ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿ.ಕೆ.ಶಿವಕುಮಾರ್ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ಅಸ್ಸಾಂನ ಕಾಮಾಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವುದು ಅಧಿಕಾರ ಸಮರಕ್ಕೆ ಹೊಸ ತಿರುವು ನೀಡಿದ್ದಾರೆ.
ಪಟ್ಟ. ಪಟ್ಟು. ಸಿಂಹಾಸನ. ಸಮರ. ಕರುನಾಡಿನ ಕೈ ಕೋಟೆಯೊಳಗೆ ಕಳೆದ ಎರಡುವರೆ ವರ್ಷದಿಂದ ಇದುವೇ ನಡೀತ ಇರೋದು. ಆದ್ರೀಗ ಈ ಪಟ್ಟದ ಸಮರಕ್ಕೆ ದೊಡ್ಡ ತಿರುವು ಸಿಕ್ಕಿದೆ. ಒಂದು ಕಡೆ ಕಾಂಗ್ರೆಸ್ ಅಧಿನಾಯಕಿ ಎದುರು ತಮ್ಮ ಪಟ್ಟನ್ನ ಬಿಗಿಗೊಳಿಸಿದ್ದಾರೆ ಡಿ.ಕೆ.ಶಿವಕುಮಾರ್. ಇನ್ನೊಂದು ಕಡೆ ಈ ಚದುರಂಗವ್ಯೂಹಕ್ಕೆ ಹೊಸ ರೂಪದಲ್ಲಿ ಹೊಸ ಆಟಗಾರನ ಎಂಟ್ರಿಯೂ ಆಗಿದೆ. ಕಾರಣ ಹಳೆಯದ್ದೇ ಆಗಿದ್ರೂ, ಶುರುವಾಗಿರೋದು ಹೊಸ ಯುದ್ಧ.
ನೀಲಾಚಲ ಬೆಟ್ಟದ ಕಾಮಾಕ್ಯ ದೇವಿ ಮಡಿಲಲ್ಲಿ ಡಿಕೆ ಯಜ್ಞ!
ಮುಗೀತು ಕತೆ. ಸಿಎಂ ಸಿಂಹಾಸನವನ್ನ ದಕ್ಕಿಸಿಕೊಳ್ಳೋದು ಅಸಾಧ್ಯ. ಡಿ.ಕೆ.ಶಿವಕುಮಾರ್ ಅವರನ್ನ ನೋಡಿ ಅದೆಷ್ಟು ಕೈ ಕಟ್ಟಾಳುಗಳು ಈ ರೀತಿ ಮಾತನಾಡಿಕೊಂಡಿದ್ದಾರೋ ಏನೋ. ಆದ್ರೆ ಇಟ್ಸ್ ಓವರ್ ಅಂದವರಿಗೆಲ್ಲ ಕನಕಾಧಿಪತಿಯದ್ದು ಆಗಿನಿಂದಲೂ ಒಂದೇ ಉತ್ತರ. ಈಗಲೂ ಅದೇ ಉತ್ತರ. ನಾನು ಮುಗೀತು ಅಂತ ಹೇಳೋ ತನಕ ಪಟ್ಟದ ಯುದ್ದ ಕೊನೆಯಾಗಲ್ಲ. ಸಿಎಂ ಸಿಂಹಾಸನ ಸಿಗೋ ತನಕ ಹೋರಾಟ ನಿಲ್ಲೋದಿಲ್ಲ ಅನ್ನೋ ಸೂಚನೆಯನ್ನ ಮತ್ತೆ ಮತ್ತೆ ಕೊಡ್ತಾನೇ ಇದ್ದಾರೆ ಡಿ.ಕೆ.ಶಿವಕುಮಾರ್. ಯುದ್ಧ ಒಂದೇ ಆದ್ರೂ ಅದನ್ನ ಗೆಲ್ಲೋಕೆ ನೂರು ಅಸ್ತ್ರಗಳು ಬೇಕು. ಅಲ್ಲಿ ಪ್ರಯತ್ನವೂ ಇರ್ಬೇಕು. ಪ್ರಾರ್ಥನೆಯೂ ಇರ್ಬೇಕು. ಇದೀಗ ಪವರ್ ಫುಲ್ ಮಂದಿರವೊಂದ್ರಲ್ಲಿ ತಮ್ಮ ಮನದ ಪ್ರಾರ್ಥನೆಯನ್ನ ಸಲ್ಲಿಸಿದ್ದಾರೆ ಡಿ.ಕೆ.ಶಿವಕುಮಾರ್.
