
ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿದ್ದ ಸಂಪೂರ್ಣ ರಸ್ತೆ ತೆರಿಗೆ ವಿನಾಯಿತಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಇನ್ನು ಮುಂದೆ, ವಾಹನದ ಬೆಲೆಗೆ ಅನುಗುಣವಾಗಿ 5% ರಿಂದ 10% ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುವುದು.
ಬೆಂಗಳೂರು (ಮಾ.31): ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ. ಬ್ಯಾಟರಿ ಚಾಲಿತ ವಾಹನಗಳಾದ ಕಾರುಗಳು, ಜೀಪುಗಳು, ಓಮ್ನಿ ಬಸ್ಗಳು ಮತ್ತು ಖಾಸಗಿ ಸೇವಾ ವಾಹನಗಳಿಗೆ ಇದುವರೆಗೆ ನೀಡಲಾಗುತ್ತಿದ್ದ 100 ಪ್ರತಿಶತ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2026’ ರ ಪ್ರಕಾರ, ಇನ್ನು ಮುಂದೆ ವಾಹನ ನೋಂದಣಿ ಸಮಯದಲ್ಲಿ ಪಾವತಿಸಬೇಕಾದ ಜೀವಿತಾವಧಿ ತೆರಿಗೆಯನ್ನು (Lifetime Tax) ವಾಹನದ ಬೆಲೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. 10 ಲಕ್ಷ ರೂ. ವರೆಗಿನ ವಾಹನಗಳಿಗೆ 5 ಪ್ರತಿಶತ ತೆರಿಗೆ ಇರಲಿದ್ದರೆ, 10 ಲಕ್ಷದಿಂದ 25 ಲಕ್ಷ ರೂ. ವರೆಗಿನ ವಾಹನಗಳಿಗೆ 8 ಪ್ರತಿಶತ ತೆರಿಗೆ ಇರಲಿದೆ. ಇನ್ನು 25 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ 10 ಪ್ರತಿಶತ ತೆರಿಗೆ ಇರಲಿದೆ.
ನೀತಿಯಲ್ಲಿ ದೊಡ್ಡ ಬದಲಾವಣೆ
ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಮಾರ್ಚ್ 2016 ರಿಂದಲೇ ಎಲ್ಲಾ ಇವಿಗಳಿಗೆ ರಸ್ತೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿತ್ತು. 2024 ರಿಂದ ಕೇವಲ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಇವಿಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈಗ ಎಲ್ಲಾ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೂ ತೆರಿಗೆ ಅನ್ವಯವಾಗಲಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದ ಇಂಧನ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ, ಜನರು ಇವಿಗಳತ್ತ ಮುಖ ಮಾಡುತ್ತಿರುವಾಗ ಸರ್ಕಾರದ ಈ ನಿರ್ಧಾರವು ನೀತಿಯಲ್ಲಿನ ದೊಡ್ಡ ಬದಲಾವಣೆಯಾಗಿದೆ.
ಅಧಿಕಾರಿಗಳ ಸಮರ್ಥನೆ ಏನು?
ಕರ್ನಾಟಕ ಸಾರಿಗೆ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಅವರು ಮಾತನಾಡಿ, “ವಿಧೇಯಕವು ಶಾಸಕಾಂಗದಲ್ಲಿ ಅಂಗೀಕಾರವಾಗಿದೆ ಮತ್ತು ರಾಜ್ಯಪಾಲರ ಅಂಕಿತದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ,” ಎಂದು ತಿಳಿಸಿದ್ದಾರೆ. ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, “ಇವಿ ಮಾರಾಟವು ಈಗ ಒಂದು ಹಂತಕ್ಕೆ ತಲುಪಿದೆ, ಆದ್ದರಿಂದ ವಿನಾಯಿತಿಗಳನ್ನು ಅನಿರ್ದಿಷ್ಟವಾಗಿ ಮುಂದುವರಿಸಲು ಸಾಧ್ಯವಿಲ್ಲ. ಆದರೂ, ಪೆಟ್ರೋಲ್/ಡೀಸೆಲ್ (ICE) ವಾಹನಗಳಿಗೆ ಹೋಲಿಸಿದರೆ ಇವಿಗಳ ಮೇಲಿನ ತೆರಿಗೆ ದರವು ಕಡಿಮೆಯಾಗಿರುತ್ತದೆ,” ಎಂದಿದ್ದಾರೆ.
ಖಾಸಗಿ ಬಸ್ ಮಾಲೀಕರಿಗೆ ಸಿಹಿ ಸುದ್ದಿ!
ಇದೇ ತಿದ್ದುಪಡಿಯಲ್ಲಿ ಸರ್ಕಾರವು ಖಾಸಗಿ ಬಸ್ ಮತ್ತು ಸ್ಲೀಪರ್ ಕೋಚ್ ಆಪರೇಟರ್ಗಳಿಗೆ ತೆರಿಗೆ ಕಡಿತದ ಕೊಡುಗೆ ನೀಡಿದೆ. ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳು (12 ಸೀಟ್ಗಿಂತ ಹೆಚ್ಚು), ಪ್ರತಿ ಸೀಟಿಗೆ 3,500 ರೂ. ಇದ್ದ ತೆರಿಗೆಯನ್ನು 2,500 ರೂ. ಗೆ ಇಳಿಸಲಾಗಿದೆ ಅದೇ ರೀತಿ ಸ್ಲೀಪರ್ ಕೋಚ್ಗಳ ಪ್ರತಿ ಬೆರ್ತ್ಗೆ 4,000 ರೂ. ಇದ್ದ ತೆರಿಗೆಯನ್ನು 3,000 ರೂ. ಗೆ ಇಳಿಸಲಾಗಿದೆ.
ತೆರಿಗೆ ಹೆಚ್ಚಿದ್ದ ಕಾರಣ ಅನೇಕ ಬಸ್ ಮಾಲೀಕರು ಪುದುಚೇರಿ ಅಥವಾ ಈಶಾನ್ಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡುತ್ತಿದ್ದರು. ಇದನ್ನು ತಡೆದು ರಾಜ್ಯದ ಆದಾಯ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಸ್ವಾಗತಿಸಿದ್ದಾರೆ.