
ಈ ಪ್ರಕರಣದಲ್ಲಿ ನಟಿ ಎವಿಆರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, “ನನ್ನ ಪಾಡಿಗೆ ನನ್ನನ್ನು ಬಿಡುತ್ತಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನಟಿಯ ದೂರಿನ ಪ್ರಕಾರ, 2021ರಲ್ಲಿ ಶ್ರೀಲಂಕಾದಲ್ಲಿ ನಡೆದ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಿದ ಸಂದರ್ಭದಲ್ಲಿ ಎವಿಆರ್ ರೆಡ್ಡಿಯವರ ಪರಿಚಯವಾಗಿತ್ತು. ಆ ಬಳಿಕ ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆದು, ಪರಿಚಯ ಇನ್ನಷ್ಟು ಆತ್ಮೀಯತೆಯ ಹಂತಕ್ಕೆ ತಲುಪಿತು. ಕೆಲ ದಿನಗಳ ಕಾಲ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದರು ಎಂದು ನಟಿ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದರು.
ಆದರೆ, ನಂತರ ಎವಿಆರ್ ರೆಡ್ಡಿಯ ವರ್ತನೆ ಸರಿಯಿಲ್ಲವೆಂದು ಅನಿಸಿದ ಕಾರಣ ತಾವು ಅವರಿಂದ ದೂರವಾಗಲು ನಿರ್ಧರಿಸಿದ್ದಾಗಿ ನಟಿ ಆರೋಪಿಸಿದ್ದಾರೆ. ದೂರವಾದ ನಂತರ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದ್ದು, ತಮ್ಮ ವಾಸದ ಮನೆಯ ಮಾಲಿಕರಿಗೆ ಅನಾಮಧೇಯ ಪತ್ರ ಬರೆದು ಬೆದರಿಕೆ ಹಾಕಲಾಗಿದೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಿದ್ದರು.