
ದಿವಾಳಿಯಾಗಿದ್ದೇನೆ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಬದಲು, ಶ್ರಮಪಟ್ಟು ಸಾಲ ತೀರಿಸಲು ನಿರ್ಧರಿಸಿದರು. ಆ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತವರು ಅವರ ಸ್ನೇಹಿತ ಅಮರ್ ಸಿಂಗ್ ಮತ್ತು ಉದ್ಯಮಿ ಅನಿಲ್ ಅಂಬಾನಿ. ಯಶ್ ಚೋಪ್ರಾ ಅವರ ಮನೆಗೆ ನಡೆದುಕೊಂಡೇ ಹೋದ ಅಮಿತಾಭ್, ‘ನನಗೆ ಕೆಲಸ ಕೊಡಿ” ಎಂದು ಕೇಳಿಕೊಂಡರು.
ದಿವಾಳಿಯಾಗಿದ್ದ ಬಿಗ್ ಬಿ, ಸಾಲ ತೀರಿಸಲು ಮನೆ ಮನೆ ಅಲೆದಿದ್ದರೇ? ಅಕ್ಷರಶಃ ಬೀದಿಗೆ ಬಂದಿದ್ದ ಅಮಿತಾಭ್ ಬಚ್ಚನ್ ಮರಳಿ ಫೀನಿಕ್ಸ್ನಂತೆ ಎದ್ದು ಬಂದ ಕಥೆ!
ಬಾಲಿವುಡ್ನ ಕಾಮಿಡಿ ಕಿಂಗ್ ರಾಜ್ಪಾಲ್ ಯಾದವ್ (Rajpal Yadav) ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಿಹಾರ್ ಜೈಲು ಪಾಲಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇಡೀ ಭಾರತೀಯ ಚಿತ್ರರಂಗವೇ ಆರಾಧಿಸುವ ‘ಶಹನ್ ಶಾ’ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಒಂದು ಕಾಲದಲ್ಲಿ ಇದೇ ರೀತಿಯ, ಅಥವಾ ಇದಕ್ಕಿಂತಲೂ ಭೀಕರವಾದ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು ಎಂಬುದು ನಿಮಗೆ ಗೊತ್ತೇ? ತೆರೆಯ ಮೇಲೆ ಸಾವಿರಾರು ವಿಲನ್ಗಳನ್ನು ಮಣ್ಣುಮುಕ್ಕಿಸಿದ ಈ ಆಂಗ್ರಿ ಯಂಗ್ ಮ್ಯಾನ್, ನಿಜ ಜೀವನದಲ್ಲಿ 90 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿ ಅಕ್ಷರಶಃ ಬೀದಿಗೆ ಬಂದಿದ್ದರು!
1990ರ ದಶಕದ ಕೊನೆಯಲ್ಲಿ ಅಮಿತಾಭ್ ಬಚ್ಚನ್ ಅವರ ಜೀವನದಲ್ಲಿ ಕರಾಳ ದಿನಗಳು ಆರಂಭವಾದವು. 1995ರಲ್ಲಿ ಅವರು ‘ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್’ (ABCL) ಎಂಬ ಮಹತ್ವಾಕಾಂಕ್ಷೆಯ ಕಂಪನಿಯನ್ನು ಆರಂಭಿಸಿದರು. ಸಿನಿಮಾ ನಿರ್ಮಾಣ, ವಿತರಣೆ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಹೀಗೆ ಎಲ್ಲದರಲ್ಲೂ ಕೈಹಾಕಿದ ಬಚ್ಚನ್, 1996ರಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ‘ಮಿಸ್ ವರ್ಲ್ಡ್’ (Miss World) ಸ್ಪರ್ಧೆಯನ್ನು ಆಯೋಜಿಸಿದರು. ಆದರೆ, ಈ ಈವೆಂಟ್ ಅವರ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿತು. ಅತಿಯಾದ ಖರ್ಚು ಮತ್ತು ಮ್ಯಾನೇಜ್ಮೆಂಟ್ ವೈಫಲ್ಯದಿಂದಾಗಿ ಕಂಪನಿ ದಿವಾಳಿಯಾಯಿತು.
