
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಹ*ತ್ಯೆಯಾಗಿದ್ದು, ಇದಕ್ಕೆ ಕರ್ನಾಟಕದ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಬಗ್ಗೆ ನಟ ಪ್ರಥಮ್, ನಮ್ಮ ಯೋಧರು ಸತ್ತಾಗ ಈ ಕಾಳಜಿ ಎಲ್ಲಿರುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ನಿನ್ನೆ ಹತ್ಯೆಯಾಗಿದ್ದಾರೆ. ಇದು ಇರಾನ್ ಮಾತ್ರವಲ್ಲದೇ ಹಲವಾರು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಮುಸ್ಲಿಂ ಸಮುದಾಯದವರಿಗೂ ಇನ್ನಿಲ್ಲದ ದಿಗ್ಭ್ರಮೆ ಮೂಡಿಸಿದೆ. ಹಲವಾರು ಮುಸ್ಲಿಂ ರಾಷ್ಟ್ರಗಳು ಸಂತಾಪ ಸೂಚಿಸಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಇನ್ನು ಭಾರತದಲ್ಲಿ ಕೂಡ ಖಮೇಲಿ ಹತ್ಯೆಗೆ ಹಲವಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಣ್ಣೀರು ಹಾಕುತ್ತಿದ್ದಾರೆ. ಕಪ್ಪು ಬಟ್ಟೆ ಧರಿಸಿ ಮೌನಾಚರಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಮಿಗಿಲಾಗಿಲ್ಲ. ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಮೂರು ದಿನ ಶೋಕಾಚರಣೆ, ಸ್ವಯಂಘೋಷಿತ ಬಂದ್ ಮಾಡಲಾಗಿದೆ. ಜನರು ಮಸೀದಿ ಬಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳು ಕೇಳಿಬಂದಿದೆ.
ಭಾರಿ ಟೀಕೆ
ಇದರ ಬಗ್ಗೆ ಇದಾಗಲೇ ಸಾಕಷ್ಟು ಟೀಕೆಗಳೂ ವ್ಯಕ್ತವಾಗುತ್ತಿರುವುದು ಇದೆ. ಭಾರತದಲ್ಲಿ ಮುಸ್ಲಿಮರು ಸೇಫಲ್ಲ ಎಂದು ಹೇಳುವವರು ಮುಸ್ಲಿಂ ರಾಷ್ಟ್ರಗಳನ್ನು ನೋಡಿ ಕಲಿಯಬೇಕಿದೆ, ಕಿಡಿ ಕಾರುವುದನ್ನು ಬಿಟ್ಟು ಭಾರತೀಯರು ಎಂದು ಒಪ್ಪಿಕೊಳ್ಳಬೇಕಿದೆ ಎಂದೆಲ್ಲಾ ಬುದ್ಧಿಮಾತು ಹೇಳುತ್ತಿರುವ ನಡುವೆಯೇ, ಅಲ್ಲಿಯ ನಾಯಕನಿಗೆ ಮಿಡಿದ ಮನಸ್ಸು ಇಲ್ಲಿ ನಮ್ಮ ಯೋಧರು ಸತ್ತಾಗ ಏಕೆ ಮಿಡಿಯುವುದಿಲ್ಲ ಎಂದು ಪ್ರತಿಯೊಬ್ಬ ಭಾರತೀಯನಿಗೆ ನಟ ಒಳ್ಳೆಯ ಹುಡುಗ ಪ್ರಥಮ್ ಪ್ರಶ್ನೆ ಮಾಡಿದ್ದಾರೆ.
ಪ್ರಥಮ್ ಪ್ರಶ್ನೆ
ಯಾರಿಗೂ ಬುದ್ಧಿ ಹೇಳಿ ಪ್ರಯೋಜನ ಇಲ್ಲ. ನಾವು ಮೊದ್ಲು ಸರಿ ಹೋಗ್ಬೇಕು, ನಾನು ಖಮೇನಿ ಸಾವನ್ನ ಸಂಭ್ರಮಿಸ್ತಾ ಇಲ್ಲ… ನಮ್ಮ ಯೋಧರ ಬಗ್ಗೆ ಕಾಳಜಿಯಿಂದ tweet ಮಾಡಿದೆ ಅಷ್ಟೇ! ಎಂದು ಶೀರ್ಷಿಕೆ ಕೊಟ್ಟು ಅನಿಸಿಕೆ ಹಂಚಿಕೊಂಡಿರುವ ಪ್ರಥಮ್ ಅವರು, ಖಮೇನಿ ಹತ್ಯೆಗೆ ಕಪ್ಪು ಬಟ್ಟೆ ಹಾಕಿ ಸ್ಟ್ರೈಕ್ ಮಾಡ್ತಿದ್ದೀರಲ್ಲ, ಇದೇ ಪೆಹಲ್ಗಾಮ್ನಲ್ಲಿ ನಮ್ಮವರು ಹತ್ಯೆಯಾದಾಗ ಮೂರು ದಿನ ಕಪ್ಪು ಬಟ್ಟೆ ಹಾಕಿದ್ರಾ? ಈಗ ಅಮೆರಿಕಕ್ಕಾ ಧಿಕ್ಕಾರ ಕೂಗೋ ನೀವು, ನಮ್ಮ ಯೋಧರು ಸತ್ತಾಗ ಪಾಕ್ ವಿರುದ್ಧ ಸ್ಟ್ರೈಕ್ ಮಾಡಿದ್ರಾ? ಹಿಂಗಾದ್ರೆ ದೇಶ ಉದ್ಧಾರ ಆಗೋದು ಕಷ್ಟ. ನಮ್ಮ ಯೋಧ ಸತ್ತಾಗಲೂ ನಿಮ್ಮ ಅಂಗಡಿ ಬಂದ್ ಮಾಡಿ, ದೇವ್ರು ಮೆಚ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.
ಅಲೀಪುರಕ್ಕೆ ಇದೆ ಖಮೇನಿ ಸಂಬಂಧ
ಗೌರಿಬಿದನೂರಿನ ಅಲೀಪುರ ಗ್ರಾಮ ಮಿನಿ ಇರಾನ್ ಎಂದು ಕರೆಯಲಾಗುತ್ತೆ. ಇಲ್ಲಿನ ಬಹುತೇಕರ ಸಂಬಂಧ ಇರಾನ್ ಜೊತೆಗಿದೆ. ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಇರಾನ್ನಲ್ಲಿ ನೆಲೆಸಿದ್ದಾರೆ. ಅಲೀಪುರದಿಂದ ಇರಾನ್ ಜೊತೆಗಿ ಮದುವೆ ಸಂಬಂಧಗಳು ಇವೆ. ಅಲೀಪುರದಲ್ಲಿ ಶಿಯಾ ಮುಸ್ಲಿಮರೇ ಪ್ರಾಬಲ್ಯ ಸಾಧಿಸಿದ್ದಾರೆ. 80ರ ದಶಕದಲ್ಲಿ ಆಯತೊಲ್ಲ ಖಮೇನಿ ಇದೇ ಅಲೀಪುರಕ್ಕೆ ಭೇಟಿ ನೀಡಿದ್ದರು. ಈ ಭೇಟಿ ಬಳಿಯ ಇಲ್ಲಿಯ ಆಸ್ಪತ್ರೆ ಖಮೇನಿ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗಿದೆ.