
ಸರ್ಕಾರಿ ನೌಕರಿ, ಕೈತುಂಬಾ ಸಂಬಳ ಬರುತ್ತಿದ್ದರೂ ತನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು, ಸ್ವತಃ ತಾಯಿಯೇ ಚಲಿಸುತ್ತಿದ್ದ ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಳ್ಳಿ ಸಾಯಿಸಲು ಯತ್ನಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಘಟನೆ ನಡೆದಿದ್ದೆಲ್ಲಿ? ತಾಯಿ ಮಗಳನ್ನ ರೈಲಿಗೆ ತಳ್ಳಿದ್ದೇಕೆ? ಇಲ್ಲಿದೆ ವಿವರ..
ಕೈತುಂಬಾ ಕಾಸು ಬರುವಂತಹ ಸರ್ಕಾರಿ ನೌಕರಿ ಇದ್ದರೂ, ತನ್ನ ಜೊತೆಗೆ ಕರೆದೊಯ್ಯುತ್ತಿದ್ದ ಒಬ್ಬಳೇ ಒಬ್ಬಳು ಮಗಳನ್ನು ಚಲಿಸುತ್ತಿದ್ದ ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಳ್ಳಿ ಸಾಯಿಸಲು ಯತ್ನಿಸಿದ ಘಟನೆ ಇಡೀ ಮಾನವ ಕುಲಕ್ಕೇ ಕಪ್ಪು ಚುಕ್ಕೆಯಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ, ಇದರ ಹಿಂದಿನ ಕಾರಣವೇನು ಎಂಬುದನ್ನು ನೋಡೋಣ ಬನ್ನಿ..
ಸರ್ಕಾರಿ ನೌಕರಿ ಮಾಡುವ ಹೆಂಡತಿ, ಪ್ರೀತಿ ಮಾಡುವ ಗಂಡ ಹಾಗೂ ಪ್ರೀತಿಗೆ ಸಾಕ್ಷಿಯಾಗಿ ಒಂದು ಮುದ್ದಾದ ಹೆಣ್ಣು ಮಗು ಇರುವ ಸುಂದರ ಕುಟುಂಬ. ಆದರೆ, ಇತ್ತೀಚೆಗೆ ಈ ಕುಟುಂಬದಲ್ಲಿ ಗಂಡ ತೀರಿಕೊಂಡ ಬಳಿಕ ಈ ಮಹಿಳೆ ತನ್ನ 8 ವರ್ಷದ ಮಗಳನ್ನು ಚಲಿಸುತ್ತಿದ್ದ ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಳ್ಳಿದ್ದಾಳೆ. ಮಗು ಗಂಭೀರ ಗಾಯಗೊಂಡು ನರಳುತ್ತಿದ್ದರೂ, ರಕ್ಷಣೆಗೆ ಹೋದವರನ್ನು ಪ್ಲೀಸ್ ದಯಮಾಡಿ ಮಗಳನ್ನು ರಕ್ಷಣೆ ಮಾಡಬೇಡಿ ಎಂದು ತಡೆದು ಕೂಗಾಡಿದ್ದಾಳೆ.
ರೈಲಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಗು
ಈ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ತಾನೇ ಜನ್ಮ ನೀಡಿದ 8 ವರ್ಷದ ಮಗಳನ್ನು ತಾಯಿಯೇ ಚಲಿಸುತ್ತಿದ್ದ ರೈಲಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಅಂತರರಾಜ್ಯ ಸಂಚಾರ ಮಾಡುವ ಚೆನ್ನೈ ಎಕ್ಸ್ಪ್ರೆಸ್ ರೈಲಿನಡಿ ಸಿಲುಕಿದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇನ್ನು ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಇದರ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವಿನ ತಲೆ ಮತ್ತು ಸೊಂಟಕ್ಕೆ ಗಂಭೀರ ಪೆಟ್ಟಾಗಿದ್ದು, ಸಾಕಷ್ಟು ರಕ್ತಸ್ರಾವವಾಗಿದೆ. ಮೊದಲು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಸ್ಥಿತಿ ಗಂಭೀರವಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್ನ ಆಸ್ಪತ್ರೆಗೆ ರವಾನಿಸಲಾಗಿದೆ.
ಸರ್ಕಾರಿ ಉದ್ಯೋಗಿ ಆಗಿರುವ ತಾಯಿ
ಎರಡನೇ ತರಗತಿ ಓದುತ್ತಿದ್ದ ಈ ಬಾಲಕಿ, ಸರ್ಕಾರಿ ಉದ್ಯೋಗಿಯಾಗಿರುವ ತನ್ನ ತಾಯಿಯೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಗಂಡ ತೀರಿಕೊಂಡ ಬಳಿಕ, ತಾಯಿ-ಮಗಳು ಇಬ್ಬರೇ ವಾಸಿಸುತ್ತಿದ್ದರು. ಘಟನೆ ನಡೆಯುವುದಕ್ಕೂ ಮೂರು ಗಂಟೆ ಮುಂಚೆಯೇ ಇಬ್ಬರೂ ಪ್ಲಾಟ್ಫಾರ್ಮ್ನಲ್ಲಿದ್ದರು. ರಾತ್ರಿ 7:40ರ ಸುಮಾರಿಗೆ ತಮಿಳುನಾಡಿಗೆ ಹೋಗುವ ಚೆನ್ನೈ ಎಕ್ಸ್ಪ್ರೆಸ್ ರೈಲು ಬಂದಾಗ, ತಾಯಿ ತನ್ನ ಮಗಳನ್ನು ಒಂದನೇ ಪ್ಲಾಟ್ಫಾರ್ಮ್ನಿಂದ ಹಳಿಗೆ ತಳ್ಳಿದ್ದಾಳೆ.
ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿದ್ದ ಮಗುವನ್ನು ರೈಲು ಹೋದ ನಂತರ ಸ್ಥಳೀಯರು ರಕ್ಷಿಸಲು ಮುಂದಾದರು. ಆದರೆ, ತಾಯಿ ಅವರನ್ನು ತಡೆದು, ‘ಮಗುವನ್ನು ರಕ್ಷಿಸಬೇಡಿ’ ಎಂದು ಕೂಗಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.