ಬೆಳಗಾವಿಯಲ್ಲಿ 7ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಬೆಂಗಳೂರು, ನವೆಂಬರ್ 5: ಪ್ರತಿಟನ್ ಕಬ್ಬಿಗೆ 3,500 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ (ಕಬ್ಬು ರೈತರ ಪ್ರತಿಭಟನೆ) ತೀವ್ರ ಸ್ವರೂಪ ಸೇರಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಚಳಿ, ಗಾಳಿಯೆನ್ನದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ.
ಬರ್ತ್ಡೇ ಸಂಭ್ರಮ ಮರೆತು ರೈತರ ಹೋರಾಟಕ್ಕೆ ವಿಜಯೇಂದ್ರ ಸಾಥ್
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಆದರೆ ಅದನ್ನು ಬದಿಗಿಟ್ಟು ಮಂಗಳವಾರದಿಂದಲೇ ರೈತರ ಜೊತೆ ಹೋರಾಟಕ್ಕಿಳಿದಿದ್ದಾರೆ. ಬೆಳಗಾವಿಯ ಗುರ್ಲಾಪುರದ ಪ್ರತಿಭಟನೆಗೆ ಮಂಗಳವಾರ ಭೇಟಿ ನೀಡಿದ್ದ ವಿಜಯೇಂದ್ರ ರಾತ್ರಿಯೂ ರೈತರ ಜೊತೆ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದರು. ಪ್ರತಿಭಟನಾ ಸ್ಥಳದಲ್ಲೇ ರೈತರು ವಿಜಯೇಂದ್ರಗೆ ಹುಟ್ಟಹಬ್ಬದ ಶುಭಾಶಯ ಕೋರಿದರು.
ವೇದಿಕೆಯಲ್ಲಿ ರೈತರ ಜೊತೆ ತಂಗುವ ಮುನ್ನ ಟಿವಿ9 ಜೊತೆ ಮಾತನಾಡಿದ ವಿಜಯೇಂದ್ರ, ಕಳೆದ 6 ದಿನಗಳಿಂದ ರೈತರು ಶಾಂತಿಯುತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟದ ಕಿಚ್ಚು ಅಕ್ಕಪಕ್ಕದ ತಾಲೂಕಿನಲ್ಲಿ ಬೆಳೆಯುತ್ತಿದೆ. ಆದರೆ ಯಾವೊಬ್ಬ ಸಚಿವರೂ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಮಧ್ಯೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೇಂದ್ರದ ಬೊಟ್ಟು ಮಾಡಿದ್ದಾರೆ. ನಾವು ಒಟ್ಟಾಗಿ ಕೇಂದ್ರದ ಬಳಿ ಹೋಗಿ ಚರ್ಚೆ ಮಾಡೋಣ. ಕೇಂದ್ರದಿಂದ ಸೂಕ್ತ ದರ ನಿಗದಿಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ವಿಜಯೇಂದ್ರಗೆ ಹೇಳಿದ್ದು, ಇದಕ್ಕೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಇಂದು ಹೆಚ್.ಕೆ.ಪಾಟೀಲ್ ಭೇಟಿ
ಪ್ರತಿನಿಧಿಯಾಗಿ ಸಿದ್ದರಾಮಯ್ಯ ಸಿಎಂ ಸೂಚನೆ, ಕಾನೂನು ಸಚಿವ ಹೆಚ್ಕೆ ಪಾಟೀಲ್ ಅವರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ ಗುರ್ಲಾಪುರಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ರೈತರಿಗೆ ಸಚಿವರು ಸಿಹಿ ಸುದ್ದಿ ತರಲಿ ಎಂದು ಹೇಳಿದ್ದಾರೆ.
ಕಬ್ಬಿಗೆ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದ ಸಿಎಂ
ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಕಬ್ಬಿಗೆ ಎಂಆರ್ಪಿ ನಿಗದಿ ಮಾಡುವುದು ರಾಜ್ಯಸರ್ಕಾರ ಅಲ್ಲ, ಕೇಂದ್ರ ಸರ್ಕಾರ ಎಂದು ಸಮಜಾಯಿಷಿ ನೀಡಿದ್ದಾರೆ.
ನವೆಂಬರ್ 7 ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್
ಗುರ್ಲಾಪುರ ಕ್ರಾಸ್ನಲ್ಲಿ ಮಾತನಾಡಿದ ಹಸಿರು ಸೇನೆ ರೈತರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಸಕ್ಕರೆ ಕಾರ್ಖಾನೆಯಿಂದ 3,500 ರೂ., ಕೇಂದ್ರ, ರಾಜ್ಯದಿಂದ 2 ಸಾವಿರ ರೂಪಾಯಿಯಂತೆ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆಯಿಲ್ಲದಿದ್ದರೆ ನವೆಂಬರ್ 7 ರಂದು ರಾಷ್ಟ್ರೀಯ ಹೆದ್ದಾರಿ 4ಅನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಬೆಳಗಾವಿಯ ಅಥಣಿಯಲ್ಲೂ ಪ್ರತಿಭಟನೆ ಕಾವೇರುತ್ತಿದೆ. ಮಂಗಳವಾರ ರಾತ್ರಿ ಸಚಿವ ಶಿವಾನಂದ ಪಾಟೀಲ್ಗೆ ಶ್ರದ್ಧಾಂಜಲಿ ಅರ್ಪಿಸುವ ಅಣಕು ಪ್ರದರ್ಶನದ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲೂ ಹೋರಾಟ ಜೋರಾಗುತ್ತಿದೆ. ವಿಜಯಪುರನಗರದ ಗಗನ್ ಮಹಲ್ ಬಳಿ ರೈತ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸಂಘ ನಡೆಯುತ್ತಿದೆ. ರೈತರ ಮನವೊಲಿಸಲು ಇಂದು ಸಚಿವ ಎಂ.ಬಿ.ಪಾಟೀಲ್ಗೆ ಭೇಟಿ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಕಬ್ಬು ಬೆಲೆ ಬಹುತೇಕಕ್ಕೆ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಒಟ್ಟಿನಲ್ಲಿ, ಬೆಳಗಾವಿಯಲ್ಲಿ ಆರಂಭಗೊಂಡಿರುವ ಕಬ್ಬುಬೆಳೆಗಾರರ ಪ್ರತಿಭಟನೆಯ ಕಿಚ್ಚು ಬಾಗಲಕೋಟೆ, ವಿಜಯಪುರ ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸಿದೆ. ರಾಜ್ಯಾದ್ಯಂತ ಈ ಪ್ರತಿಭಟನೆಯ ಬೆಂಕಿ ವ್ಯಾಪಿಸುವ ಮೊದಲು ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಆಗ್ರಹವಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