
<p><strong>ಹಾವೇರಿ (ಮಾ.6):</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ ಅಭಿವೃದ್ಧಿ ಶೂನ್ಯ ಮತ್ತು ಪ್ರಗತಿ ರಹಿತವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದ್ದಾರೆ.</p><h2>ದಿಕ್ಕು ದೆಸೆ ಇಲ್ಲದ ಶೂನ್ಯ ಬಜೆಟ್</h2><p>ರಾಜ್ಯ ಬಜೆಟ್ ವಿಚಾರವಾಗಿ ಇಂದು ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೊಂದು ದಿಕ್ಕು ದೆಸೆ ಇಲ್ಲದ ಬಜೆಟ್. 17 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಮಟ್ಟದ ಬಜೆಟ್ ಮಂಡನೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.</p><h3>ಸಾಲದ ಸುಳಿಯಲ್ಲಿ ಕರ್ನಾಟಕ</h3><p>ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಅಧೋಗತಿಗೆ ತಳ್ಳಿದೆ ಎಂದು ಆರೋಪಿಸಿದ ಬೊಮ್ಮಾಯಿ ಅವರು, ‘ಸರ್ಕಾರ ಬರೋಬ್ಬರಿ 1 ಲಕ್ಷದ 32 ಸಾವಿರದ 100 ಕೋಟಿ ರೂಪಾಯಿ ಸಾಲ ಮಾಡಿದೆ. ಇದಕ್ಕೆ ಪೂರಕವಾಗಿ ಈಗ ಮತ್ತೆ 25 ಸಾವಿರ ಕೋಟಿ ರೂಪಾಯಿ ಹೊಸ ಸಾಲಕ್ಕೆ ಕೈಹಾಕಿದೆ. ಈ ಬಜೆಟ್ ರಾಜ್ಯವನ್ನು ಸಾಲದ ಶೂಲಕ್ಕೆ ದೂಡುತ್ತಿದೆ. ಒಟ್ಟಾರೆಯಾಗಿ ಕರ್ನಾಟಕವನ್ನು 15 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದು ಅಂಕಿಅಂಶಗಳ ಸಹಿತ ವಾಗ್ದಾಳಿ ನಡೆಸಿದರು.</p><h3>ನೀರಾವರಿ ಯೋಜನೆಗಳಿಗೆ ಎಳ್ಳುನೀರು</h3><p>ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಈ ಬಜೆಟ್ನಲ್ಲಿ ಅನ್ಯಾಯವಾಗಿದೆ ಎಂದು ಬೊಮ್ಮಾಯಿ ದೂರಿದ್ದಾರೆ. ದೊಡ್ಡ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಲಾಗಿದೆ. ಅದರಲ್ಲೂ ರಾಜ್ಯದ ಜೀವನಾಡಿಯಾದ ‘ಕೃಷ್ಣಾ ಮೇಲ್ದಂಡೆ’ ಯೋಜನೆಗೆ ಸರ್ಕಾರ ನಯಾಪೈಸೆ ಹಣ ಮೀಸಲಿಟ್ಟಿಲ್ಲ. ನೀರಾವರಿ ವಿಚಾರದಲ್ಲಿ ಈ ಸರ್ಕಾರಕ್ಕೆ ಕನಿಷ್ಠ ಆಸಕ್ತಿಯೂ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.</p><h3>ಒಳಮೀಸಲಾತಿ ಜಾರಿಗೆ ಕುಂಟು ನೆಪ</h3><p>ರಾಜ್ಯದಲ್ಲಿ ಉಂಟಾಗಿರುವ ಒಳಮೀಸಲಾತಿ ಗೊಂದಲಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದು ಬೊಮ್ಮಾಯಿ ಗುಡುಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲೇ ಈ ಕುರಿತು ತೀರ್ಮಾನವಾಗಿದ್ದರೂ, ಈಗ ಸಚಿವರಲ್ಲೇ ಭಿನ್ನಾಭಿಪ್ರಾಯ ಮೂಡಿಸಿ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದು ವಾಗ್ದಾಳಿ ನಡೆಸಿದರು.</p><p><strong>ಬಿಜೆಪಿಯಿಂದ ಬೀದಿಗಿಳಿದು ಹೋರಾಟದ ಎಚ್ಚರಿಕೆ</strong></p><p>ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ಕೂಡಲೇ ತಿದ್ದುಪಡಿ ತಂದು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ ಮಾಜಿ ಸಿಎಂ, ಒಂದು ವೇಳೆ ಸರ್ಕಾರ ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.</p>
Source link
Karnataka Budget 2026: ರಾಜ್ಯಕ್ಕೆ 'ಸಾಲ'ದ ಭಾಗ್ಯ, ಅಭಿವೃದ್ಧಿಗೆ ಎಳ್ಳುನೀರು, ಇದೊಂದು ರೈತ ವಿರೋಧಿ ಬಜೆಟ್ -ಬೊಮ್ಮಾಯಿ ಕಿಡಿ