
ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ, ತಮಿಳುನಾಡು ಚುನಾವಣೆಯಲ್ಲಿ ಮೆಟ್ಟೂರು ಕ್ಷೇತ್ರದಿಂದ ನಾಮ್ ತಮಿಳರ್ ಕಚ್ಚಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿದ್ದು, ಈ ಹಿಂದೆ ಅವರು ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿದ್ದರು.
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಪಕ್ಕದಲ್ಲಿನ ಮೆಟ್ಟೂರಿನಿಂದ ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ ಕಣಕ್ಕಿಳಿದಿದ್ದಾರೆ.
ನಾಂ ತಮಿಳ್ ಕಚ್ಚಿ(ಎನ್ಟಿಕೆ) ಪಕ್ಷದಿಂದ ಸ್ಪರ್ಧಿಸಿರುವ ವಿದ್ಯಾರಾಣಿ 6.98 ಲಕ್ಷ ರು. ಚರಾಸ್ತಿ ಘೋಷಿಸಿಕೊಂಡಿದ್ದು, ಬ್ಯಾಂಕ್ನಲ್ಲಿ 3.5 ಲಕ್ಷ ರು. ಸಾಲ ಇದೆ ಎಂದು ತಿಳಿಸಿದ್ದಾರೆ. ಸ್ಥಿರಾಸ್ತಿಗಳು ಇಲ್ಲ ಎಂದು ನಾಮಪತ್ರದಲ್ಲಿ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮೆಟ್ಟೂರಿನ ಹಿನ್ನೀರಿನ ಮೂಲೆಕಾಡಿನಲ್ಲಿರುವ ವೀರಪ್ಪನ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಅಖಾಡಕ್ಕೆ ಧುಮುಕಿದ್ದಾರೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೂಡ ಈ ಹಿಂದೆ ಚುನಾವಣೆಯಲ್ಲಿ ಆಸಕ್ತಿ ತೋರಿದ್ದರಾದರೂ ಈ ಬಾರಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಡಿಕೆಶಿಯನ್ನು ಭೇಟಿಯಾಗಿದ್ದ ವಿದ್ಯಾರಾಣಿ
ಮೆಟ್ಟೂರಿನ ಹಿನ್ನೀರಿನ ಮೂಲೆಕಾಡು ಎಂಬಲ್ಲಿರುವ ವೀರಪ್ಪನ್ ಸಮಾಧಿಗೆ ಪುತ್ರಿ ವಿದ್ಯಾ ಪೂಜೆ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು.
2020ರಲ್ಲಿ ತಮಿಳುನಾಡು ರಾಜಕಾರಣಕ್ಕೆ ಪ್ರವೇಶಿಸಿದ ವಿದ್ಯಾರಾಣಿ ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆನಂತರ ಬಿಜೆಪಿ ತೊರೆದ ಅವರು, ನಾಮ್ ತಮಿಲರ್ ಕಚ್ಚಿ (ಎನ್ಟಿಕೆ) ಪಕ್ಷ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: Davanagere Bypoll 2026: ನಾವೊಬ್ಬರೇ ಅಲ್ಲ ಮೋದಿನೂ ಸಾಲಗಾರ ಎಂದ ಡಿಸಿಎಂ; ₹15 ಲಕ್ಷದ ಭರವಸೆ ಏನಾಯ್ತು? ಡಿಕೆಶಿ ಪ್ರಶ್ನೆ
ಚುನಾವಣೆ ದಿನಾಂಕಗಳು
ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏಪ್ರಿಲ್ 23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. 5 ರಾಜ್ಯಗಳ ಒಟ್ಟು 824 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು 17.4 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದಾರೆ . ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆದ್ರೆ ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಮಧುಗಿರಿ ಬೆಟ್ಟದಲ್ಲಿ ನೀಳ ದೇಹ, ಮೊನಚಾದ ತಲೆಯುಳ್ಳ ‘ನಾಗಾರ್ಜುನ ಸಾಗರ ರೇಸರ್’ ಹಾವು ಪತ್ತೆ