
ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ, ಅಧಿಕಾರಿ ತಳಮಳ ನಡುವೆ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆ ಕಾರಣವೇನು?
ತಿರುವಂತಪುರಂ (ಮಾ.16) ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಅಧಿಕಾರ ಹಿಡಿಯಲು ಎಲ್ಲಾ ಪಕ್ಷಗಳ ಕಸರತ್ತು ತೀವ್ರಗೊಂಡಿದೆ. ಇದರ ನಡುವೆ ಕಾಂಗ್ರೆಸ್ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಕೆಪಿಸಿಸಿ ಕಾರ್ದರ್ಶಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹೌದು, ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಕಾರ್ಯದರ್ಶಿ ತೊಡಿಯೂರು ರಾಮಚಂದ್ರನ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿಕೊಂಡಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿ ಸಂಚಲನ
ಕೇರಳಂ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ನಾಯಕನನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ರಾಮಚದ್ರನ್ ಜೊತೆಗೆ ಸಿಪಿಎಂ ಪಕ್ಷದ ತಿರುವನಂತಪರುಂ ಮಾಜಿ ಕೌನ್ಸಿಲರ್ ಎನ್ಎ ರಶೀದ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನು ಖ್ಯಾತ ವೈದ್ಯ ಪ್ರತಾಪ್ ಕುಮಾರ್ ಎನ್ ಹಾಗೂ ಎನ್ಸಿಪಿ ನಾಯಕ ದೇವಪ್ರಶಾಂತ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.
ಯುಡಿಎಫ್ ಚೇರ್ಮೆನ್ ಆಗಿ ಜವಾಬ್ದಾರಿ ಹೊತ್ತಿದ್ದ ರಾಮಚಂದ್ರನ್ ಹಾಗೂ ಕಾಂಗ್ರೆಸ್ ಶಾಸಕ ಸಿಆರ್ ಮಹೇಶ್ ನಡುವಿನ ಸಮರ ತೀವ್ರಗೊಂಡ ಬೆನ್ನಲ್ಲೇ ಚೇರ್ಮೆನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷದೊಳಗಿನ ತಿಕ್ಕಾಟದಿಂದ ಬೇಸತ್ತಿರುವ ರಾಮಚಂದ್ರನ್ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೂಲಕ ಬಿಜೆಪಿಗೆ ಬಲ ನೀಡಿದ್ದಾರೆ.
47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಕೇರಳಂ ಬಿಜೆಪಿ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನುು ಕೇರಳಂ ಬಿಜೆಪಿ ಪ್ರಕಟಿಸಿದೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬರುವ ನಮಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸದ್ಯ ಈ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಶಿವಂಕುಟ್ಟಿ ಶಾಸಕರಾಗಿದ್ದಾರೆ. 2016ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯ ರಾಜಗೋಪಾಲ್ ಗೆದ್ದು ಬಂದಿದ್ದರು.
ಕೇರಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ. ಎಲ್ಡಿಎಫ್ ಹಾಗೂ ಯುಡಿಎಫ್ ನಡುವೆ ಬಿರುಸಿನ ಸ್ಪರ್ಧೆ ಇದೆ. ಆಡಳಿತರೂಡ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ಕಾಂಗ್ರೆಸ್ ಈ ಬಾರಿ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಹೀಗಾಗಿ ತ್ರಿಕೋನ ಸ್ಪರ್ಧೆ ಎರ್ಪಟ್ಟಿದೆ.