
ತಮ್ಮ ಮದುವೆಗೆ ಯಾಕೆ ಇನ್ವೈಟ್ ಮಾಡಿಲ್ಲ ಎಂದು ಕೇಳಿದ ಪುಟ್ಟ ಅಭಿಮಾನಿಯೊಬ್ಬಳ ವಿಡಿಯೋಗೆ ನಟ ವಿಜಯ್ ದೇವರಕೊಂಡ ಮನಮುಟ್ಟುವಂತೆ ಪ್ರತಿಕ್ರಿಯಿಸಿದ್ದಾರೆ. ಆ ‘ಸ್ವೀಟಿ’ಯನ್ನು ಮನೆಗೆ ಊಟಕ್ಕೆ ಆಹ್ವಾನಿಸಿ, ಇಷ್ಟದ ಊಟ, ಸಿಹಿತಿಂಡಿ ಯಾವುದು ಎಂದು ಕೇಳಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಜೊತೆಗಿನ ತಮ್ಮ ಮದುವೆಗೆ ಯಾಕೆ ನನ್ನನ್ನು ಕರೆಯಲಿಲ್ಲ ಅಂತ ಮುದ್ದಾಗಿ ಪ್ರಶ್ನಿಸಿದ ಪುಟ್ಟ ಅಭಿಮಾನಿಯೊಬ್ಬಳಿಗೆ ನಟ ವಿಜಯ್ ದೇವರಕೊಂಡ ಮನಮುಟ್ಟುವ ಉತ್ತರ ನೀಡಿ ಇಂಟರ್ನೆಟ್ನಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ಈ ತೆಲುಗು ಸ್ಟಾರ್ ಜೋಡಿ ಫೆಬ್ರವರಿ 26 ರಂದು ಉದಯಪುರದಲ್ಲಿ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ನಂತರ, ಹೈದರಾಬಾದ್ನಲ್ಲಿ ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ಗಣ್ಯರಿಗಾಗಿ ಭರ್ಜರಿ ರಿಸೆಪ್ಷನ್ ಕೂಡಾ ಏರ್ಪಡಿಸಿದ್ದರು.
ಈ ಮದುವೆ ಸಂಭ್ರಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೀತಿತ್ತು. ಇದೇ ಹೊತ್ತಲ್ಲಿ, ಪುಟ್ಟ ಅಭಿಮಾನಿಯೊಬ್ಬಳ ಸರಳ ಪ್ರಶ್ನೆ ಎಲ್ಲರ ಗಮನ ಸೆಳೆದಿದೆ. ದೇವರಕೊಂಡ ಅವರನ್ನು ಉದ್ದೇಶಿಸಿ ವೈರಲ್ ಆದ ಕಾಮೆಂಟ್ನಲ್ಲಿ, ಆ ಹುಡುಗಿ, ‘ನಾನೂ ನಿಮ್ಮ ಫ್ಯಾನ್ ಅಲ್ವಾ? ನಮ್ಮ ಕಥೆ ಏನು?’ ಎಂದು ಕೇಳಿದ್ದಳು. ಈ ಮೆಸೇಜ್ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿತ್ತು.
ಈ ವಿಡಿಯೋವನ್ನು ಗಮನಿಸಿದ ದೇವರಕೊಂಡ, ಮುದ್ದಾದ ಉತ್ತರ ನೀಡಿದ್ದಾರೆ. ‘ಸ್ವೀಟಿ, ನಿನ್ನನ್ನು ಮನೆಗೆ ಊಟಕ್ಕೆ ಕರೀತಿದ್ದೀನಿ. ನಿನಗೆ ಇಷ್ಟವಾದ ಊಟ, ಸ್ವೀಟ್ಸ್ ಯಾವುದು ಅಂತ ಹೇಳು. ಎಲ್ಲವನ್ನೂ ಮನೆಯಲ್ಲೇ ರೆಡಿ ಮಾಡಿಸ್ತೀನಿ, ನಾವು ಒಟ್ಟಿಗೆ ಚೆನ್ನಾಗಿ ಊಟ ಮಾಡೋಣ’ ಅಂತ ರಿಪ್ಲೈ ಮಾಡಿದ್ದಾರೆ. ಈ ಲಿಂಕ್ ನೋಡಿ
ರಶ್ಮಿಕಾ ಕೂಡಾ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ನವಜೋಡಿ, ಮದುವೆಯ ನಂತರ ಹಲವು ನಗರಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಅಭಿಮಾನಿಗಳಿಗೆ ಸ್ವೀಟ್ ಬಾಕ್ಸ್ಗಳನ್ನು ಹಂಚಿ ಸಂಭ್ರಮಿಸಿದ್ದರು.
ಮದುವೆ ನಂತರ ಗಣ್ಯರಿಂದ ಆಶೀರ್ವಾದ
ಇದೇ ವೇಳೆ, ಮದುವೆ ಸಂಭ್ರಮ ಮುಂದುವರಿದಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದೇವರಕೊಂಡ ನಿವಾಸಕ್ಕೆ ಭೇಟಿ ನೀಡಿ ನವದಂಪತಿಯನ್ನು ಆಶೀರ್ವದಿಸಿದ್ದಾರೆ.
ಇನ್ನು, ರಶ್ಮಿಕಾ ಮಂದಣ್ಣ ಮದುವೆಗೂ ಮುನ್ನ ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಫೋಟೋಗಳನ್ನು ಪೋಸ್ಟ್ ಮಾಡಿ, ಅವರೊಂದಿಗೆ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಚರ್ಚಿಸಿದ್ದು ವಿಶೇಷ ಕ್ಷಣ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿಯವರು ತಮ್ಮ ಪೋಷಕರಿಗೆ ಬರೆದ ಪತ್ರವನ್ನು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಚಿತ್ರಗಳನ್ನು ಹಂಚಿಕೊಂಡಿರುವ ರಶ್ಮಿಕಾ, ಅವರು ಉಡುಗೊರೆಯಾಗಿ ನೀಡಿದ ಗಣೇಶನ ವಿಗ್ರಹ ಈಗ ತಮ್ಮ ಮನೆಯಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಧನ್ಯವಾದ ತಿಳಿಸಿದ್ದಾರೆ.