
ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯ ಹೊಸಕೋಟೆ ಭಾಗವು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ನೈಋತ್ಯ ರೈಲ್ವೆ ನಡುವಿನ ರೈಲ್ವೆ ಮೇಲ್ಸೇತುವೆ ಅನುಮೋದನೆ ವಿವಾದದಿಂದಾಗಿ ಅಪೂರ್ಣಗೊಂಡಿದೆ. .
ಬೆಂಗಳೂರು (ಏ.8): ಒಟ್ಟು 280.8 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (NH-948A) ಯೋಜನೆಯಡಿ ಹೊಸಕೋಟೆಯಿಂದ ತಮಿಳುನಾಡು ಗಡಿಯವರೆಗಿನ 20.9 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಉಳಿದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ನೈಋತ್ಯ ರೈಲ್ವೆ (SWR) ನಡುವಿನ ಅನುಮೋದನೆಗಳ ಜಟಾಪಟಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಮೇಲೆ ಅಳವಡಿಸಬೇಕಾದ 54 ಮೀಟರ್ ಉದ್ದದ ‘ಬೌಸ್ಟ್ರಿಂಗ್ ಗರ್ಡರ್’ (Bowstring Girder) ಕಾಮಗಾರಿ ವಿಳಂಬವೇ ಈ ಒಟ್ಟು 20.9 ಕಿ.ಮೀ ರಸ್ತೆ ಬಳಕೆಗೆ ಮುಕ್ತವಾಗದಿರಲು ಕಾರಣ. ಈ ಯೋಜನೆಯನ್ನು 2022ರಲ್ಲಿ ಎಸ್ ಅಂಡ್ ಪಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಸ್ಕೈಲಾರ್ಕ್ ಇನ್ಫ್ರಾ ಇಂಜಿನಿಯರಿಂಗ್ ಜಂಟಿ ಸಂಸ್ಥೆಗೆ ನೀಡಲಾಗಿತ್ತು. ರಸ್ತೆಯ ಬಹುತೇಕ ಭಾಗ ಪೂರ್ಣಗೊಂಡಿದ್ದರೂ, ರೈಲ್ವೆ ಮೇಲ್ಸೇತುವೆಯ (ROB) ಒಂದು ಸಣ್ಣ ಭಾಗ ನಾಲ್ಕು ವರ್ಷಗಳಿಂದ ಅಪೂರ್ಣವಾಗಿದೆ.
ಟ್ರಾಫಿಕ್ ಸಮಸ್ಯೆ ಮುಂದುವರಿಕೆ
ಈ ರಸ್ತೆ ಪೂರ್ಣಗೊಳ್ಳದ ಕಾರಣ, ಬೆಂಗಳೂರಿನ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಸಂಚರಿಸಬೇಕಾದ ಭಾರಿ ಟ್ರಕ್ಗಳು ಇಂದಿಗೂ ನಗರದ ಒಳಗಿನ ರಸ್ತೆಗಳ ಮೂಲಕವೇ ಹಾದುಹೋಗುತ್ತಿವೆ. ಇದರಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತಿಲ್ಲ. “ನಾವು ಈ ವಿಭಾಗದ 20.25 ಕಿ.ಮೀ ಕಾಮಗಾರಿ ಮುಗಿಸಿದ್ದೇವೆ, ಕೇವಲ ರೈಲ್ವೆ ಸ್ಪ್ಯಾನ್ ಕೆಲಸವಷ್ಟೇ ಬಾಕಿಯಿದೆ,” ಎಂದು NHAI ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನುಮೋದನೆಗಳ ಜಟಾಪಟಿ
2024ರ ಏಪ್ರಿಲ್ 5ರಂದು ಸೇತುವೆಯ ವಿನ್ಯಾಸದ (GAD) ಪರಿಷ್ಕೃತ ನಕ್ಷೆಗೆ ಅನುಮೋದನೆ ಸಿಕ್ಕಿತ್ತು., ಏಪ್ರಿಲ್ 2ರಂದು ಗರ್ಡರ್ ಅಳವಡಿಕೆಯ ವಿಧಾನದ (TAD) ನಕ್ಷೆಯನ್ನು ಸಲ್ಲಿಕೆ ಮಾಡಲಾಗಿತ್ತು. 2026ರ ಜನವರಿ 29ರಂದು ನೈಋತ್ಯ ರೈಲ್ವೆಯಿಂದ ಇದಕ್ಕೆ ಕೇವಲ ತಾತ್ವಿಕ ಅನುಮೋದನೆ ಸಿಕ್ಕಿದೆ, ಆದರೆ ಅಂತಿಮ ಅನುಮೋದನೆ ಇನ್ನೂ ಬಾಕಿಯಿದೆ ಎಂದು NHAI ಅಧಿಕಾರಿಗಳು ಹೇಳಿದ್ದಾರೆ. ಅನುಮೋದನೆ ಸಿಕ್ಕರೂ ಸಹ, ರೈಲು ಸಂಚಾರವನ್ನು ನಿಲ್ಲಿಸಿ ಗರ್ಡರ್ ಅಳವಡಿಸಲು ಪ್ರತ್ಯೇಕ ‘ಬ್ಲಾಕ್’ ಸಮಯವನ್ನು ರೈಲ್ವೆಯಿಂದ ಪಡೆಯಬೇಕಾಗುತ್ತದೆ. ಇದು ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸುವ ಸಾಧ್ಯತೆಯಿದೆ.
