ಗ್ಯಾಂಗ್‌ಸ್ಟರ್ ರವಿ ಪೂಜಾರಿ ಬೆಂಗಳೂರಿಗೆ ವಾಪಸ್: ಮುಂಬೈ ಪೊಲೀಸರ ವಿಚಾರಣೆ ಅಂತ್ಯ, ಕೋರ್ಟ್‌ಗೆ ಹಾಜರು! | Gangster Ravi Pujari Produced In Bengaluru Court Today Post Mumbai Probe Sat

ಗ್ಯಾಂಗ್‌ಸ್ಟರ್ ರವಿ ಪೂಜಾರಿ ಬೆಂಗಳೂರಿಗೆ ವಾಪಸ್: ಮುಂಬೈ ಪೊಲೀಸರ ವಿಚಾರಣೆ ಅಂತ್ಯ, ಕೋರ್ಟ್‌ಗೆ ಹಾಜರು! | Gangster Ravi Pujari Produced In Bengaluru Court Today Post Mumbai Probe Sat



ಗ್ಯಾಂಗ್‌ಸ್ಟರ್ ರವಿ ಪೂಜಾರಿ ಬೆಂಗಳೂರಿಗೆ ವಾಪಸ್: ಮುಂಬೈ ಪೊಲೀಸರ ವಿಚಾರಣೆ ಅಂತ್ಯ, ಕೋರ್ಟ್‌ಗೆ ಹಾಜರು! | Gangster Ravi Pujari Produced In Bengaluru Court Today Post Mumbai Probe Sat

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಶದಲ್ಲಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ವಾಪಸ್ ಕರೆತರಲಾಗುತ್ತಿದೆ. ರೆಮೋ ಡಿಸೋಜಾ ಸುಲಿಗೆ ಯತ್ನ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇಂದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಬೆಂಗಳೂರು (ಮಾ.09): ಭೂಗತ ಲೋಕದ ಕುಖ್ಯಾತ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಕುರಿತು ದೊಡ್ಡ ಅಪ್‌ಡೇಟ್ ಒಂದು ಹೊರಬಿದ್ದಿದೆ. ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಶದಲ್ಲಿದ್ದ ರವಿ ಪೂಜಾರಿಯನ್ನು ಇಂದು (ಸೋಮವಾರ) ಬೆಂಗಳೂರಿಗೆ ವಾಪಸ್ ಕರೆತರಲಾಗುತ್ತಿದೆ. ಮುಂಬೈ ಪೊಲೀಸರ ಸುದೀರ್ಘ ವಿಚಾರಣೆ ಪೂರ್ಣಗೊಂಡಿದ್ದು, ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆತನನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ರೆಮೋ ಡಿಸೋಜಾ ಸುಲಿಗೆ ಪ್ರಕರಣದ ವಿಚಾರಣೆ ಅಂತ್ಯ

ಕಳೆದ ಕೆಲವು ದಿನಗಳಿಂದ ಮುಂಬೈ ಪೊಲೀಸರು ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದರು. ಮುಖ್ಯವಾಗಿ 2018ರಲ್ಲಿ ನಡೆದಿದ್ದ ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ (Choreographer) ರೆಮೋ ಡಿಸೋಜಾ ಮತ್ತು ಅವರ ಪತ್ನಿಯಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿತ್ತು. ರವಿ ಪೂಜಾರಿ ಹೆಸರಿನಲ್ಲಿ ರೆಮೋ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಇಂದು ವಿಚಾರಣೆ

ಮುಂಬೈನಲ್ಲಿ ವಿಚಾರಣೆ ಮುಗಿಸಿರುವ ಪೊಲೀಸರು, ರವಿ ಪೂಜಾರಿಯನ್ನು ಇಂದು ಮಧ್ಯಾಹ್ನ ಬೆಂಗಳೂರಿಗೆ ಕರೆದುಕೊಂಡು ಬರಲಿದ್ದಾರೆ. ನಂತರ ಬೆಂಗಳೂರಿನ 54ನೇ ಸಿಚಿಎಚ್ (CCH) ಕೋರ್ಟ್‌ಗೆ ಆತನನ್ನು ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ 15 ಪ್ರಕರಣಗಳು, ಕಠಿಣ MCOCA ಕಾಯ್ದೆ ಅಡಿ ಕ್ರಮ

ರವಿ ಪೂಜಾರಿ ವಿರುದ್ಧ ಮುಂಬೈನಲ್ಲಿ ಮಾತ್ರ ಸುಮಾರು 15ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸೆನೆಗಲ್ ಸರ್ಕಾರವು ರವಿ ಪೂಜಾರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಹಸಿರು ನಿಶಾನೆ ತೋರಿಸಿತ್ತು. ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅನುಮೋದನೆ ದೊರೆತಿದ್ದು, ಇದರಲ್ಲಿ ಮೂರು ಅತ್ಯಂತ ಗಂಭೀರ ಪ್ರಕರಣಗಳಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅನ್ವಯಿಸಲಾಗಿದೆ. ಈ ಕಾಯ್ದೆಯು ಸಂಘಟಿತ ಅಪರಾಧಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ.

ಘಟನೆಯ ಹಿನ್ನೆಲೆ:

ಹಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು 2020ರಲ್ಲಿ ಸೆನೆಗಲ್‌ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅಂದಿನಿಂದ ಆತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಕರ್ನಾಟಕದಲ್ಲಿಯೂ ಆತನ ವಿರುದ್ಧ ಹಲವಾರು ಕೊಲೆ ಯತ್ನ ಮತ್ತು ಹಫ್ತಾ ವಸೂಲಿ ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ಈತನ ಕೃತ್ಯಗಳ ಜಾಲವನ್ನು ಭೇದಿಸುತ್ತಿದ್ದಾರೆ. ಇಂದು ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಿದ ನಂತರ, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತದೆಯೇ ಅಥವಾ ಬೇರೆ ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಗೆ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *