ಉಡುಪಿ, ಡಿಸೆಂಬರ್ 16: ಸಮಯ ಅಭಾವದಿಂದ ಅಥವಾ ಕಚೇರಿಯಲ್ಲಿ ರಜೆ ಸಿಗಲ್ಲ ಎಂಬ ಕಾರಣಕ್ಕಾಗಿ ಮನೆಯ ಶುಭ ಕಾರ್ಯಕ್ರಮಗಳಿಗೆ ಹೋಗದಿರೋದು ಇತ್ತೀಚೆಗೆ ಮಾಮೂಲು. ಕೆಲವೊಮ್ಮೆ ತಮ್ಮ ಸಹೋದರ ಸಹೋದರಿಯರ ಮದುವೆಯಂತಹ ಕಾರ್ಯಗಳಿಗೆ ಕೆಲವು ಗೈರಾದ ಉದಾಹರಣೆಗಳಿವೆ. ಆದರೆ ಉಡುಪಿಯಲ್ಲೊಂದು ಭಾರಿ ಅಪರೂಪದ ಪ್ರಸಂಗ ನಡೆದಿದೆ. ನಿಶ್ಚಿತಾರ್ಥಕ್ಕೆ ಬರಲು ರಜೆಯ ಅಭಾವ ಹಿನ್ನೆಲೆ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ನಡೆಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್. ಮತ್ತು ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಪ್ರಸ್ತುತ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್ ಕಾರ್ಯಕ್ರಮಕ್ಕೆ ಬರಲು ಕಚೇರಿಯ ರಜೆಯ ಸಮಸ್ಯೆಯಾಗಿದೆ. ಹೀಗಾಗಿ ಆನ್ಲೈನ್ ಮೂಲಕ ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ನಡೆಸಲಾಗಿದೆ. ಕ್ಯಾಮರಾಗೆ ಉಂಗುರ ತೋರಿಸಿ ಯುವಕ ಮತ್ತು ಯುವತಿ ಉಂಗುರ ಧರಿಸಿದ್ದಾರೆ. ನೆರೆದಿದ್ದವರು ಆರತಿ ಬೆಳಗಿ, ಅಕ್ಷತೆ ಹಾಕಿ ಇವರನ್ನು ಆಶೀರ್ವದಿಸಿದ್ದಾರೆ. ಇನ್ನು ನಿಶ್ಚಿತಾರ್ಥ ನಡೆದ ಸಮಯ ಉಡುಪಿಯಲ್ಲಿ ಬೆಳಿಗ್ಗೆ ಆಗಿದ್ದರೆ, ಕೆನಡಾದಲ್ಲಿ ಮಧ್ಯರಾತ್ರಿ ಆಗಿದ್ದು ಅನನೋದು ಕೂಡ ವಿಶೇಷ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.