ಬೆಳಗಾವಿ, (ನವೆಂಬರ್ 07): ಪ್ರತಿ ಕ್ವಿಂಟಲ್ ಕಬ್ಬಿಗೆ 3500 ರೂ. ನಿಗದಿ ಮಾಡುವಂತೆ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದೀಗ ಈ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪದಲ್ಲಿದೆ. ಆದರೆ, ರೈತರ ಶಾಂತಿಯುತ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಹೌದು.. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ತಾಲೂಕಿನ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಡಿವೈಎಸ್ಪಿ ಕೈ ಮುರಿದೆ. ಇನ್ನು ನಾಲ್ಕು ಕೆಎಸ್ ಆರ್ ಟಿಸಿ ಬಸ್ ಗಳ ಗ್ಲಾಸ್ ಪುಡಿ ಪುಡಿಯಾಗಿದೆ. ಈ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬೆಳಗಾಗಿ ಎಸ್ಪಿ ಭೇಟಿ ನೀಡಿದ್ದಾರೆ.
ಹತ್ತರಗಿಯಲ್ಲಿ ಕಲ್ಲು ತೂರಾಟದಲ್ಲಿ 4 ಕೆಎಸ್ ಆರ್ ಟಿ ಬಸ್ ಹಾಗೂ ಲಾರಿಗಳ ಗಾಜು ಪುಡಿ ಪುಡಿಯಾಗಿದೆ. ಬಸ್ಸುಗಳಿಗೆ ಹಾನಿಯಾಗದ ಸ್ಥಳಕ್ಕೆ ಕೆಎಸ್ ಆರ್ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಲಾರಿ ಸೇರಿದಂತೆ ಇತರೆ ವಾಹನಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಕೆಲ ಕಿಡಿಗೇಡಿಗಳಿಂದ ಪೊಲೀಸರ ಮೇಲೆ ಕಲ್ಲು ತೂರಾಟ, ಗೃಹ ಸಚಿವರು ಹೇಳಿದ್ದೇನು?
ರೈತರಿಂದ ಕಲ್ಲು ತೂರಾಟವಾಗಿಲ್ಲ
ಇನ್ನು ಕಲ್ಲು ತೂರಾಟ ನಡೆಸಿದ ಬಗ್ಗೆ ರೈತ ಪ್ರತಿನಿಧಿ ಹೇಳಿಕೆ, ನಾವು ಶಾಂತಿಯುತವಾಗಿ ಧರಣಿ ನಡೆಸಿದ್ದೇವೆ. ಯಾವೋ ಕಿಡಿಗೇಡಿಗಳು ಮಧ್ಯ ನುಸುಳಿ ಬಂದು ಕಲ್ಲು ತೂರಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿದ್ದಾರೆ. ಹಾಗದ್ರೆ, ಕಲ್ಲು ಎಸೆದವರು ಯಾರು? ರೈತರ ಪ್ರತಿಭಟನೆ ಬೇರೆ ಸ್ವರೂಪಕ್ಕೆ ಕೊಡೊಯ್ಯಲು ಕಲ್ಲು ತೂರಿದ್ರಾ? ಎಂಬ ಚರ್ಚೆಗಳು ನಡೆಯುತ್ತಿವೆ.
ಸ್ಥಳಕ್ಕೆ ಐಜಿಪಿ ಮತ್ತು ಎಸ್ಪಿ ದೌಡು
ಹತ್ತರಗಿ ಟೋಲ್ ವಾಹನಗಳ ಮೇಲೆ ಕಲ್ಲುತೂರಾಟ ಸೇರಿದಂತೆ ಸ್ಥಳಕ್ಕೆ ಉತ್ತರ ವಲಯದ ಐಜಿಪಿ ಚೇತನ್ ಸಿಂಗ್ ರಾಠೋಡ್ ಹಾಗೂ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಭೀಮಾಶಂಕರ ಗುಳೇದ್ ಅವರು ಕಾರಿನೊಳಗೆ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿಯನ್ನು ಕೂಡಿಸಿಕೊಂಡು ಚರ್ಚಿಸಿದರು. ಈ ಮೂಲಕ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದೆ.
6 ಪೊಲೀಸ್ ಸಿಬ್ಬಂದಿಗೆ ಗಾಯ
ಇನ್ನು ಈ ಬಗ್ಗೆ ಟಿವಿ9ಗೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಕಾಮೆಂಟ್ ಮಾಡಿದ್ದು, ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟವಾಗಿದ್ದು ದುರದೃಷ್ಟಕರ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು. ಕೆಲವು ಕಿಡಿಗೇಡಿಗಳು ಕಲ್ಲುತೂರಾಟ. ಲಾಠಿಚಾರ್ಜ್ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆವು. ಕಲ್ಲು ತೂರಾಟದಲ್ಲಿ ನಮ್ಮ 6 ಸಿಬ್ಬಂದಿಗೆ ಗಾಯವಾಗಿದೆ. ಡಿವೈಎಸ್ ಪಿಯವರ ಕೈ ಮುರಿದಿದೆ. ಸದ್ಯ ಪುಣೆ-ಬೆಂಗಳೂರು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ, ಏನೆಲ್ಲಾ ಹಾನಿಯಾಗಿದೆ ಎಂದು ಪರಿಶೀಲಿಸಲಾಗಿದೆ. ಕಲ್ಲುತೂರಾಟ ಪ್ರಕರಣ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.
ಕಲ್ಲು ತೂರಾಟದಿಂದ ಡಿವೈಎಸ್ಪಿ ಕೈ ಮುರಿತ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ನಡೆಯುತ್ತಿದ್ದ ಧರಣಿ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದ ಡಿವೈಎಸ್ ಪಿ ಸಜ್ಜನ್ ಕೈ ಮುರಿದಿದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಕೈಗೆ ಬ್ಯಾಂಡೇಜ್ ಹಾಕಿಸಿಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹತ್ತರಗಿಯಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ
ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ವಾಹನಗಳ ಮೇಲೆ ಕಲ್ಲುತೂರಾಟದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸದ್ಯ ಹತ್ತರಗಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ವಾಹನ ಸಂಚಾರ ಮುಕ್ತವಾಗಿದೆ.