
ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನಾನ್ ಇಂಟರ್ಲಾಕಿಂಗ್ ಕಾಮಗಾರಿಯ ಕಾರಣ, ಮಾರ್ಚ್ 15, 16 ಮತ್ತು 17 ರಂದು ತುಮಕೂರು ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
ತುಮಕೂರು: ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿ ತುಮಕೂರು ಸಮೀಪದ ಊರುಕೆರೆ ಪ್ರದೇಶದಲ್ಲಿ ನಾನ್ ಇಂಟರ್ಲಾಕಿಂಗ್ (Non-Interlocking) ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 15, 16 ಮತ್ತು 17 ರಂದು ಕೆಲ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದು, ಸಂಪೂರ್ಣ ರದ್ದು ಹಾಗೂ ಸಮಯ ಬದಲಾವಣೆಗಳು ಇರಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ.
ಮಾರ್ಚ್ 15 ರಂದು ಮೈಸೂರು–ಚಾಮರಾಜನಗರ ಪ್ಯಾಸೆಂಜರ್, ಚಾಮರಾಜನಗರ–ತುಮಕೂರು ಪ್ಯಾಸೆಂಜರ್, ತುಮಕೂರು–ಶಿವಮೊಗ್ಗ ಎಕ್ಸ್ಪ್ರೆಸ್, ಯಶವಂತಪುರ–ತುಮಕೂರು ಮೆಮು, ತುಮಕೂರು–ಯಶವಂತಪುರ ಮೆಮು ಹಾಗೂ ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ಸೇವೆಗಳು ಹಿರೇಹಳ್ಳಿ ಮತ್ತು ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ ಎಂದು ತಿಳಿಸಲಾಗಿದೆ.
ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದು
ಇದೇ ದಿನ ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಪರಿಣಾಮವಾಗಿ ಈ ರೈಲು ತುಮಕೂರು ನಿಲ್ದಾಣದಿಂದ ಹೊರಡುವುದಕ್ಕೆ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಸಂಚಾರ ಆರಂಭಿಸಲಿದೆ.
ಇದಲ್ಲದೆ ಶಿವಮೊಗ್ಗ ಟೌನ್–ತುಮಕೂರು ಎಕ್ಸ್ಪ್ರೆಸ್ ಸೇವೆಯೂ ಭಾಗಶಃ ರದ್ದಾಗಲಿದೆ. ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಿ, ತುಮಕೂರಿನವರೆಗೆ ಬರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್ 15 ಮತ್ತು 16 ರಂದು ತುಮಕೂರು–ಚಾಮರಾಜನಗರ ಪ್ಯಾಸೆಂಜರ್ ಹಾಗೂ ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ಸೇವೆಗಳು ಹಿರೇಹಳ್ಳಿ–ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿವೆ. ಈ ರೈಲುಗಳು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿವೆ.
ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ಸೇವೆಯನ್ನೂ ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಪರಿಣಾಮವಾಗಿ ಈ ರೈಲು ತುಮಕೂರು ನಿಲ್ದಾಣದಿಂದ ಹೊರಡುವುದಕ್ಕೆ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಸಂಚಾರ ಆರಂಭಿಸಲಿದೆ.
ಎರಡು ದಿನಗಳ ಕಾಲ ಸಂಪೂರ್ಣವಾಗಿ ರದ್ದು
ಇದೇ ವೇಳೆ ಚಾಮರಾಜನಗರ–ಮೈಸೂರು ಪ್ಯಾಸೆಂಜರ್ ರೈಲು ಸೇವೆಯನ್ನು ಮಾರ್ಚ್ 16 ಮತ್ತು 17 ರಂದು ಎರಡು ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಮಾರ್ಚ್ 16 ರಂದು ಶಿವಮೊಗ್ಗ ಟೌನ್–ತುಮಕೂರು ಎಕ್ಸ್ಪ್ರೆಸ್, ತುಮಕೂರು–ಯಶವಂತಪುರ ಮೆಮು, ಯಶವಂತಪುರ–ತುಮಕೂರು ಮೆಮು ಹಾಗೂ ತುಮಕೂರು–ಯಶವಂತಪುರ ಮೆಮು ರೈಲುಗಳ ಸಂಚಾರವೂ ರದ್ದಾಗಲಿದೆ ಎಂದು ತಿಳಿಸಲಾಗಿದೆ.
ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಸೇವೆಯನ್ನು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಪರಿಣಾಮವಾಗಿ ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
ಕೆಎಸ್ಆರ್ ಬೆಂಗಳೂರು–ಧಾರವಾಡ ಎಕ್ಸ್ಪ್ರೆಸ್ ರೈಲು ಸೇವೆಯನ್ನೂ ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಅಂದು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವುದಕ್ಕೆ ಬದಲಾಗಿ ಅರಸೀಕೆರೆ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ.
ಇನ್ನೂ ಬಾಣಸವಾಡಿ–ತುಮಕೂರು ಮೆಮು ರೈಲು ಸೇವೆಯನ್ನು ಹಿರೇಹಳ್ಳಿ–ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
ತುಮಕೂರು–ಯಶವಂತಪುರ ಮೆಮು ಸೇವೆಯನ್ನೂ ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಪರಿಣಾಮವಾಗಿ ಈ ರೈಲು ತುಮಕೂರು ನಿಲ್ದಾಣದಿಂದ ಹೊರಡುವುದಕ್ಕೆ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಇದಲ್ಲದೆ ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ ಸುಮಾರು 75 ನಿಮಿಷ ತಡವಾಗಿ ಹೊರಡಲಿದೆ.
ಅದೇ ರೀತಿ ಮೈಸೂರು–ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ರೈಲು ಮೈಸೂರು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕಿಂತ ಸುಮಾರು 105 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.