
ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ವೇಗದ ಬೌಲರ್ ಆಕಾಶ್ ದೀಪ್ ಗಾಯದಿಂದಾಗಿ ಈ ಸೀಸನ್ನಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಇದು ಈಗಾಗಲೇ ಬೌಲರ್ಗಳ ಕೊರತೆ ಎದುರಿಸುತ್ತಿರುವ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಅವರ ಸ್ಥಾನಕ್ಕೆ ಕೆಕೆಆರ್ ಮ್ಯಾನೇಜ್ಮೆಂಟ್ ಬದಲಿ ಆಟಗಾರರ ಹುಡುಕಾಟದಲ್ಲಿದೆ.
ಕೋಲ್ಕತ್ತಾ: ಐಪಿಎಲ್ ಸೀಸನ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಕ್ಯಾಂಪ್ನಲ್ಲಿ ಚಿಂತೆ ಶುರುವಾಗಿದೆ. ತಂಡದ ಪ್ರಮುಖ ವೇಗದ ಬೌಲರ್, ಬಂಗಾಳದ ಆಕಾಶ್ ದೀಪ್ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಅವರು ನಮ್ಮ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆಕಾಶ್ ದೀಪ್ ಅನುಪಸ್ಥಿತಿ ಕೆಕೆಆರ್ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ನೀಡಲಿದೆ. ಯಾಕಂದ್ರೆ, ಗಾಯದ ಸಮಸ್ಯೆಗಳಿಂದ ಕೆಕೆಆರ್ ತಂಡದ ವೇಗದ ಬೌಲಿಂಗ್ ವಿಭಾಗ ಈಗಾಗಲೇ ಸಂಕಷ್ಟದಲ್ಲಿದೆ.
ಹರ್ಷಿತ್ ರಾಣಾಗೆ ಗಾಯ
ಮೊಣಕಾಲಿನ ಗಾಯದಿಂದಾಗಿ ಹರ್ಷಿತ್ ರಾಣಾ ಈ ಸೀಸನ್ನಲ್ಲಿ ಆಡುವುದು ಅನುಮಾನ. ಇನ್ನು, ಮುಸ್ತಫಿಜುರ್ ರಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ತಂಡದಿಂದ ಮೊದಲೇ ರಿಲೀಸ್ ಮಾಡಲಾಗಿತ್ತು. 18 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಶ್ರೀಲಂಕಾದ ಆಟಗಾರ ಪತಿರಾನ ಗಾಯದ ಸಮಸ್ಯೆ ಕೂಡ ತಂಡಕ್ಕೆ ತಲೆನೋವಾಗಿದೆ. ಸದ್ಯ ಪತಿರಾನ ತರಬೇತಿ ಮುಗಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದಿದ್ದರೂ, ಏಪ್ರಿಲ್ ಮಧ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಒಂದು ಕೋಟಿ ರುಪಾಯಿಗೆ ಕೆಕೆಆರ್ ಪಾಲಾಗಿದ್ದ ಆಕಾಶ್ದೀಪ್
ಕಳೆದ ಹರಾಜಿನಲ್ಲಿ ಕೋಲ್ಕತಾ ತಂಡವು ಆಕಾಶ್ ದೀಪ್ ಅವರನ್ನು 1 ಕೋಟಿ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ಪರ ಆಡಿದ್ದ ಅವರು, 2022ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ನಂತರ ಕೇವಲ 14 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಪದೇ ಪದೇ ಕಾಡುತ್ತಿರುವ ಗಾಯದ ಸಮಸ್ಯೆಗಳು ಅವರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಇದೀಗ ವೇಗದ ಬೌಲಿಂಗ್ ವಿಭಾಗದಲ್ಲಿ ಉಂಟಾಗಿರುವ ಕೊರತೆ ನೀಗಿಸಲು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರರಾದ ಸಿಮರ್ಜೀತ್ ಸಿಂಗ್, ಕೆ.ಎಂ. ಆಸಿಫ್ ಹಾಗೂ ಅನುಭವಿ ಸಂದೀಪ್ ವಾರಿಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ.