Headlines

ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು! | Kannadigas Return To Bengaluru Safely From Abu Dhabi Uae Missile Attack Experience Sat

ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು! | Kannadigas Return To Bengaluru Safely From Abu Dhabi Uae Missile Attack Experience Sat


ಯುಎಇ ಮೇಲೆ ನಡೆದ ಡ್ರೋನ್ ಮತ್ತು ಮಿಸೈಲ್ ದಾಳಿಯ ನಡುವೆ ಸಿಲುಕಿದ್ದ 230 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ. ದಾಳಿಯ ಭೀಕರತೆಯನ್ನು ವಿವರಿಸಿದ ಅವರು, ಸಂಕಷ್ಟದ ಸಮಯದಲ್ಲಿ ಉಚಿತ ವಸತಿ ಮತ್ತು ಭದ್ರತೆ ಒದಗಿಸಿದ ಯುಎಇ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು: ಯುಎಇ ಮೇಲೆ ನಡೆದ ಡ್ರೋನ್ ಮತ್ತು ಮಿಸೈಲ್ ದಾಳಿಯ ಆತಂಕದ ನಡುವೆ ಸಿಲುಕಿದ್ದ ಸುಮಾರು 230 ಮಂದಿ ಕನ್ನಡಿಗರು ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಸಾವಿನ ದವಡೆಯಿಂದ ಪಾರಾಗಿ ಬಂದ ಅನುಭವ ಹಂಚಿಕೊಂಡಿರುವ ಪ್ರವಾಸಿಗರು, ಯುಎಇ (ಅಬುಧಾಬಿ ಮತ್ತು ದುಬೈ) ಸರ್ಕಾರ ಅತಂತ್ರ ಸ್ಥಿತಿಯಲ್ಲಿದ್ದ ವಿದೇಶಿಯರನ್ನು ನಡೆಸಿಕೊಂಡ ರೀತಿ ಮತ್ತು ನೀಡಿದ ಭದ್ರತೆಗೆ ಮನಸಾರೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಣ್ಣೆದುರೇ ಮಿಸೈಲ್ ದಾಳಿ: ಯುಎಸ್ ಏರ್‌ಬೇಸ್ ಮೇಲೆ ಕಣ್ಣು

ಅಬುಧಾಬಿಯಿಂದ ಬೆಂಗಳೂರಿಗೆ ಮರಳಿದ ಕನ್ನಡಿಗರು ವಿಮಾನ ನಿಲ್ದಾಣದಲ್ಲಿ ತಮ್ಮ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. “ನಾವು ಅಲ್ಲಿರುವಾಗಲೇ ಶೆಲ್ ದಾಳಿ ಮತ್ತು ಡ್ರೋನ್ ಮೂಲಕ ಬಾಂಬ್ ಸ್ಫೋಟಗೊಂಡಿದ್ದನ್ನು ಕಣ್ಣಾರೆ ಕಂಡೆವು. ಸ್ಫೋಟದ ತೀವ್ರತೆಗೆ ವಿಪರೀತ ಧೂಳು ಮತ್ತು ಹೊಗೆ ಆವರಿಸಿತ್ತು. ದಾಳಿಕೋರರು ಮುಖ್ಯವಾಗಿ ಅಲ್ಲಿನ ಯುಎಸ್ ಏರ್‌ಬೇಸ್ (US Airbase) ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಆದರೆ, ಅಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟು ಪ್ರಬಲವಾಗಿತ್ತೆಂದರೆ, ಯಾವುದೇ ಮಿಸೈಲ್ ಜನವಸತಿ ಪ್ರದೇಶದ ಮೇಲೆ ಬೀಳದಂತೆ ನೋಡಿಕೊಂಡರು” ಎಂದು ಪ್ರವಾಸಿಗರು ತಿಳಿಸಿದ್ದಾರೆ.

ಯುಎಇ ಸರ್ಕಾರದ ಉದಾತ್ತತೆ ಮತ್ತು ಉಚಿತ ಸೌಲಭ್ಯ

ಸಂಕಷ್ಟದ ಸಮಯದಲ್ಲಿ ದುಬೈ ಮತ್ತು ಅಬುಧಾಬಿ ಸರ್ಕಾರಗಳು ಪ್ರವಾಸಿಗರ ನೆರವಿಗೆ ಧಾವಿಸಿದವು. ದಾಳಿಯಿಂದಾಗಿ ವಿಮಾನಯಾನ ವ್ಯತ್ಯಯಗೊಂಡು ನೂರಾರು ಕನ್ನಡಿಗರು ಅತಂತ್ರರಾಗಿದ್ದರು. ಈ ವೇಳೆ ಅಲ್ಲಿನ ಸರ್ಕಾರ ಎಲ್ಲರಿಗೂ ಉನ್ನತ ದರ್ಜೆಯ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತು. ‘ನಾವು ಹೋಟೆಲ್‌ನಲ್ಲಿ ಉಳಿದುಕೊಂಡ ಅವಧಿಯಲ್ಲಿ ನಮಗೆ ಊಟ, ವಸತಿ ಸೇರಿದಂತೆ ಪ್ರತಿಯೊಂದು ಸೌಲಭ್ಯವನ್ನೂ ಉಚಿತವಾಗಿ ನೀಡಲಾಯಿತು. ಅಷ್ಟೇ ಅಲ್ಲದೆ, ಪ್ರವಾಸಿಗರಿಗೆ ಉಂಟಾದ ಅಡಚಣೆಗಾಗಿ ಅಲ್ಲಿನ ಅಧಿಕಾರಿಗಳು ಕ್ಷಮೆಯಾಚಿಸಿದರು. ಅವರ ವಿನಯತೆ ಮತ್ತು ಸುರಕ್ಷತಾ ಕ್ರಮಗಳು ನಮಗೆ ಆಶ್ಚರ್ಯ ತಂದವು’ ಎಂದು ಮರಳಿದ ಕನ್ನಡಿಗರು ಹೇಳಿದ್ದಾರೆ.

ಮುನ್ನೆಚ್ಚರಿಕೆ ಮತ್ತು ಹತೋಟಿ

ದಾಳಿಯ ಮುನ್ಸೂಚನೆ ಸಿಕ್ಕ ಕೂಡಲೇ ಅಲ್ಲಿನ ಪ್ರಾಧಿಕಾರವು ಸಾರ್ವಜನಿಕರಿಗೆ ಅಲರ್ಟ್ ನೀಡುತ್ತಿತ್ತು. ಮಿಸೈಲ್ ಅಥವಾ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಇರುವ ಬಗ್ಗೆ ಮೊದಲೇ ಜನರಿಗೆ ಎಚ್ಚರಿಕೆ ನೀಡುತ್ತಿದ್ದರಿಂದ ಪ್ರಾಣಹಾನಿ ತಪ್ಪಿದಂತಾಗಿದೆ. “ನಮಗೆ ಆರಂಭದಲ್ಲಿ ತುಂಬಾ ಭಯವಾಗಿತ್ತು. ಆದರೆ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರ ನಮಗೆ ಅಭಯ ನೀಡಿತ್ತು. ಜನರ ಮೇಲೆ ಯಾವುದೇ ದಾಳಿ ನಡೆಯದಂತೆ ಅವರು ಹಗಲಿರುಳು ಶ್ರಮಿಸಿದ್ದಾರೆ. ಈಗ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ” ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ವಿಮಾನ ನಿಲ್ದಾಣದಲ್ಲಿದ್ದಾರೆ ಹಲವು ಕನ್ನಡಿಗರು

ಈಗಾಗಲೇ 230 ಮಂದಿ ಬೆಂಗಳೂರಿಗೆ ಬಂದಿಳಿದಿದ್ದರೂ, ಇನ್ನೂ ಅನೇಕ ಕನ್ನಡಿಗರು ಅಬುಧಾಬಿ ಮತ್ತು ದುಬೈ ವಿಮಾನ ನಿಲ್ದಾಣಗಳಲ್ಲಿ ಬಾಕಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಹಂತ ಹಂತವಾಗಿ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡಿಗರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಯುಎಇ ಸರ್ಕಾರದ ದಕ್ಷತೆ ಮತ್ತು ಅತಿಥಿ ಸತ್ಕಾರವನ್ನು ಮರಳಿದ ಪ್ರತಿಯೊಬ್ಬರೂ ಕೊಂಡಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *