
forest demolition Using silent cutter: ಇಲ್ಲೊಂದು ಕಡೆ 10 ಸಾವಿರಕ್ಕೂ ಅಧಿಕ ಮರಗಳನ್ನು ರಾತ್ರೋರಾತ್ರಿ ಕಾಡಿದು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ದೂರು ನೀಡಿದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ನನ್ನೇ ಇಲಾಖೆ ಅಮಾನತು ಮಾಡಿದಂತಹ ಘಟನೆ ನಡೆದಿದೆ.
ಸೈಲೆಂಟ್ ಕಟ್ಟರ್ ಬಳಸಿ 10 ಸಾವಿರಕ್ಕೂ ಅಧಿಕ ಮರಗಳ ಮರಣಹೋಮ
ಹರ್ಯಾಣದ ಪಂಚಕುಲದಲ್ಲಿ 10 ಸಾವಿರಕ್ಕೂ ಅಧಿಕ ಮರಗಳನ್ನು ರಾತ್ರೋರಾತ್ರಿ ಕಾಡಿದು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ದೂರು ನೀಡಿದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ನನ್ನೇ ಇಲಾಖೆ ಅಮಾನತು ಮಾಡಿದಂತಹ ಘಟನೆ ನಡೆದಿದೆ. ಪಂಚಕುಲಾದ ಖೈರ್ ಅರಣ್ಯ ಪ್ರದೇಶದಲ್ಲಿ10 ಸಾವಿರಕ್ಕೂ ಅಧಿಕ ಮರಗಳನ್ನು ಯಾರಿಗೂ ಅನುಮಾನ ಬರದಂತೆ ರಾತ್ರೋರಾತ್ರಿ ಸೈಲೆಂಟ್ ಕಟ್ಟರ್ ಬಳಸಿ ಕಡಿದು ನೆಲಕ್ಕುರುಳಿಸಲಾಗಿದೆ. ಈ ಖೈರ್(ಖೈರ್ ಮರಗಳೆಂದರೆ ಕನ್ನಡದಲ್ಲಿ ಬಹುಶಃ ಬಾಗೆ ಮರ ಅಥವಾ ಸೀಗೆ ಮರ) ಮರಗಳು ಬಹಳ ದುಬಾರಿ ಮರಗಳಾಗಿದ್ದು, ಅವುಗಳ ಸಾಗಣೆಯ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂಬ ಕಾರಣಕ್ಕೆ ವಾಹನಗಳನ್ನು ಬಳಸದೇ ಒಂಟೆಯ ಮೂಲಕ ಸಾಗಿಸಲಾಗಿದೆ. ಅಲ್ಲದೇ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಅವುಗಳ ಉಳಿದ ಕಾಂಡಗಳನ್ನು ಬೆಂಕಿಯಿಂದ ಸುಡಲಾಗಿದೆ.
ದೂರು ನೀಡಿದ್ದಕ್ಕೆ ಫಾರೆಸ್ಟ್ ಗಾರ್ಡ್ಗೆ ಅಮಾನತಿನ ಶಿಕ್ಷೆ
ಈ ವಿಚಾರ ಅರಣ್ಯ ಇಲಾಖೆಯ ಗಾರ್ಡ್ ಆದ ವಿಜಯ್ಕುಮಾರ್ ಅವರ ಗಮನಕ್ಕೆ ಬಂದಿದೆ. ಅವರು ಹರ್ಯಾಣದ ಅರಣ್ಯ ಸಚಿವರಿಗೆ ಈ ಕಾಡಿನ ನಾಶ ಹಾಗೂ ಮರಗಳ ಕಟಾವ್ ಮಾಡಿದ ಬಗ್ಗೆ ದೂರು ನೀಡಿದ್ದಾರೆ. ಆದರೆ ಅರಣ್ಯ ಇಲಾಖೆಯ ಸಚಿವರು ಆರೋಪಿಗಳನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವ ಬದಲು ದೂರು ನೀಡಿದ ಫಾರೆಸ್ಟ್ ಗಾರ್ಡ್ ವಿಜಯ್ಕುಮಾರ್ ಅವರನ್ನೇ ಅಮಾನತು ಮಾಡಿದ್ದಾರೆ. ಇದರಿಂದ ನೊಂದ ವಿಜಯ್ಕುಮಾರ್ ಅವರು ಒಂಟಿಯಾಗಿ ಪ್ರತಿಭಟನೆ ಶುರು ಮಾಡಿದ್ದಾರೆ. ಹರ್ಯಾಣದಲ್ಲಿ ಮೊದಲೇ ಅರಣ್ಯ ಪ್ರದೇಶ ತೀರಾ ಕಡಿಮೆ ಇದ್ದು, ಇಡೀ ರಾಜ್ಯದಲ್ಲಿ ಕೇವಲ 3.25 ಶೇಕಡಾದಷ್ಟು ಮಾತ್ರ ಅರಣ್ಯವಿದೆ. ಹೀಗಿದ್ದು, ಅಲ್ಲಿನ ಅರಣ್ಯ ಇಲಾಖೆ ಹಾಗೂ ಸಚಿವರು ಹೀಗೆ ಕಾಡನ್ನು ನಾಶ ಮಾಡಿದ ಕಾಡುಗಳ್ಳರನ್ನು ಪತ್ತೆ ಮಾಡುವ ಬದಲು ದೂರು ನೀಡಿದ ಫಾರೆಸ್ಟ್ ಗಾರ್ಡ್ನನ್ನೇ ಅಮಾನತು ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗ್ಯಾಸ್ ಖಾಲಿ: ವಾಟರ್ ಹೀಟರ್ ಬಳಸಿ ಸಾಂಬಾರ್ ಮಾಡಿದ ಯುವಕ: ವೀಡಿಯೋ ಭಾರಿ ವೈರಲ್
ಫಾರೆಸ್ಟ್ ಗಾರ್ಡ್ ವಿಜಯ್ಕುಮಾರ್ನಿಂದ ಅನ್ಯಾಯದ ವಿರುದ್ಧ ಏಕಾಂಗಿ ಪ್ರತಿಭಟನೆ
ಈ ಬಗ್ಗೆ ಪ್ರತಿಕ್ರಿಯಿಸಿದ ಅಮಾನತುಗೊಂಡಿರುವ ವಿಜಯ್ಕುಮಾರ್, ನಮ್ಮ ತಂದೆ ಅರಣ್ಯ ರಕ್ಷಕರಾಗಿದ್ದರು, ಈ ಮರಗಳನ್ನು ಕಡಿದು ನಾಶ ಮಾಡಿರುವುದನ್ನು ನೋಡಿದರೆ ನಮ್ಮ ಮನೆಯ ಸದಸ್ಯರನ್ನೇ ಕಡಿದು ನಾಶ ಮಾಡಿದಂತಹ ಭಾವನೆಯುಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಅವರು ಒಂಟಿಯಾಗಿ ಕುಳಿತು ಈ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದು, ಅನೇಕರು ಹರ್ಯಾಣ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಯಾಣ ಬಹಳ ಶೀಘ್ರದಲ್ಲೇ ಮರುಭೂಮಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಯುದ್ಧದ ನಡುವೆ ಕುಸ್ತಿ ಚಾಂಪಿಯನ್ 19 ವರ್ಷದ ಸಲೇಹ್ ಮೊಹಮ್ಮದಿಯನ್ನು ಗಲ್ಲಿಗೇರಿಸಿದ ಇರಾನ್