ಅಪ್ಪನೇ ಅಮ್ನನನ್ನು ಕೊಂದಿದ್ದಾರೆ; ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಪತ್ನಿಯನ್ನೇ ಮರ್ಡರ್ ಮಾಡಿದ ಪತಿರಾಯ! | Bengaluru Bhuvaneshwari Murder Case Pistol Source Investigation Sat

ಅಪ್ಪನೇ ಅಮ್ನನನ್ನು ಕೊಂದಿದ್ದಾರೆ; ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಪತ್ನಿಯನ್ನೇ ಮರ್ಡರ್ ಮಾಡಿದ ಪತಿರಾಯ! | Bengaluru Bhuvaneshwari Murder Case Pistol Source Investigation Sat



ಅಪ್ಪನೇ ಅಮ್ನನನ್ನು ಕೊಂದಿದ್ದಾರೆ; ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಪತ್ನಿಯನ್ನೇ ಮರ್ಡರ್ ಮಾಡಿದ ಪತಿರಾಯ! | Bengaluru Bhuvaneshwari Murder Case Pistol Source Investigation Sat

ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಪತ್ನಿ ಭುವನೇಶ್ವರಿಯನ್ನು ಪತಿ ಬಾಲ ಮುರುಗನ್ ಗುಂಡಿಕ್ಕಿ ಕೊಂದಿದ್ದಾನೆ. ಈ ಪ್ರಕರಣದಲ್ಲಿ, ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಅಕ್ರಮವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಮಾಗಡಿ ರಸ್ತೆ ಪೊಲೀಸರು ಅದರ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಡಿ.24): ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡು ಪತ್ನಿ ಭುವನೇಶ್ವರಿ ಅವರನ್ನು ಪತಿ ಬಾಲ ಮುರುಗನ್ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ಪತಿಗೆ ಎಲ್ಲಿಂದ ಸಿಕ್ಕಿತು? ಅದು ಲೈಸೆನ್ಸ್ ಹೊಂದಿದೆಯೇ ಅಥವಾ ಅಕ್ರಮವಾಗಿ ಖರೀದಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಈಗ ಆಳವಾದ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭುವನೇಶ್ವರಿ ಅವರು ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಬಾಲ ಮುರುಗನ್, ಪತ್ನಿಯನ್ನೇ ಮುಗಿಸಲು ಸಂಚು ರೂಪಿಸಿದ್ದನು. ಕಳೆದ ದಿನ ಭುವನೇಶ್ವರಿ ಅವರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಕ್ರಮ ಪಿಸ್ತೂಲ್ ಶಂಕೆ

ಬಾಲ ಮುರುಗನ್ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಪರವಾನಗಿ (License) ಹೊಂದಿಲ್ಲ ಎಂಬ ಅನುಮಾನಗಳು ವ್ಯಕ್ತವಾಗಿವೆ. ಲೈಸೆನ್ಸ್ ಪಡೆಯಲು ಕಠಿಣ ನಿಯಮಗಳಿರುವುದರಿಂದ, ಆರೋಪಿಯು ಭೂಗತ ಜಗತ್ತಿನ ಸಂಪರ್ಕದಿಂದ ಅಥವಾ ಅಕ್ರಮ ವ್ಯಾಪಾರಿಗಳಿಂದ ಈ ಆಯುಧವನ್ನು ಖರೀದಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಆಯುಧವು ಬೆಂಗಳೂರಿನಲ್ಲಿ ಸಿಕ್ಕಿದ್ದೇ ಅಥವಾ ಹೊರರಾಜ್ಯದಿಂದ ತರಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ

ಕಳೆದ ರಾತ್ರಿಯಿಂದಲೂ ಬಾಲ ಮುರುಗನ್‌ನನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿದೆ. ಕೊಲೆಯ ಸಂಚು ರೂಪಿಸಿದ ದಿನದಿಂದ ಹಿಡಿದು, ಆಯುಧ ಪೂರೈಸಿದವರ ವರೆಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. “ಆರೋಪಿಯು ಬಳಸಿದ ಆಯುಧ ಅಕ್ರಮ ಎಂದು ಸಾಬೀತಾದಲ್ಲಿ, ಆಯುಧ ಕಾಯ್ದೆಯಡಿ (Arms Act) ಮತ್ತಷ್ಟು ಕಠಿಣ ಸೆಕ್ಷನ್‌ಗಳನ್ನು ಹಾಕಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಸ್ಥರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತಿದೆ.

ಸಹೋದರನ ಕಣ್ಣೀರು

ಮೃತ ಭುವನೇಶ್ವರಿ ಸಹೋದರ ಪ್ರಕಾಶ್ ಮಾತನಾಡಿ, ‘ಬಾಲಮುರುಗನ್ ಕೆಲಸ ಬಿಟ್ಟು ಮನೆಯಲ್ಲೇ ಕುಳಿತಿದ್ದ. ನನ್ನ ತಂಗಿಯೇ ದುಡಿದು ಮನೆ ನಿಭಾಯಿಸುತ್ತಿದ್ದಳು. ಆದರೂ ಆಕೆಯ ಶೀಲ ಶಂಕಿಸಿ ಸಣ್ಣ ಮಕ್ಕಳ ಜೊತೆ ಮಾತನಾಡಿದರೂ ಜಗಳ ಮಾಡುತ್ತಿದ್ದ. ಈ ಹಿಂದೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ತಂಗಿ ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ರೊಚ್ಚಿಗೆದ್ದು, ಮೊದಲೇ ಪ್ಲಾನ್ ಮಾಡಿ ಗನ್ ಖರೀದಿಸಿ ಈ ಕೃತ್ಯ ಎಸಗಿದ್ದಾನೆ. ಈಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ, ನಮಗೆ ನ್ಯಾಯ ಬೇಕು’ ಎಂದು ಕಣ್ಣೀರಿಟ್ಟಿದ್ದಾರೆ.

ಅಪ್ಪನೇ ಅಮ್ಮನನ್ನು ಕೊಂದ

ಪುತ್ರನ ಸಾಕ್ಷಿ ಘಟನೆಯ ಬಗ್ಗೆ ಭುವನೇಶ್ವರಿ ಪುತ್ರ ನಿತೀಶ್ ನಿರಂಜನ್ ಹೇಳಿಕೆ ನೀಡಿದ್ದು, ‘ನಮ್ಮ ತಂದೆ ಯಾವಾಗಲೂ ಅಮ್ಮನ ಜೊತೆ ಜಗಳ ಆಡಿ ಹೊಡೆಯುತ್ತಿದ್ದರು. ಅಮ್ಮನ ಮೇಲೆ ಅನುಮಾನ ಪಡುತ್ತಿದ್ದರು. ನಿನ್ನೆ ನಾವು ಶಾಲೆಯಿಂದ ಬಂದಾಗ ಮನೆಯ ಮಾಲೀಕರ ಬಳಿ ಇದ್ದೆವು. ಆಗ ಅಮ್ಮನ ಕೊಲೆಯಾಗಿದೆ ಎಂದು ಕರೆ ಬಂತು. ಅಮ್ಮನನ್ನು ಅಪ್ಪನೇ ಕೊಲೆ ಮಾಡಿದ್ದಾರೆ’ ಎಂದು ಭೀಕರ ಘಟನೆಯನ್ನು ನೆನೆದಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅಕ್ರಮ ಆಯುಧ ಹೊಂದಿದ ಪ್ರಕರಣದ ಅಡಿಯಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *