
ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ಮುಸುಕುಧಾರಿ ಚಿನ್ನಯ್ಯನನ್ನು ಬೆಂಗಳೂರಿನಲ್ಲಿ ಮಹಜರು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪೀಣ್ಯದಲ್ಲಿ ಬುರುಡೆ ಪಡೆದಿದ್ದಾನೆಂಬ ಆರೋಪದ ಮೇಲೆ ಚಿನ್ನಯ್ಯನನ್ನು ವಿಚಾರಣೆ ನಡೆಸಲಾಗಿದ್ದು, ಮುಂದಿನ ತನಿಖೆಗಾಗಿ ತಮಿಳುನಾಡು ಮತ್ತು ಮಂಡ್ಯಕ್ಕೆ ಕರೆದೊಯ್ಯಲಾಗುವುದು.
ಬೆಂಗಳೂರು: ಧರ್ಮಸ್ಥಳ ಷಡ್ಯಂತ್ರ ಆರೋಪದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎಸ್ಐಟಿಗೆ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಚಿನ್ನಯ್ಯನನ್ನು ಮಹಜರು ಪ್ರಕ್ರಿಯೆಗಾಗಿ ವಿಶೇಷ ರಕ್ಷಣೆಯಲ್ಲಿ ಬೆಂಗಳೂರಿಗೆ ಕರೆತಂದು ತನಿಖೆ ನಡೆಸಲಾಗಿದೆ. ಪೀಣ್ಯ ಮಿನಿ ಕಾಲೋನಿಯಲ್ಲಿರುವ ಜಯಂತ್ ಎಂಬಾತನ ನಿವಾಸದಲ್ಲಿ ಪೊಲೀಸರು ಮಹಜರು ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ, ಜಯಂತ್ ಬಳಿಯಿಂದ ಬುರುಡೆ ಪಡೆದುಕೊಂಡಿದ್ದಾನೆಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮಹಜರು ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಚಿನ್ನಯ್ಯ ಮೊದಲಿಗೆ ಪೀಣ್ಯ ಮಿನಿ ಕಾಲೋನಿಯಲ್ಲಿದ್ದ ಜಯಂತ್ ನಿವಾಸಕ್ಕೆ ಭೇಟಿ ನೀಡಿ ಆತನಿಂದ ಬುರುಡೆ ಪಡೆದಿದ್ದಾನೆ. ಈ ಕುರಿತು ದೃಢೀಕರಣಕ್ಕಾಗಿ ಪೊಲೀಸರು ಜಯಂತ್ ಮನೆಯಲ್ಲಿ ತನಿಖೆ ಕೈಗೊಂಡರು. ಮಹಜರು ಸಮಯದಲ್ಲಿ ಚಿನ್ನಯ್ಯ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು, ಆತನ ಚಲನೆ ಮತ್ತು ಹೇಳಿಕೆಗಳನ್ನೆಲ್ಲಾ ವಿಡಿಯೋ ಚಿತ್ರೀಕರಿಸಲಾಯಿತು. ಸಂಪೂರ್ಣ ಪ್ರಕ್ರಿಯೆಯನ್ನು ಸೋಕೋ (Scene of Crime Officers) ತಂಡ ಸೂಕ್ಷ್ಮವಾಗಿ ಪರಿಶೀಲಿಸಿ ದಾಖಲೆ ಮಾಡಿದೆ. ಈ ವೇಳೆ ಯಾವುದೇ ಅನಾಹುತ ಅಥವಾ ಅಶಾಂತಿ ಉಂಟಾಗದಂತೆ ಮಾಡಲು ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಭದ್ರತೆ ಒದಗಿಸಿದರು.
ಪೊಲೀಸ್ ಮೂಲಗಳ ಪ್ರಕಾರ, ಚಿನ್ನಯ್ಯ ಮತ್ತು ಜಯಂತ್ ನಡುವಿನ ಸಂಪರ್ಕಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಚಿನ್ನಯ್ಯನನ್ನು ಮುಂದಿನ ಮಹಜರು ಪ್ರಕ್ರಿಯೆಗಾಗಿ ಹುಟ್ಟೂರಾದ ತಮಿಳುನಾಡು ಮತ್ತು ಮಂಡ್ಯ ಭಾಗಗಳಿಗೆ ಕರೆದುಕೊಂಡು ಹೋಗಲು ನಿರ್ಧಿರಿಸಲಾಗಿದೆಯಂತೆ. ಪೊಲೀಸರು ಚಿನ್ನಯ್ಯನ ಹೇಳಿಕೆಗಳು ಮತ್ತು ಜಯಂತ್ ಮನೆಯಿಂದ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಶೀಘ್ರದಲ್ಲೇ ಪ್ರಮುಖ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇಷ್ಟು ದಿನ ಬೆಳ್ತಂಗಡಿಯಲ್ಲಿ ತನಿಖೆ ನಡೆಯುತ್ತಿತ್ತು. ಇದೀಗ ವಿಸ್ತರಣೆಯಾಗಿದ್ದು ಚಿನ್ನಯ್ಯ ಮತ್ತು ಬುರುಡೆ ಗ್ಯಾಂಗ್ ಏನೆಲ್ಲಾ ಈವರೆಗೆ ಷಡ್ಯಂತ್ರ ಮಾಡಿದೆಯೋ ಎಲ್ಲದರ ಬಗ್ಗೆ ಕೂಡ ತನಿಖೆ ನಡೆಯಲಿದೆ.