
ಬೆಂಗಳೂರಿನ ಚೂಡಸಂದ್ರದ ‘ಅಹದ್ ಸೆರೆನಿಟಿ’ ಅಪಾರ್ಟ್ಮೆಂಟ್ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣ, ಮಕ್ಕಳು ಮತ್ತು ನಿವಾಸಿಗಳ ಮೇಲೆ ನಾಯಿಗಳು ದಾಳಿ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಬೆಂಗಳೂರು (ಮಾ.5): ನೀವು ಕೋಟಿ ಕೋಟಿ ರೂಪಾಯಿ ಸುರಿದು ಐಷಾರಾಮಿ ಫ್ಲಾಟ್ ಕೊಂಡುಕೊಂಡಿದ್ದೀರಾ? ನೆಮ್ಮದಿಯಾಗಿ ಇರಬಹುದು ಎಂದುಕೊಂಡಿದ್ದೀರಾ? ಹಾಗಿದ್ದರೆ ಈ ದೃಶ್ಯ ನೋಡಿ ನೀವು ಬೆಚ್ಚಿ ಬೀಳೋದು ಗ್ಯಾರಂಟಿ! ಇದು ಬೆಂಗಳೂರಿನ ಚೂಡಸಂದ್ರದ ‘ಅಹದ್ ಸೆರೆನಿಟಿ’ (Ahad Serenity) ಅಪಾರ್ಟ್ಮೆಂಟ್ನ ಕರಾಳ ಕಥೆ.
ಲಾಠಿ ಇಲ್ಲದೆ ಹೆಜ್ಜೆ ಇಡುವಂತಿಲ್ಲ: ಇಲ್ಲಿ ಡಾಗ್ಗಳೇ ಡಾನ್!
ಇಲ್ಲಿನ ನಿವಾಸಿಗಳು ಒಂದು ಹೆಜ್ಜೆ ಹೊರಗೆ ಇಡಬೇಕೆಂದರೂ ಕೈಯಲ್ಲಿ ಲಾಠಿ ಹಿಡಿಯಲೇಬೇಕು. ಹೌದು, ನೀವು ಕೇಳುತ್ತಿರುವುದು ನಿಜ. ಸುಮಾರು 619 ಫ್ಲಾಟ್ಗಳು, 1500ಕ್ಕೂ ಹೆಚ್ಚು ಜನ ವಾಸಿಸುವ ಈ ಬೃಹತ್ ಅಪಾರ್ಟ್ಮೆಂಟ್ನಲ್ಲಿ ಈಗ ಮನುಷ್ಯರಿಗಿಂತ ಬೀದಿ ನಾಯಿಗಳದ್ದೇ ದರ್ಬಾರ್! ಹತ್ತಾರು ನಾಯಿಗಳು ಗುಂಪು ಕಟ್ಟಿಕೊಂಡು ಅಟ್ಯಾಕ್ ಮಾಡುತ್ತಿದ್ದರೆ, ನಿವಾಸಿಗಳು ಪ್ರಾಣಭಯದಲ್ಲಿ ದಿನ ಕಳೆಯುತ್ತಿದ್ದಾರೆ.
ಸಿಸಿಟಿವಿ ದೃಶ್ಯ ಕಂಡರೆ ಕರುಳು ಹಿಂಡಿ ಬರುತ್ತೆ!
ಈ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳು ನಾಯಿಗಳ ಕ್ರೂರತ್ವಕ್ಕೆ ಸಾಕ್ಷಿ ನುಡಿಯುತ್ತಿವೆ. ಅದೆಷ್ಟೋ ಬಾರಿ ಮಕ್ಕಳು ಆಟವಾಡಲು ಹೋದಾಗ ನಾಯಿಗಳು ಅಟ್ಟಾಡಿಸಿವೆ. ತಾಯಂದಿರು ತಮ್ಮ ಮಕ್ಕಳನ್ನು ಆಚೆ ಕಳುಹಿಸಲು ನಡುಗುತ್ತಿದ್ದಾರೆ. ಕೋಟಿ ಕೋಟಿ ಹಣ ನೀಡಿ ನೆಮ್ಮದಿ ಬಯಸಿ ಬಂದವರಿಗೆ ಇಲ್ಲಿ ಸಿಗುತ್ತಿರುವುದು ಮಾತ್ರ ದಿನನಿತ್ಯದ ಆತಂಕ ಬದುಕು.
ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜವಿಲ್ಲ
ಈ ಬಗ್ಗೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಈಗಾಗಲೇ ರಾಯಸಂದ್ರ ತಾಲೂಕು ಪಂಚಾಯಿತಿಗೆ ದೂರು ನೀಡಿದೆ. ಆದರೆ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕುಳಿತಿದ್ದಾರೆ. ಜನರ ಪ್ರಾಣಕ್ಕೆ ಕುತ್ತು ಬಂದರೂ ಪಂಚಾಯಿತಿ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.