ಬೆಳಗಾವಿ, (ಡಿಸೆಂಬರ್ 12): ಕರ್ನಾಟಕ ಕಾಂಗ್ರೆಸ್ ನಲ್ಲಿ (ಕರ್ನಾಟಕ ಕಾಂಗ್ರೆಸ್) ನಿಯಂತ್ರಣಕ್ಕೆ ಸಿಗದಂತೆ ಭುಗಿಲೆದ್ದಿರುವ ಸಿಎಂ ಕುರ್ಚಿ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಧಿವೇಶನಕ್ಕೂ ಮುನ್ನ ಹೈಕಮಾಂಡ್ ಏನೋ ತೇಪೆ ಹಾಕಿತ್ತು. ಅಧಿವೇಶನ ನಡೆಯುವಾಗಲೇ ಪಟ್ಟದ ಫೈಟ್ ಜ್ವಾಲಾಮುಖ ಸ್ಫೋಟಿಸಿದೆ. ಈ ಬೆಳವಣಿಗೆಗಳ ನಡುವೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್ (ಬಸನಗೌಡ ಪಾಟೀಲ್ ಯತ್ನಾಳ್) ಸ್ಫೋಟಕ ತಿರುವು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದು, ಡಿಕೆ ಶಿವಕುಮಾರ್ ಸಿಎಂ ಹಾಗೂ ವಿಜಯೇಂದ್ರ ಡಿಸಿಎಂ ಎಂಬ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರನ್ನು ವಿಜಯೇಂದ್ರ ದೆಹಲಿಗೆ ಕರೆದುಕೊಂಡು ಹೋಗಿ ಅಮಿತ್ ಶಾ ಅವರ ಮುಂದೆಯೇ ಇಬ್ಬರು ಚರ್ಚೆ ನಡೆಸಿದರು. ಈ ವೇಳೆ ಡಿಕೆ ಶಿವಕುಮಾರ್ ಸಿಎಂ ಹಾಗೂ ವಿಜಯೇಂದ್ರ ಡಿಸಿಎಂ ಎಂಬ ಬಗ್ಗೆಯೂ ಸಮಾಲೋಚನೆ ನಡೆದಿತ್ತು. ಆದರೆ ಇವರಿಬ್ಬರ ವ್ಯಾಪಾರಕ್ಕೆ ಅಮಿತ್ ಶಾ ಸೊಪ್ಪು ಹಾಕಿಲ್ಲ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆಯಿಂದ ಸಿದ್ದರಾಮಯ್ಯ ಐದು ವರ್ಷ ಸಿಎಂ, ಡಿಕೆ ಶಿವಕುಮಾರ್ ಮುಂದಿನ ಸಿಎಂ ಅಂತಾ ಕಿತ್ತಾಡ್ತಿದ್ದ ನಾಯಕರು ಯತ್ನಾಳ್ ಆರೋಪಕ್ಕೆ ಬೆಚ್ಚಿಬಿದ್ದಿದ್ದಾರೆ.