ವಿಧಾನಸೌಧದೊಳಗೆ ಮಾಧ್ಯಮ ಪ್ರವೇಶ ನಿರ್ಬಂಧಿಸುವ ಸರ್ಕಾರದ ನಿರ್ಧಾರವನ್ನು ವಾಟಾಳ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಈ ಆದೇಶವನ್ನು 15 ದಿನಗಳಲ್ಲಿ ಹಿಂಪಡೆಯದಿದ್ದರೆ ವಿಧಾನಸೌಧದ ಬಾಗಿಲಲ್ಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು (ಫೆ.27): ವಿಧಾನಸೌಧದ ಒಳಗೆ ಟಿವಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿರುವ ಸರ್ಕಾರದ ತೀರ್ಮಾನದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೆಂಡಾಮಂಡಲರಾಗಿದ್ದಾರೆ. ‘ಇದು ಪ್ರಜಾಪ್ರಭುತ್ವಕ್ಕೆ ಉಂಟಾದ ಅವಲಕ್ಷಣ ಮತ್ತು ಅಪಚಾರ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮದವರನ್ನು ಸರ್ಕಾರ ಗುಲಾಮರಂತೆ ಕಾಣಬಾರದು ಎಂದು ಅವರು ಎಚ್ಚರಿಸಿದ್ದಾರೆ.
15 ದಿನಗಳ ಗಡುವು: ಇಲ್ಲದಿದ್ದರೆ ವಿಧಾನಸೌಧದ ಬಾಗಿಲಲ್ಲೇ ಪ್ರತಿಭಟನೆ!
ಸರ್ಕಾರದ ಈ ಧೋರಣೆಯನ್ನು ಖಂಡಿಸಿರುವ ವಾಟಾಳ್, ‘ನಾನೇನಾದರೂ ಅಸೆಂಬ್ಲಿಯಲ್ಲಿ ಇದ್ದಿದ್ದರೆ ಇದರ ರೂಪವೇ ಬೇರೆ ಇರುತ್ತಿತ್ತು’ ಎಂದ ವಾಟಾಳ್ ನಾಗರಾಜ್ ಅವರು, ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ಅಷ್ಟರೊಳಗೆ ನಿರ್ಧಾರ ಬದಲಿಸದಿದ್ದರೆ ವಿಧಾನಸೌಧದ ಬಾಗಿಲಲ್ಲೇ ಮಲಗಿ ಹೋರಾಟ ಮಾಡುವುದಾಗಿ ಗುಡುಗಿದ್ದಾರೆ. ಅಲ್ಲದೆ, ಮಕ್ಕಳ ಮೊಬೈಲ್ ನಿಷೇಧ ವಿಚಾರದಲ್ಲಿಯೂ ಪ್ರತಿಕ್ರಿಯಿಸಿದ ಅವರು, ನಿಷೇಧದಿಂದ ಮಕ್ಕಳು ಕದ್ದು ನೋಡುವ ಪ್ರವೃತ್ತಿ ಬೆಳೆಯುತ್ತದೆ ಹೊರತು ಕಡಿಮೆಯಾಗಲ್ಲ. ಅದು ಇನ್ನು ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ನಿಷೇಧ ಮಾಡಬೇಡಿ ಎಂದು ಎಚ್ಚರಿಸಿದರು.
ಅನುದಾನ ನೀಡದಿದ್ರೆ ಮಾರ್ಚ್ 20ಕ್ಕೆ ಶಾಲೆಗಳು ಬಂದ್
ಸರ್ಕಾರ ಘೋಷಿಸಿರುವ 56 ಸಾವಿರ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಆದ್ಯತೆ ನೀಡಬೇಕು ಮತ್ತು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನದ ಕೊರತೆ ಇರುವುದನ್ನು ಎತ್ತಿ ತೋರಿಸಿದ ಅವರು, ಬಜೆಟ್ನಲ್ಲಿ ಸೂಕ್ತ ಅನುದಾನ ನೀಡದಿದ್ದರೆ ಮಾರ್ಚ್ 20ಕ್ಕೆ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