ಇಂಥದ್ದೊಂದು ಮಂದಿರ ಇಡೀ ಜಗತ್ತಲ್ಲೇ ಇನ್ನೊಂದಿಲ್ಲ. ಅಷ್ಟೇ ಅಲ್ಲ, ನಂಬಿಕೆಗಳ ಪ್ರಕಾರ, ಇಲ್ಲಿರುವಷ್ಟು ಶಕ್ತಿ ಮತ್ಯಾವ ದೇವತೆಗೂ ಇಲ್ಲ. ಹೀಗಾಗಿಯೇ, ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಇಲ್ಲಿಗೆ ಬರ್ತಾರೆ. ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಳ್ತಾರೆ. ಕಷ್ಟದಿಂದ ಪಾರಾಗ್ತಾರೆ. ಅಂಥದ್ದೇ ಕ್ಷೇತ್ರಕ್ಕೆ ಧಾವಿಸಿ ಬಂದು, ಸಿಂಹಾಸನದ ಸಿಂಗ್ರಾಮದಲ್ಲಿ ತಮಗೆ ವಿಜಯ ಪ್ರಾಪ್ತಿಯಾಗಲೆಂದು ಬೇಡಿಕೊಂಡಿದ್ದಾರೆ ಕನಕವೀರ ಡಿ.ಕೆ.ಶಿವಕುಮಾರ್. ಅಸ್ಸಾಂನ ಗುವಾಹಟಿ ಹತ್ರ ಇರೋ ನೀಲಾಚಲ ಬೆಟ್ಟದಲ್ಲಿದೆ ಕಾಮಾಕ್ಯ ಅನ್ನೋ ಈ ಚಮತ್ಕಾರಿ, ಶಕ್ತಿಶಾಲಿ ದೇವಸ್ಥಾನ. ಇಲ್ಲಿಗೆ ಸಾಮಾನ್ಯ ಭಕ್ತರು ಮಾತ್ರವೇ ಅಲ್ಲ, ತಂತ್ರಸಾಧಕರು, ಅಘೋರಿಗಳು. ಶಕ್ತಿ ಆರಾಧಕರು ಕೂಡ ಬರ್ತಾರೆ.
ಕಮಲ ಕೋಟೆ ಕೆಡವಲು ಪ್ರಚಂಡ ಶಕ್ತಿಯ ದಾಂಗುಡಿ..!
ಅಸ್ಸಾಂ ವಿಧಾನಸಭಾ ಚುನಾವಣೆಗೆ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷೆಯಾಗಿ ಜವಾಬ್ದಾರಿ ಹೊತ್ತಿದ್ದಾರೆ ಪ್ರಿಯಾಂಕ ಗಾಂಧಿ. ಇವರಿಗೆ ಸಾಥ್ ನೀಡೋದಿಕ್ಕೆ ಅಸ್ಸಾಂನ ಚುನಾವಣಾ ವೀಕ್ಷಕರಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಜವಾಬ್ದಾರಿಯನ್ನ ವಹಿಸಿದೆ ಕಾಂಗ್ರೆಸ್ ಹೈಕಮಾಂಡ್. ರಾಜ್ಯ ಯಾವುದೇ ಆಗಲಿರಲಿ, ಅಲ್ಲಿ ಎಂಥದ್ದೇ ಕಠಿಣ ಪರಿಸ್ಥಿತಿ ಇರಲಿ, ಪಕ್ಷದ ಸಂಘಟನೆ ಅಂತ ಬಂದಾಗ ಡಿ.ಕೆ.ಶಿವಕುಮಾರ್ ನಿಜಕ್ಕೂ ಚತುರ ರಾಜಕಾರಣಿ. ಮನಿ, ಮಸಲ್, ಮಾಸ್ ಹೀಗೆ ಎಲ್ಲಾ ರೀತಿಯ ಶಕ್ತಿಯನ್ನೂ ಒಟ್ಟುಗೂಡಿಸೋ ತಾಕತ್ತು ಕನಕವೀರನಿಗಿದೆ.
