
kothalavadi movie: ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಣ ಬಂದಿಲ್ಲ ಎಂದು ಪುಷ್ಪ ಅರುಣ್ ಕುಮಾರ್ ಸಿನಿಮಾ ತಂಡದ ವಿರುದ್ಧ ನಟ ಮಹೇಶ್ ಗುರು ಆರೋಪದ ಬಳಿಕ, ನಟಿ ಸ್ವರ್ಣ ತಾಯಿ ಪೇಮೆಂಟ್ ಕೊಡಿ ಎಂದು ನಿರ್ದೇಶಕರ ಜೊತೆ ಗೋಗರೆದ ಆಡಿಯೋ ವೈರಲ್ ಆಗ್ತಿದೆ. ನಿರ್ದೇಶಕರು ಏನು ಹೇಳಿದರು?
ನಟ ಮಹೇಶ್ ಗುರು ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೊತ್ತಲವಾಡಿ’ ಸಿನಿಮಾದಲ್ಲಿ ಸಂಭಾವನೆ ಕೊಟ್ಟಿಲ್ಲ ಎಂದು ನಟ ಮಹೇಶ್ ಗುರು ಅವರು ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ಇದಾದ ಬೆನ್ನಲ್ಲೇ ನಿರ್ದೇಶಕನ ಬಳಿ ಸಹ ನಟಿ ಸ್ವರ್ಣ ತಾಯಿ ಗೋಳಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.
ಮಗಳ ಸಂಭಾವನೆ ಕೊಡಿ ಎಂದು ನಿರ್ದೇಶಕನ ಬಳಿ ನಟಿ ಸ್ವರ್ಣ ಅಮ್ಮ ಗೋಗರೆದಿರುವ ಆಡಿಯೋಗ ಈಗ ವೈರಲ್ ಆಗ್ತಿದೆ. ನಟಿ ಸ್ವರ್ಣ ಅವರ ಅಮ್ಮ ಹಾಗೂ ನಿರ್ದೇಶಕನ ಜೊತೆಗಿನ ಆಡಿಯೋ ಸಂಭಾಷಣೆ ಏಷ್ಯಾ ನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ.
ಸ್ವರ್ಣ ತಾಯಿ ಏನಂದ್ರು?
“ನಿಮಗೆ ಕೆಲಸ ಮಾಡಿದಕ್ಕೆ ಪೇಮೆಂಟ್ ಕೋಡೊದಕ್ಕೆ ಆಗಲ್ವಾ? ನನ್ನ ಮಗಳು ನಿಮ್ಮನ್ನು ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ. ನನ್ನ ಮಗಳಿಗೆ ಅಪ್ಪ ಇಲ್ಲ, ನಾನೇ ಅವಳನ್ನು ನೋಡಿಕೊಳ್ಳಬೇಕು. ನನಗೆ ಗಂಡ ಇಲ್ಲ, ನಾನು ಅವಳನ್ನು ನಂಬಿ ಕೊಂಡಿದ್ದೀನಿ. ಬಡವರ ಮಕ್ಕಳ ಹಣ ಕೊಡದೆ ಉದ್ಧಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿದ್ದಾಳೆ. ನಾನು ಸಂಘಗಳಿಗೆ ಹಣ ಕಟ್ಟಬೇಕು, ಮಗಳು ಬೆಂಗಳೂರಿನಿಂದ ಬರುತ್ತಾಳೆ ಅಂತ ಹೇಳಿಕೊಂಡು ಇದ್ದೆ. ಈಗ ನನ್ನ ಮಗಳು ಹಣ ಕೊಟ್ಟಿಲ್ಲ ಅಂದರೆ ನಾನು ಭಿಕ್ಷೆ ಬೇಡಬೇಕಾ?” ಎಂದು ನಟಿ ಸ್ವರ್ಣ ತಾಯಿ ಗೋಗರೆದಿದ್ದಾಳೆ.
ಸ್ವರ್ಣ ತಾಯಿಗೆ ಶ್ರೀರಾಜ್ ಹೇಳಿದ್ದೇನು?
ನಿರ್ದೇಶಕ ಶ್ರೀ ರಾಜ್ ಜೊತೆ ನಟಿಯ ಅಮ್ಮ ತಮ್ಮ ನೋವು ತೋಡಿಕೊಂಡಿದ್ದಾರೆ. ಆಗ ಶ್ರೀ ರಾಜ್ ಅವರು “ನಾನು ಸ್ವರ್ಣ ಜೊತೆ ಕೆಲಸ ಮಾಡಿದ್ದೇನೆ, ಅವರಿಗೆ ಫೋನ್ ಕೊಡಿ, ಮಾತನಾಡ್ತೀನಿ, ನಿಮ್ಮ ಜೊತೆ ನಾನು ಮಾತನಾಡೋದಿಲ್ಲ. ಸ್ವರ್ಣ ಕೆಲಸ ಮಾಡಿದ್ದಕ್ಕೆ ಅವರ ಜೊತೆ ಮಾತಾಡ್ತೀನಿ, ಇಲ್ಲ ಅಂದ್ರೆ ಫೋನ್ ಕಟ್ ಮಾಡ್ತೀನಿ, ನಿಮಗೆ ಮಾತನಾಡುವ ಯಾವ ಹಕ್ಕು ಇಲ್ಲ” ಎಂದು ಹೇಳಿದ್ದಾರೆ.
ಶ್ರೀರಾಜ್ ಸ್ಪಷ್ಟನೆ ಏನು?
ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಶ್ರೀರಾಜ್ ಅವರು “ಮಹೇಶ್ ಗುರುಗೆ ನಾನು ಅವಕಾಶ ಕೊಟ್ಟಿದ್ದು ನಿಜ. ಅವರೇ ಅವಕಾಶವನ್ನು ಕೇಳಿಕೊಂಡು ಬಂದ್ರು, ಈ ಸಿನಿಮಾದಲ್ಲೂ ಚಾನ್ಸ್ ಕೊಟ್ಟೆ. ಅವರಿಗೆ ಏನೆಲ್ಲಾ ಪೇಮೆಂಟ್ ಹೋಗಬೇಕೋ ಎಲ್ಲಾ ಹೋಗಿದೆ. ಹಣ ಕೊಟ್ಟಿದ್ದಕ್ಕೆ ಎಲ್ಲಾ ದಾಖಲೆ ನನ್ನ ಬಳಿ ಇದೆ. ಇದರ ಹಿಂದೆ ಬೇರೆ ಹುನ್ನಾರ ಇದೆ ಅನ್ನಿಸುತ್ತೆ. ಇವರಿಗೆಲ್ಲ ಪಬ್ಲಿಸಿಟಿ ಬೇಕು, ಅದಕ್ಕೆ ಹೇಗೆ ಮಾಡುತ್ತಾರೆ. ಮ್ಯಾನೇಜರ್ ಮೂಲಕ ಹಣ ಕೊಟ್ಟಾಗಿದೆ. ನಾನು ಹಣ ಕೊಟ್ಟಿದ್ದಕ್ಕೆ ಪುಷ್ಪ ಅವರಿಗೂ ಮಾಹಿತಿ ಕೊಟ್ಟಿದ್ದೇವೆ. ನಾವು ಇದರ ವಿರುದ್ದ ಪೊಲೀಸ್ ಕಂಪ್ಲೇಂಟ್ ಕೊಡುತ್ತೇವೆ” ಎಂದು ಹೇಳಿದ್ದಾರೆ.
ಪೃಥ್ವಿ ಅಂಬಾರ್, ಕಾವ್ಯ ಶೈವ ನಟನೆಯ ‘ಕೊತ್ತಲವಾಡಿ’ ಸಿನಿಮಾಕ್ಕೆ ಪುಷ್ಪ ಅರುಣ್ ಕುಮಾರ್ ಅವರು ಹಣ ಹೂಡಿದ್ದರು. ಆಗಸ್ಟ್ 1ರಂದು ಈ ಸಿನಿಮಾ ರಿಲೀಸ್ ಆಗಿ, ಈಗ ಒಟಿಟಿಗೆ ಬಂದಿದೆ.