
Breaking ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ, ಭಯೋತ್ಪಾದಕ ಕೃತ್ಯದ ಶಂಕೆ, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಶಂಕೆಯಿದೆ.
ನವದೆಹಲಿ (ನ.10) ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಚಾಂದಿನಿ ಚೌಕ್ ಬಳಿಯ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಎರಡು ಕಾರುಗಳು ಭಸ್ಮವಾಗಿದೆ. ಇತರ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದೆ. ಪಾರ್ಕ್ ಮಾಡಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಭಯೋತ್ಪಾದಕರ ಅತೀ ದೊಡ್ಡ ಸಂಚನ್ನು ಪೊಲೀಸರು ವಿಫಲಗೊಳಿಸಿದ ಬೆನ್ನಲ್ಲೇ ಈ ಸ್ಫೋಟ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಫೋಟದ ಕಾರಣ ಸ್ಪಷ್ಟವಾಗಿಲ್ಲ. ಆದರೆ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಓರ್ವ ಮೃತಪಟ್ಟಿರುವ ಶಂಕೆ
ಕಾರಿನಲ್ಲಿ ಸ್ಫೋಟಕವಿಟ್ಟು ಬ್ಲಾಸ್ಟ್ ಮಾಡಿರುವ ಅನುಮಾನಗಳು ವ್ಯಕ್ತವಾಗುತ್ತಿದೆ. ಮೇಲ್ನೋಟಕ್ಕೆ ಭಯೋತ್ಪಾದಕರ ಕೃತ್ಯ ಎಂದು ವರದಿಗಳು ಹೇಳುತ್ತಿದೆ. ದೆಹಲಿ ಕಾರು ಸ್ಫೋಟದಲ್ಲಿ ಓರ್ವ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಹಲವರು ಗಾಯಗೊಂಡಿರುವ ಸಾಧ್ಯತೆ ಇದೆ. ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಸ್ಫೋಟ ಸಂಭವಿಸಿದೆ. ಭಾರಿ ಸಂಚಾರ ದಟ್ಟಣೆ, ಜನರು ಓಡಾಡುತ್ತಿರುವಾಗಲೇ ಈ ಸ್ಫೋಟ ಸಂಭವಿಸಿದೆ. ಕೇಂದ್ರ ಭದ್ರತಾ ಪಡೆಗಳು ಈ ಸ್ಫೋಟದಿಂದ ಅಲರ್ಟ್ ಆಗಿದೆ.