NHAI ವಿರುದ್ಧ ರೈಲ್ವೆ ಪ್ರತ್ಯುತ್ತರ
NHAI ಆರೋಪಗಳನ್ನು ನೈಋತ್ಯ ರೈಲ್ವೆ ನಿರಾಕರಿಸಿದೆ. ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕಣಮಡಿ ಮಾತನಾಡಿ, “ಸೇತುವೆ ಕಾಮಗಾರಿ ನಡೆಸುವ ಸ್ಥಳ ಇನ್ನೂ ಸಿದ್ಧವಾಗಿಲ್ಲ. TAD ಅನುಮೋದನೆಯಾಗಿಲ್ಲ ಏಕೆಂದರೆ ಅದನ್ನು ತಾಂತ್ರಿಕ ಪರಿಶೀಲನೆಗಾಗಿ ಇತ್ತೀಚೆಗಷ್ಟೇ ಬೆಂಗಳೂರು ವಿಭಾಗಕ್ಕೆ ಸಲ್ಲಿಸಲಾಗಿದೆ. ಗರ್ಡರ್ ಜೋಡಿಸುವ ಕೆಲಸ ಪೂರ್ಣಗೊಂಡಿಲ್ಲ, ಆದ್ದರಿಂದ RDSO ತಪಾಸಣೆ ಬಾಕಿಯಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
STRR-ವೆಸ್ಟ್ ಕಾಮಗಾರಿಯೂ ಅನಿಶ್ಚಿತ
ಇನ್ನೊಂದೆಡೆ, ಕೇಂದ್ರ ಸರ್ಕಾರವು ಭಾರತ್ಮಾಲಾ ಪರಿಯೋಜನೆಯಡಿ ವಿಳಂಬ ಮತ್ತು ವೆಚ್ಚ ಹೆಚ್ಚಳದ ಕಾರಣ ನೀಡಿ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಿರುವುದರಿಂದ STRR ಪಶ್ಚಿಮ ವಿಭಾಗದ ಕಾಮಗಾರಿಯೂ ಅನಿಶ್ಚಿತತೆಯಲ್ಲಿದೆ. ಸೆಪ್ಟೆಂಬರ್ 2024ರಲ್ಲಿ ನೀಡಲಾಗಿದ್ದ 4,750 ಕೋಟಿ ರೂ.ಗಳ ಟೆಂಡರ್ಗಳನ್ನು ಜನವರಿ 2025ರಲ್ಲಿ ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಈವರೆಗೂ ಬಿಡ್ಗಳು ಓಪನ್ ಆಗಿಲ್ಲ.
STRR ಉದ್ದೇಶವೇನು?
280 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ವೇ ಬೆಂಗಳೂರಿನ ಸುತ್ತಮುತ್ತಲಿನ 12 ಸ್ಯಾಟಲೈಟ್ ಟೌನ್ಗಳನ್ನು (ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಮಾಗಡಿ ಇತ್ಯಾದಿ) ಸಂಪರ್ಕಿಸುತ್ತದೆ. ನಗರದ ಒಳಗೆ ಬರುವ ಸರಕು ಸಾಗಣೆ ವಾಹನಗಳನ್ನು ಹೊರವಲಯದಲ್ಲೇ ಸಂಚರಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಈ ಯೋಜನೆಗೆ 2005ರಲ್ಲಿ ಪ್ರಸ್ತಾವನೆ ಸಲ್ಲಿಸಿ, 2022ರಲ್ಲಿ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ಮಾಡಿದ್ದರು.