಷ್ಟು ಹೊಸ ಶಾಸಕರಿಗೆ ಸಚಿವಸ್ಥಾನ ನೀಡಬೇಕೆಂದು ಚರ್ಚೆಯಾಗಿದೆ. ಹಾಲಿ ಇರುವ ಶೇ.50 ರಷ್ಟು ಸಚಿವರು ತಮ್ಮ ಸ್ಥಾನವನ್ನು ತ್ಯಜಿಸಿದ ನಂತರ ಪಕ್ಷ ಸಂಘಟನೆಗೆ ಹಾಗೂ ಮುಂದಿನ ಚುನಾವಣೆಗೆ ಅವರನ್ನು ಬಳಸಿಕೊಳ್ಳಬೇಕು ಎಂಬ ಚಿಂತನೆ ನಡೆದಿದೆ ಎಂದರು.
ಬಿಜೆಪಿಯವರು ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ, ಅವ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾದರೂ ನುಡಿದಂತೆ ನಡೆದಿಲ್ಲ. ಮಾತಿಗೆ ತಪ್ಪಿದ ಸರ್ಕಾರ ಬಿಜೆಪಿ ಸರ್ಕಾರ. ನಾವು ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ ಕಪ್ಪು ಹಣ ತಂದು ದೇಶದ ಬಡವರಿಗೆ ಕೊಡುತ್ತೇವೆ ಎಂದು ಹೇಳಿದರು. 12 ವರ್ಷಗಳಾದರೂ ಇದುವರೆಗೆ ಆ ಕೆಲಸ ಮಾಡಿಲ್ಲ. ದೇಶದಲ್ಲಿ ನಿರುದ್ಯೋಗ ಹೋಗಲಾಡಿಸಿಲ್ಲ, ರೈತರಿಗೆ ಅನುಕೂಲ ಕಲ್ಪಿಸಿಲ್ಲ. ಪೆಟ್ರೊಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಹಲವು ವಿಚಾರ ಹೇಳಿರುವ ಅವರು ಯಾವುದೂ ಕಾರ್ಯರೂಪಕ್ಕೆ ತಂದಿಲ್ಲ. ಹಾಗಾಗಿ ಬಿಜೆಪಿಯವರಿಗೆ ನಮಗೆ ಹೇಳುವ ನೈತಿಕತೆ ಅವರಿಗಿಲ್ಲ ಎಂದು ಕಿಡಿಕಾರಿದರು.
ನುಡಿದಂತೆ ನಡೆದ ಸರ್ಕಾರ ನಮ್ಮದು
ನುಡಿದಂತೆ ನಡೆದ ಸರ್ಕಾರ ನಮ್ಮದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳು ಕಳೆದಿವೆ. ನಾವು ನುಡಿದಂತೆ ನಡೆದಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. 6ನೇ ಗ್ಯಾರಂಟಿಯಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ನರೇಗಾ ಯೋಜನೆ ಹೆಸರು ಬದಲಾಯಿಸುವ ಮೂಲಕ ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ಕೊಂದಿದ್ದಾರೆ. ರಾಹುಲ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಹೊರಾಟ ಮಾಡಿ ನರೇಗಾ ಕಾಯ್ದೆಯನ್ನು ಮರಳಿ ತರುತ್ತೇವೆ. ಬಿಜೆಪಿ ಗಾಂಧೀಜಿಯವರ ಹೆಸರು ಬದಲಾಯಿಸುವ ಕುತಂತ್ರವನ್ನು ಮಾಡಿದೆ. ಈ ಯೋಜನೆಯಿಂದ ಗ್ರಾಮೀಣ ಜನರ ಬದುಕು ಬದಲಾವಣೆಯಾಗಿದೆ ಎಂದರು.
ಎಸ್ಸಿ, ಎಸ್ಟಿ ಹಣ ಬಳಕೆ ಮಾಡಿರೋ ಮಾಹಿತಿಯಿದೆ.
ಎಸ್ಇಪಿ, ಡಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಎಸ್ಸಿ, ಎಸ್ಟಿ ಹಣ ಬಳಕೆ ಮಾಡಿರೋ ಮಾಹಿತಿಯಿದೆ. ಆದರೆ, ಆ ಹಣ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುತ್ತಿದೆ. ಆ ನಿಟ್ಟಿನಲ್ಲಿ ದುರ್ಬಳಕೆ ಪ್ರಶ್ನೆಯೇ ಬರುವುದಿಲ್ಲ. ಸರ್ಕಾರ ಹಣ ಬಳಸಿಕೊಂಡಿದೆ ಎನ್ನುವುದನ್ನು ನಾನು ಹೇಳುವುದಿಲ್ಲ ಅದು ನನಗೆ ಗೊತ್ತಿಲ್ಲ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲಹಮೀದ್ ಮುಶ್ರೀಫ್, ಎಸ್.ಎಂ.ಪಾಟೀಲ ಗಣಿಹಾರ, ಶಕೀಲ ಬಾಗಮಾರೆ, ಮಹಮ್ಮದ್ ರಫೀಫ್ ಟಪಾಲ್, ಚಾಂದಸಾಬ್ ಗಡಗಲಾವ, ವಸಂತ ಹೊನಮೊಡೆ ಇದ್ದರು.