
ತಂಗಿಯ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ಅಣ್ಣನ ಕಾರಿಗೆ ಚಲಿಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿ ನಡೆದ ಈ ಘಟನೆಯಲ್ಲಿ ಮಾರುತಿ ಓಮಿನಿ ಕಾರು ಸಂಪೂರ್ಣ ಭಸ್ಮವಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ (ಮಾ.8): ತಂಗಿಯ ಮದುವೆ ಸಂಭ್ರಮದಲ್ಲಿ ದೂರದೂರಿನ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ನೀಡಲು ತೆರಳಿದ್ದ ವೇಳೆ ಮಾರ್ಗಮಧ್ಯೆ ಆಘಾತಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದಾಗಲೇ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಕಾರು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ತಂಗಿಯ ಮದುವೆ ಕಾರ್ಡ್ ಹಂಚಲು ಹೋಗಿದ್ದ ಅಣ್ಣ!
ದ್ಯಾಮ್ಲಾಪುರ ಗ್ರಾಮದ ಶ್ರೀಕಾಂತ್ ಎಂಬುವವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಂಗಿಯ ಮದುವೆ ನಿಶ್ಚಿತಾರ್ಥವಾಗಿ, ಅದರ ಆಮಂತ್ರಣ ಪತ್ರಿಕೆ ನೀಡಲು ತಮ್ಮ ದೊಡ್ಡಪ್ಪ ಗಂಗಾಧರ ಗೌಡ ಅವರೊಂದಿಗೆ ಮಾರುತಿ ಓಮಿನಿ ಕಾರಿನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. ಎಲ್ಲರಿಗೂ ಕಾರ್ಡ್ ನೀಡಿ ವಾಪಸ್ ಊರಿಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮಧ್ಯರಾತ್ರಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
ಶನಿವಾರ ರಾತ್ರಿ ಸುಮಾರು 10.20ರ ಸಮಯದಲ್ಲಿ ಬೆಳ್ಳೂರು ಗ್ರಾಮದ ಬಳಿ ಕಾರು ಬರುತ್ತಿದ್ದಾಗ, ಇಂಜಿನ್ ಭಾಗದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ವೈರ್ ಶಾರ್ಟ್ ಸರ್ಕ್ಯೂಟ್ ಆಗಿದ್ದೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಶ್ರೀಕಾಂತ್ ಮತ್ತು ಗಂಗಾಧರ ಗೌಡ ಅವರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ಇಳಿಯುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ನೋಡುನೋಡುತ್ತಿದ್ದಂತೆಯೇ ಮಾರುತಿ ಓಮಿನಿ ಕಾರು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಸಮಯಪ್ರಜ್ಞೆಯಿಂದಾಗಿ ಇಬ್ಬರೂ ಕಾರಿನಿಂದ ಹೊರಬಂದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಗಮನಿಸಿ: ಬೇಸಿಗೆ ಕಾಲ ಆರಂಭವಾಗಿದೆ. ವಿಪರೀತ ಬಿಸಿಲು, ಶಾಖದಿಂದಾಗಿ ಕಾರುಗಳ ಇಂಜಿನ್ ಹೆಚ್ಚು ಬಿಸಿಯಾಗುತ್ತೆ ಅಥವಾ ಹಳೆಯ ವೈರಿಂಗ್ಗಳಿಂದ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲಾಂಗ್ ಡ್ರೈವ್ ಹೋಗುವ ಮುನ್ನ ಕಾರಿನ ಕಂಡೀಷನ್ ಪರೀಕ್ಷಿಸಿಕೊಂಡು ಹೋಗುವುದು ಒಳ್ಳೆಯದು.