
<p><strong>ಬೆಂಗಳೂರು: </strong>ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ ರೂಪಾಯಿ ಹಣವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿರುವ ಘಟನೆ ಗುರುವಾರ ಬೆಳಿಗ್ಗೆ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದಿದೆ.</p><h2>ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡ</h2><p>ಮಾಹಿತಿಯ ಪ್ರಕಾರ, ಜೆಪಿ ನಗರದ ಎಚ್ಡಿಎಫ್ಸಿ ಬ್ಯಾಂಕಿನಿಂದ ಹಣವನ್ನು ತರಲಾಗುತ್ತಿದ್ದ ಸಿಎಂಎಸ್ ಕಂಪನಿಯ ಎಟಿಎಂ ಕ್ಯಾಷ್ ರಿಫಿಲ್ ವ್ಯಾನ್ ಅನ್ನು ದರೋಡೆಕೋರರು ಟಾರ್ಗೆಟ್ ಮಾಡಿಕೊಂಡಿದ್ದರು. ಶುಭ್ರ ಬಣ್ಣದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ತಂಡ ಮಾರ್ಗದಲ್ಲೇ ಸಿಎಂಎಸ್ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು.</p><h2>ದಾಖಲೆ ಪರಿಶೀಲಿಸಬೇಕೆಂದು ನಾಟಕ</h2><p>ದರೋಡೆಕೋರರು ತಮ್ಮನ್ನು ಸೆಂಟ್ರಲ್ ಗೌರ್ನಮೆಂಟ್ ಟ್ಯಾಕ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ವಾಹನ ಸಾಗಾಟಕ್ಕೆ ಸಂಬಂಧಿಸಿದ ಸೆಂಟ್ರಲ್ ಗೋವೆರ್ಮೆಂಟ್ ಟ್ಯಾಕ್ಸ್ ಆಫೀಸರ್ಸ್, ಡಾಕ್ಯುಮೆಂಟ್ ಪರಿಶೀಲನೆ ಮಾಡಬೇಕು ಎಂದು ಸಿಬ್ಬಂದಿಯನ್ನು ನಂಬಿಸಿದರು. ದರೋಡೆಕೋರರ ಮೇಲೆ ಶಂಕೆ ಬಾರದ ಹಿನ್ನೆಲೆಯಲ್ಲಿ ಸಿಎಂಎಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿದರು.</p><h2>ಸಿಬ್ಬಂದಿಯನ್ನು ಅಪಹರಿಸಿ, ಹಣ ಕದ್ದು ಪರಾರಿ</h2><p>ಸ್ಥಳದಲ್ಲಿದ್ದ 7 ಕೋಟಿ ರೂಪಾಯಿ ಮೊತ್ತದ ನಗದನ್ನು ತಮ್ಮ ವಶಕ್ಕೆ ಪಡೆದ ದರೋಡೆಕೋರರು, ಅಲ್ಲಿಂದಲೇ ಸಿಎಂಎಸ್ ಸಿಬ್ಬಂದಿಯನ್ನು ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಡೈರಿ ಸರ್ಕಲ್ ಕಡೆಗೆ ಕರೆದೊಯ್ದರು. ಅಲ್ಲಿ ಸಿಬ್ಬಂದಿಯನ್ನು ಇಳಿಸಿ, ನಗದಿನ ಸಮೇತ ಪರಾರಿಯಾದರು. ಸಂಪೂರ್ಣ ಘಟನೆಯು ಕೆಲವೇ ನಿಮಿಷಗಳಲ್ಲಿ ನಡೆದಿದ್ದು, ದರೋಡೆಕೋರರ ಫ್ಲಾನ್ ಮಾಡಿಯೇ ಇದನ್ನು ಮಾಡಿದ್ದಾರೆಂದು ಸ್ಪಷ್ಟವಾಗಿದೆ.</p><h2>ಪೊಲೀಸರ ತನಿಖೆ ಚುರುಕು</h2><p>ಸದ್ಯ ದಕ್ಷಿಣ ವಿಭಾಗದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ಎಲ್ಲಾ ಕಡೆ ಬಲೆ ಬೀಸಿದ್ದಾರೆ. ಸಿಸಿಟಿವಿ ಫೂಟೇಜ್ಗಳು, ವಾಹನದ ವಿವರಗಳು ಹಾಗೂ ಸಂಚಲನ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ. ನಗರದಲ್ಲಿ ಈಗಾಗಲೇ ಅಲರ್ಟ್ ಜಾರಿಗೆ ತಂದಿರುವ ಪೊಲೀಸರು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><h2>ಬ್ಯಾಂಕ್ ಮತ್ತು ಕ್ಯಾಶ್ ಮ್ಯಾನೇಜ್ಮೆಂಟ್ ಕಂಪನಿಗಳಲ್ಲಿ ಆತಂಕ</h2><p>ಎಟಿಎಂಗಳಿಗೆ ಹಣ ಸಾಗಾಟ ಮಾಡುವ ಕಂಪನಿಯ ವಾಹನವೇ ಗುರಿಯಾಗಿರುವುದರಿಂದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಹೆಚ್ಚು ಸಂಚಾರ ಇರುವ ಪ್ರದೇಶದಲ್ಲೇ ನಡೆದಿರುವ ದರೋಡೆ ನಗರದಲ್ಲಿ ಭದ್ರತಾ ವ್ಯವಸ್ಥೆಗಳ ಮೇಲೂ ಚರ್ಚೆ ಹುಟ್ಟಿಸಿದೆ.</p>
Source link
ಹಾಡಹಗಲೇ ಬೆಂಗಳೂರನ್ನು ಬೆಚ್ಚಿಬೀಳಿಸಿದ ಖದೀಮರು, ಚಲಿಸುತ್ತಿದ್ದ ವಾಹನದಿಂದಲೇ ಕೋಟಿ ಕೋಟಿ ದರೋಡೆ!