
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ದಾವಣಗೆರೆ (ಏ.07): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ತಾವೇ ಗೆಲ್ಲಲು ಉಚಿತ, ಖಚಿತ, ನಿಶ್ಚಿತ ಎನ್ನುತ್ತಿದ್ದವರಿಗೆ ಚುನಾವಣೆ ಹತ್ತಿರ ಬಂದಂತೆ ಚುನಾವಣೆ ಖಚಿತ, ಸೋಲು ನಿಶ್ಚಿತ ಎಂಬ ಅರಿವಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ.
ಅಹಿಂದ ಜಪ ಮಾಡುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗದ ಅಭ್ಯರ್ಥಿಗೆ ಮತ ಹಾಕಬೇಡಿ, ಮುಸ್ಲಿಮರಿಗೆ ಮತ ಹಾಕಬೇಡಿ ಎನ್ನುತ್ತಾರೆ. ಬಾಗಲಕೋಟೆಯಲ್ಲಿ ಅಹಿಂದಗೆ ಮತ ಹಾಕಿ ಎನ್ನುತ್ತಾರೆ ಎಂದರು. ಮುಸಲ್ಮಾನರಿಂದಲೇ ಸರ್ಕಾರ ಮಾಡಿದ್ದೇವೆನ್ನುವ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮುಸ್ಲಿಮರಿಗೆ ದೋಖಾ ಆಗಿದೆ. ಹಿಂದೂಗಳಿಗೆ ಓಟಿಗೆ ₹5ರಿಂದ ₹7 ಸಾವಿರ, ಮುಸ್ಲಿಮರಿಗೆ ಓಟಿಗೆ ₹10 ಸಾವಿರಗಳನ್ನು ಕಾಂಗ್ರೆಸ್ಸಿನವರು ನೀಡುತ್ತಿದ್ದಾರಂತೆ.
ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸಂಪತ್ತಿಗೆ ಸವಾಲು ಹಾಕಿದ್ದಾರೆ ಎಂದು ತಿಳಿಸಿದರು. ನಿಮ್ಮ ಸಂಪತ್ತು ದಕ್ಷಿಣ ಕ್ಷೇತ್ರದಲ್ಲಿ ಏನೂ ಕೆಲಸ ಮಾಡುವುದಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪನೇ ಇಲ್ಲಿ ಗೆಲ್ಲುವುದು ನಿಶ್ಚಿತ. ದಲಿತರ ಓಟುಗಳಂತೂ ಕಾಂಗ್ರೆಸ್ಸಿಗೆ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ದಲಿತರಿಗೆ ಕಾಂಗ್ರೆಸ್ ಸರ್ಕಾರ ದೋಖಾ ಮಾಡಿದೆ. ನಾವು ಮುಸಲ್ಮಾನರ ವಿರೋಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಬಹಿರಂಗ ಸಭೆಗೆ ಹಣ ಕೊಟ್ಟು, ಜನರನ್ನು ಸೇರಿಸಿ, ಭಾಷಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಏ.7ರಂದು ಸಂಜೆ 5 ಗಂಟೆ ಒಳಗಾಗಿ ಕ್ಷೇತ್ರದಿಂದ ಹೊರಗೆ ಹೋಗಬೇಕು. ಸಿಎಂ ಸಿದ್ದರಾಮಯ್ಯ ವಾಮಮಾರ್ಗ ಹಿಡಿದಿದ್ದಾರೆ. ಇದು ಸಿದ್ದರಾಮಯ್ಯ ರಾಜಕೀಯ ಜೀವನದ ಅಂತ್ಯದ ದಿನಗಳಾಗಿವೆ. ಇನ್ನು ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ದಾವಣಗೆರೆಗೆ ಬರುವುದಿಲ್ಲ ಎಂದು ಅವರು ಭವಿಷ್ಯ ನುಡಿದರು. ಕಾಂಗ್ರೆಸ್ಸಿನ ನಾಯಕರು ಜಮೀರ್ ಅಹಮ್ಮದ್ ಕಾಲು ಹಿಡಿದು, ಭಾನುವಾರ ದಾವಣಗೆರೆಗೆ ಕರೆದುಕೊಂಡು ಬಂದಿದ್ದಾರೆ.
ಬಿಜೆಪಿ ಜಯ ಸಾಧಿಸಲಿದೆ
ಓಟಿಗಾಗಿ ಕಬಾಬು ತಿನ್ನಿಸುವ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವು ತಲುಪಿದೆ. ಕಾಂಗ್ರೆಸ್ಸಿನ ನಾಯಕರು ಏನೇ ಮಾಡಿದರೂ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪವಾಡ ಆಗುವುದಿಲ್ಲ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ತಿಳಿಸಿದರು. ಒಳ ಮೀಸಲಾತಿ ಮೂಲೆಗುಂಪು ಮಾಡಿ, ಗೊಂದಲವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ. ಒಳ ಮೀಸಲಾತಿ ವಿಚಾರದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅಜ್ಞಾನದಿಂದ ಮಾತನಾಡಿದ್ದಾರೆ. ಇದಕ್ಕೆಲ್ಲಾ ಮಿನಿಸ್ಟರ್ ಡಾ. ಎಚ್.ಸಿ.ಮಹದೇವಪ್ಪ ಕಾರಣ. ಇದರಲ್ಲಿ ಬಿಜೆಪಿ ಹಸ್ತಕ್ಷೇಪ ಇಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.