ಭಾರತದ ಸಪ್ತ ಸಹೋದರಿಯರ ಬಗ್ಗೆ ನಿಮಗೆ ಗೊತ್ತಲ್ವಾ? ಈಶಾನ್ಯ ದಿಕ್ಕಿನಲ್ಲಿರೋ ಏಳು ರಾಜ್ಯಗಳನ್ನ ಸೆವೆನ್ ಸಿಸ್ಟರ್ಸ್ ಅಂತ ಕರೆಯೋದು. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ತ್ರಿಪುರ.. ಸದ್ಯ ಈ ಏಳು ರಾಜ್ಯಗಳಲ್ಲಿ ಒಂದೇ ಒಂದು ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಆದ್ರೆ ಏಳು ರಾಜ್ಯಗಳಲ್ಲಿ ಅಸ್ಸಾಂ ರಾಜ್ಯವನ್ನ ಗೆದ್ದು ಬಿಟ್ರೆ, ಅಲ್ಲಿ ಕಾಂಗ್ರೆಸ್ ಝಂಡವನ್ನ ಹಾರಿಸಿಬಿಟ್ರೆ, ಅದ್ರ ಎಫೆಕ್ಟ್ ಸುತ್ತಲಿನ ಆರು ರಾಜ್ಯವನ್ನೂ ತಲುಪುತ್ತೆ ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ. ಆದ್ರಿಂದಲೇ ಈ ಕಠಿಣ ಕೆಲಸಕ್ಕೆ ಕಟ್ಟಾಳುಗಳೇ ಎಂಟ್ರಿ ಕೊಟ್ಟಿರೋದು.
ಈ ಮೂಲಕ ಅಸ್ಸಾಂ ಚುನಾವಣೆ ಮುಗಿಯೋ ತನಕ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯಿಲ್ಲ ಅನ್ನೋ ಸೂಚನೆಯನ್ನ ಕಾಂಗ್ರೆಸ್ ಹೈಕಮಾಂಡ್ ಪರೋಕ್ಷವಾಗಿ ರವಾನಿಸಿದಂತಿದೆ. ಆದ್ರೆ ಯಾವ ಜವಾಬ್ದಾರಿಯನ್ನ ವಹಿಸಿ ಇಂದ್ರಪ್ರಸ್ಥದ ನಾಯಕರು ಅಧಿಕಾರ ಹಂಚಿಕೆಯನ್ನ ಮುಂದೂಡೋ ಯತ್ನ ಮಾಡಿದ್ದಾರೋ ಅದೇ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿರ್ವಹಿಸಿ ಸಿಎಂ ಪಟ್ಟಕ್ಕೆ ಬಿಗಿ ಪಟ್ಟು ಹಾಕೋದು ಡಿಕೆ ಲೆಕ್ಕಾಚಾರ. ಆದ್ರೆ ಅದು ಅಷ್ಟು ಸುಲಭವಾ.? ಅಸ್ಸಾಂನಲ್ಲಿ ಕಮಲ ಕೋಟೆಯನ್ನ ಕೆಡವೋದು ಸಾಧ್ಯವಾ.?
ಕಾಮಾಕ್ಯ ದೇಗುಲ ಪೂಜೆ ಬಳಿಕ ಪ್ರಿಯಾಂಕಾ ಗಾಂಧಿ ಜೊತೆಗೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಅದ್ರಲ್ಲಿಯೂ ಪ್ರಮುಖವಾಗಿ ಸಿಎಂ ಬಣದ ಶಾಸಕರ ವಿದೇಶ ಪ್ರವಾಸ, ಹಾಗೂ ಅವರ ಹೇಳಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಡಿಕೆಶಿ ಬಣವನ್ನ ಬೀದಿ ನಾಯಿಗೆ ಹೋಲಿಸಿದ ಸಚಿವ ಮಹದೇವಪ್ಪನವರ ಹೇಳಿಕೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇನ್ನು, ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಮಾತಿನ ಬಗ್ಗೆಯೂ ಪ್ರಿಯಾಂಕಾ ಗಾಂಧಿಯವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಈ ಎಲ್ಲಾ ವಿಚಾರಗಳನ್ನ ರಾಹುಲ್ ಗಮನಕ್ಕೆ ತರಲು ಡಿ.ಕೆ.ಶಿವಕುಮಾರ್ ಅವರ ಮನವಿ ಮಾಡಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಸಿಂಹಾಸನಕ್ಕೆ ಶತಪ್ರಯತ್ನ ನಡೆಸ್ತಾಯಿರೋ ಹೊತ್ತಲ್ಲಿ, ಅವರ ಕೆಪಿಸಿಸಿ ಪಟ್ಟಕ್ಕೇನೆ ಕಂಟಕ ಎದುರಾಗೋ ಸೂಚನೆಗಳು ಗೋಚರಿಸ್ತಾಯಿವೆ. ನೀವು ಸಿಎಂ ಪಟ್ಟಕ್ಕೆ ಪಟ್ಟು ಹಾಕ್ತೀರಾ? ನಾವು ನಿಮ್ಮ ಅಧ್ಯಕ್ಷ ಗಾದಿಗೆ ಮೇಲೆ ಕಣ್ಣು ಹಾಕ್ತೀವಿ. ಅದನ್ನ ಪಡೆದುಕೊಳ್ಳೋಕೆ ಚಕ್ರವ್ಯೂಹವನ್ನ ಹೆಣಿತೀವಿ. ಇಂದ್ರಪ್ರಸ್ಥದಲ್ಲಿಯೇ ನಾವು ನಮ್ಮ ಚದುರಂಗದಾಟವನ್ನ ಶುರು ಮಾಡ್ತೀವಿ ಅಂತ್ಹೇಳಿ ರಾಷ್ಟ್ರ ರಾಜಧಾನಿಗೆ ಬಲಿಷ್ಠ ನಾಯಕರೊಬ್ಬರು ದಂಡು ಕಟ್ಟಿ ದಾಂಗುಡಿಯಿಟ್ಟಂತಿದೆ.
ಸತೀಶ್ ಜಾರಕಿಹೊಳಿ ಬೆಳಗಾವಿಯ ಹಳೇ ಪೈಲ್ವಾನ್. ವಾಲ್ಮೀಕಿ ಸಮುದಾಯದ ಶಕ್ತಿಶಾಲಿ ನಾಯಕ. ಸೈಲೆಂಟ್ ಆಗಿಯೇ ದಾಳಗಳನ್ನ ಉರುಳಿಸಿ ಗುರಿ ಮುಟ್ಟೊ ತಾಕತ್ತು ಹೊಂದಿರೋ ನಿಪುಣ. ಇಂಥಹ ಸತೀಶ್ ಜಾರಕಿಹೊಳಿಯವರು ಕೈ ಕೋಟೆಯೊಳಗೆ ಹೊಸ ಆಟ ಆರಂಭಿಸಿದ್ರಾ? ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಸಿಎಂ ಸಿಂಹಾಸನಕ್ಕಾಗಿ ಸಮರ ನಡೆಯುತ್ತಿರೋ ಹೊತ್ತಲ್ಲಿ, ಮತ್ತೊಂದು ಕದನಕ್ಕೆ ಕಿಡಿ ಹೊತ್ತಿಸಿದ್ರಾ? ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಪಿಸಿಸಿ ಸ್ಥಾನಕ್ಕೆ ಪಟ್ಟು ಹಾಕಿದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ
ಈ ಅವಧಿಗೆ ನಾನು ಸಿಎಂ ಆಕಾಂಕ್ಷಿಯಲ್ಲ. 2028ಕ್ಕೆ ನಾನು ಆಕಾಂಕ್ಷಿ ಅಂತ್ಹೇಳಿ ಬಹಿರಂಗವಾಗಿಯೇ ಸತೀಶ್ ಜಾರಕಿಹೊಳಿ ಹೇಳಿಕೊಂಡಾಗಿದೆ. ಅದಕ್ಕವರು ತಯಾರಿಯನ್ನೂ ಶುರು ಮಾಡಿದಂತಿದೆ. 2028ರಲ್ಲಿ ಸಿಎಂ ಆಗೋ ಆಸೆಯನ್ನ ಈಡೇರಿಸಕೊಳ್ಳಬೇಕು ಅಂದ್ರೆ ಅದಕ್ಕೆ ಮೊದಲ ಮೆಟ್ಟಿಲಿನ ರೀತಿ ಕೆಪಿಸಿಸಿ ಪಟ್ಟದ ಮೇಲೆ ಕಣ್ಣಿಟ್ಟಂತಿದೆ. ಅಲ್ಲಾ, 2028ಕ್ಕೆ ಸಿಎಂ ಆಗೋದಿಕ್ಕೂ, ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಪಟ್ಟು ಹಾಕೋಕು ಏನ್ ಸಂಬಂಧ ಅಂತೀರಾ? ಇದರ ಇಂಟ್ರೆಸ್ಟಿಂಗ್ ಡೀಟೈಲ್ಸ್ ವಿಡಿಯೋದಲ್ಲಿದೆ ನೋಡಿ..