ಬರೋಬ್ಬರಿ 90 ಕೋಟಿ ರೂಪಾಯಿಗಳ ಸಾಲ
1999ರ ವೇಳೆಗೆ ಬಿಗ್ ಬಿ ತಲೆಯ ಮೇಲೆ ಬರೋಬ್ಬರಿ 90 ಕೋಟಿ ರೂಪಾಯಿಗಳ ಸಾಲವಿತ್ತು. ಇಷ್ಟೇ ಅಲ್ಲದೆ, ಸಾಲ ಕೊಟ್ಟವರು ಅವರ ಮೇಲೆ ಬರೋಬ್ಬರಿ 55 ಕಾನೂನು ಕೇಸ್ಗಳನ್ನು ದಾಖಲಿಸಿದ್ದರು. ಬ್ಯಾಂಕ್ ಖಾತೆಗಳು ಸ್ಥಗಿತಗೊಂಡವು, ಅವರ ಐಷಾರಾಮಿ ಮನೆ ‘ಪ್ರತೀಕ್ಷಾ’ ಕೂಡ ಜಪ್ತಿಯಾಗುವ ಹಂತಕ್ಕೆ ಬಂದಿತ್ತು. ಸಾಲಗಾರರು ಪ್ರತಿದಿನ ಮನೆ ಮುಂದೆ ಬಂದು ಬೊಬ್ಬೆ ಹೊಡೆಯುತ್ತಿದ್ದರು. ಆಗ ಅಮಿತಾಭ್ ಬಚ್ಚನ್ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸಿನೆಮಾ ಲೋಕದ ಚಕ್ರವರ್ತಿಯಾಗಿದ್ದ ವ್ಯಕ್ತಿ, ತನ್ನ ಜೀವನದಲ್ಲಿ ತಾನೇ ಒಬ್ಬ ವಿಲನ್ನಂತೆ ಕಾಣತೊಡಗಿದ್ದರು.
ಆದರೆ ಅಮಿತಾಭ್ ಸೋಲೊಪ್ಪಿಕೊಳ್ಳಲಿಲ್ಲ. ದಿವಾಳಿಯಾಗಿದ್ದೇನೆ ಎಂದು ಘೋಷಿಸಿ ಕೈಚೆಲ್ಲಿ ಕುಳಿತುಕೊಳ್ಳುವ ಬದಲು, ಶ್ರಮಪಟ್ಟು ಸಾಲ ತೀರಿಸಲು ನಿರ್ಧರಿಸಿದರು. ಆ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತವರು ಅವರ ಸ್ನೇಹಿತ ಅಮರ್ ಸಿಂಗ್ ಮತ್ತು ಉದ್ಯಮಿ ಅನಿಲ್ ಅಂಬಾನಿ. ಆದರೆ ಬಚ್ಚನ್ ಅವರಿಗೆ ಬೇಕಾಗಿದ್ದು ಹಣವಲ್ಲ, ಕೆಲಸ! ಒಂದು ದಿನ ಬೆಳಿಗ್ಗೆ ಎದ್ದು ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರ ಮನೆಗೆ ನಡೆದುಕೊಂಡೇ ಹೋದ ಅಮಿತಾಭ್, “ನನ್ನ ಹತ್ತಿರ ಕೆಲಸವಿಲ್ಲ, ನಾನು ಸಂಕಷ್ಟದಲ್ಲಿದ್ದೇನೆ, ನನಗೆ ಕೆಲಸ ಕೊಡಿ” ಎಂದು ಕೇಳಿಕೊಂಡರು. ಅಲ್ಲಿ ಅವರಿಗೆ ಸಿಕ್ಕಿದ್ದು ‘ಮೊಹಬ್ಬತೇನ್’ ಸಿನೆಮಾದ ಅವಕಾಶ.
ಇದಾದ ನಂತರ 2000ನೇ ಇಸವಿಯಲ್ಲಿ ‘ಕೌನ್ ಬನೇಗಾ ಕರೋಡ್ಪತಿ’ (KBC) ರಿಯಾಲಿಟಿ ಶೋ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಕಿರುತೆರೆಯಲ್ಲಿ ಸೃಷ್ಟಿಯಾದ ಈ ಮ್ಯಾಜಿಕ್ನಿಂದ ಬಂದ ಹಣ ಮತ್ತು ಸತತ ಸಿನಿಮಾಗಳ ಮೂಲಕ ಅವರು ಕೇವಲ ಎರಡು ವರ್ಷಗಳಲ್ಲಿ ಪ್ರತಿಯೊಬ್ಬ ಸಾಲಗಾರನ ಸಾಲವನ್ನೂ ಪೈಸೆ ಪೈಸೆ ಸಮೇತ ತೀರಿಸಿದರು. ಅಂದು ಅಳಿವಿನ ಅಂಚಿನಲ್ಲಿದ್ದ ಬಚ್ಚನ್ ಸಾಮ್ರಾಜ್ಯ ಇಂದು ಮತ್ತೆ ಅಜೇಯವಾಗಿ ನಿಂತಿದೆ. ಸೋತಾಗ ಕುಸಿಯಬಾರದು, ಸತತ ಪ್ರಯತ್ನದಿಂದ ಮತ್ತೆ ಎದ್ದು ಬರಬೇಕು ಎಂಬುದಕ್ಕೆ ಅಮಿತಾಭ್ ಬಚ್ಚನ್ ಅವರ ಈ ಜೀವನದ ಹೋರಾಟ ಇಂದಿನ ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿ. “ಸೋಲು ಎಂಬುದು ಅಂತಿಮವಲ್ಲ, ಅದೊಂದು ಹೊಸ ಆರಂಭಕ್ಕೆ ಮುನ್ನುಡಿ” ಎಂಬುದನ್ನು ಬಿಗ್ ಬಿ ಸಾಬೀತುಪಡಿಸಿದ್ದಾರೆ.