ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜುಗೆ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ವಜಾ. ಪ್ರಮುಖ ಆರೋಪಿ ತನಗೆ ಗೊತ್ತಿಲ್ಲ ಎಂದು ಶಾಸಕರು ಹೇಳಿದ್ದರೂ, ಅವರ ಕಾಲ್ ರೆಕಾರ್ಡ್ಗಳು ಬೇರೆ ಕಥೆ ಹೇಳುತ್ತಿರುವುದನ್ನು ನ್ಯಾಯಾಲಯ ಉಲ್ಲೇಖಿಸಿ, ವಿಚಾರಣೆ ಎದುರಿಸುವಂತೆ ಸೂಚಿಸಿದೆ.
ನವದೆಹಲಿ (ಫೆ.13): ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕೆ.ಆರ್.ಪುರ ಬಿಜೆಪಿ ಶಾಸಕ ಬೈರತಿ ಬಸವರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
‘ನಾವು ನಿಮಗೆ (ಬೈರತಿ) ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದ್ದೆವು. ಆದರೆ ನೀವು ಹಾರಿಕೆಯ ನಿಲುವು ತಾಳಿದ್ದೀರಿ. ಪ್ರಕರಣದ ಪ್ರಮುಖ ಆರೋಪಿ ಗೊತ್ತೇ ಇಲ್ಲ ಎಂದು ಹೇಳಿದ್ದೀರಿ. ಆದರೆ ನಿಮ್ಮ ಕಾಲ್ ರೆಕಾರ್ಡ್ಗಳು ಬೇರೆಯದನ್ನೇ ತೋರಿಸುತ್ತಿವೆ’ ಎಂದು ನ್ಯಾಯಪೀಠ ಹೇಳಿತು.
ಇದನ್ನೂ ಓದಿ: ₹7.11 Crore Robbery Case in bengaluru: ಸಿದ್ದಾಪುರ ATM ದರೋಡೆ ಪ್ರಕರಣ; ಪೊಲೀಸ್ ಪೇದೆಯೇ ಕಿಂಗ್ಪಿನ್!
ನೀವೊಬ್ಬ ಸಾರ್ವನಿಕ ಸೇವಕರಾಗಿರುವುದರಿಂದ ವಿಚಾರಣೆ ಎದುರಿಸುವ ಧೈರ್ಯ ನಿಮಗೆ ಇರಬೇಕು. ಹೀಗಾಗಿ ನಿರೀಕ್ಷಣಾ ಜಾಮೀನು ಬದಲಿಗೆ, ಮಾಮೂಲಿ ಬೇಲ್ ಅರ್ಜಿಯನ್ನು ಸಲ್ಲಿಸಿ ಎಂದು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.
ಈ ವೇಳೆ ಬೈರತಿ ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿ, ಆರೋಪಿಯಾಗಿರುವ ಜಗದೀಶ್ ಯಾರೆಂದು ತಮ್ಮ ಕಕ್ಷಿದಾರನಿಗೆ ಗೊತ್ತಿಲ್ಲ ಎಂದು ವಾದಿಸಿದರು. ಜಗದೀಶ್ ಜತೆ ಬೈರತಿ ಅವರು ಸಂಪರ್ಕದಲ್ಲಿರುವುದಕ್ಕೆ ಕಾಲ್ ರೆಕಾರ್ಡ್ಗಳು ಇವೆ ಎಂದು ಕೋರ್ಟ್ ಹೇಳಿತು.
