ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು! | Belagavi Chikkodi Stray Dog Attack Yonger Man Gone To Coma Hukkeri News Sat

ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು! | Belagavi Chikkodi Stray Dog Attack Yonger Man Gone To Coma Hukkeri News Sat



ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು! | Belagavi Chikkodi Stray Dog Attack Yonger Man Gone To Coma Hukkeri News Sat

ಬೆಳಗಾವಿಯ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ನಡೆಸಿದ ಭೀಕರ ದಾಳಿಗೆ ಸಿಲುಕಿದ ಬಸವರಾಜ ಹೆಬ್ಬಾಳಿ ಎಂಬುವವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ (ಮಾ.31): ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಾಯಿಗಳ ಹಿಂಡಿನ ಭೀಕರ ದಾಳಿಗೆ ಸಿಲುಕಿದ ವ್ಯಕ್ತಿಯೊಬ್ಬರು ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬೀದಿ ನಾಯಿಗಳು ನಡೆಸಿದ ದಾಳಿಯ ತೀವ್ರತೆಗೆ ವ್ಯಕ್ತಿ ಕೋಮಾ ಸ್ಥಿತಿಗೆ ತಲುಪಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಘಟನೆಯ ವಿವರ:

ಹುಲ್ಲೋಳಿ ಹಟ್ಟಿ ಗ್ರಾಮದ ನಿವಾಸಿ ಬಸವರಾಜ ಹೆಬ್ಬಾಳಿ ಎಂಬುವವರೇ ನಾಯಿಗಳ ದಾಳಿಗೆ ತುತ್ತಾದ ದುರ್ದೈವಿ. ಗ್ರಾಮದಲ್ಲಿ ಓಡಾಡುತ್ತಿದ್ದ ಬೀದಿ ನಾಯಿಗಳ ಹಿಂಡು ಏಕಾಏಕಿ ಬಸವರಾಜ ಅವರ ಮೇಲೆ ದಾಳಿ ಮಾಡಿದೆ. ನಾಯಿಗಳು ಮೈಯೆಲ್ಲಾ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಸವರಾಜ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಪ್ರಸ್ತುತ ಅವರಿಗೆ ಬೆಳಗಾವಿಯ ಬಿಮ್ಸ್ (BIMS) ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ದಿನಗಳಿಂದ ಮುಂದುವರಿದ ಹಾವಳಿ:

ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಇಂದು ನಿನ್ನೆಯದಲ್ಲ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ 18 ವರ್ಷದ ಯುವಕನ ಮೇಲೆ ಇದೇ ರೀತಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ನಿತ್ಯವೂ ಬೀದಿ ನಾಯಿಗಳ ದಾಳಿಯ ಭೀತಿಯಲ್ಲೇ ಗ್ರಾಮದ ಜನ ಕಾಲ ಕಳೆಯುವಂತಾಗಿದೆ. ಮಕ್ಕಳು, ವೃದ್ಧರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಗ್ರಾಮ ಪಂಚಾಯತಿ ವಿರುದ್ಧ ಜನರ ಹಿಡಿಶಾಪ:

ಬಸವರಾಜ ಹೆಬ್ಬಾಳಿ ಅವರ ಸ್ಥಿತಿ ಕಂಡು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ‘ಬೀದಿ ನಾಯಿಗಳ ಹಾವಳಿ ತಡೆಯುವಂತೆ ಹಲವಾರು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ಒಬ್ಬ ವ್ಯಕ್ತಿ ಜೀವನ್ಮರಣದ ನಡುವೆ ಹೋರಾಡುವಂತಾಗಿದೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯ ನಂತರವೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಅಧಿಕಾರಿಗಳ ಗಮನಕ್ಕೆ:

ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಪಂಚಾಯತ್ ರಾಜ್ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ, ದಾಳಿ ನಡೆಸುತ್ತಿರುವ ನಾಯಿಗಳನ್ನು ಸೆರೆಹಿಡಿಯುವ ಕೆಲಸವಾಗಬೇಕಿದೆ. ಬಸವರಾಜ ಹೆಬ್ಬಾಳಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಬೀದಿ ನಾಯಿಗಳ ಸಮಸ್ಯೆಯು ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗಿಲ್ಲ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ದಿನೇ ದಿನೇ ಈ ಸಮಸ್ಯೆ ಬೃಹತ್ತಾಗಿ ಬೆಳೆಯುತ್ತಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಪ್ರಾಣ ರಕ್ಷಣೆಗೆ ಮುಂದಾಗಬೇಕಿದೆ.



Source link

Leave a Reply

Your email address will not be published. Required fields are marked *