
ರಂಜಾನ್ ಹಬ್ಬದ ಪ್ರಯುಕ್ತ ಭಟ್ಕಳದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ನೂರಾರು ಜನರು ಅನಿವಾರ್ಯವಾಗಿ ಮೈದಾನದ ಹೊರಗಿನ ರಸ್ತೆಯಲ್ಲೇ ಸಾಲಾಗಿ ನಿಂತು ನಮಾಜ್ ಮಾಡಿದರು.
ಭಟ್ಕಳ (ಮಾ.20): ರಂಜಾನ್ ಹಬ್ಬದ ಪ್ರಯುಕ್ತ ಇಂದು ದೇಶಾದ್ಯಂತ ಸಂಭ್ರಮ ಮನೆಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯನ್ನೂ ರಸ್ತೆಯಲ್ಲಿ ಮಾಡಲಾಗಿದೆ. ಇಲ್ಲಿನ ಪ್ರಖ್ಯಾತ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಆಗಮಿಸಿದ್ದರು. ಆದರೆ, ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿದ್ದರಿಂದ ಮೈದಾನದ ಒಳಭಾಗ ಸಂಪೂರ್ಣವಾಗಿ ಭರ್ತಿಯಾಗಿತ್ತು.
ಮೈದಾನದಲ್ಲಿ ಸ್ಥಳಾವಕಾಶದ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ಪ್ರಾರ್ಥನೆಗೆ ಬಂದಿದ್ದ ನೂರಾರು ಜನರು ಅನಿವಾರ್ಯವಾಗಿ ಈದ್ಗಾ ಮೈದಾನದ ಹೊರಗಿನ ರಸ್ತೆಯ ಮೇಲೆಯೇ ಸಾಲಾಗಿ ನಿಂತು ನಮಾಜ್ ಮಾಡಿದರು. ಇಕ್ಕಟ್ಟಾದ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ತೊಂದರೆಯಾದ ಕಾರಣ, ರಸ್ತೆಯಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರತಿ ವರ್ಷವೂ ಭಟ್ಕಳದ ಈದ್ಗಾ ಮೈದಾನಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಬಾರಿ ಜನಸಂಖ್ಯೆ ಮಿತಿ ಮೀರಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಪ್ರಾರ್ಥನೆ ಪೂರೈಸಲಾಯಿತು.
ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಮಾಜ್ ಮಾಡುವುದನ್ನು ಹೈಕೋರ್ಟ್ ಮತ್ತು ಆಡಳಿತಗಳು ಕಟ್ಟುನಿಟ್ಟಾಗಿ ಪರಿಗಣಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನಮಾಜ್ ಮಾಡುವುದನ್ನು ಹೈಕೋರ್ಟ್ ಕೆಲವು ಸಂದರ್ಭಗಳಲ್ಲಿ ಆಕ್ಷೇಪಿಸಿದೆ. ಕಳೆದ ವರ್ಷ ಇದೇ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಬಳಿಕ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ರಸ್ತೆಯಲ್ಲಿ ನಮಾಜ್ ಮಾಡುವುದಾದರೆ ಅದಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದಿದ್ದರು.