ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್! | Bengaluru Gold Heist 3kg Looted By Fake Ed Gang 4 Arrested Mastermind Hunt Sat

ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್! | Bengaluru Gold Heist 3kg Looted By Fake Ed Gang 4 Arrested Mastermind Hunt Sat


ಬೆಂಗಳೂರು/ಹುಬ್ಬಳ್ಳಿ (ಡಿ.04): ಬೆಂಗಳೂರಿನಲ್ಲಿ ನಡೆದ ಭಾರೀ ಬ್ಯಾಂಕ್ ರಾಬರಿ ಘಟನೆಯ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಸುಲಿಗೆಯ ಹಿಂದಿನ ಸೂತ್ರಧಾರ ಮಾತ್ರ ಇನ್ನೂ ಪರಾರಿಯಾಗಿದ್ದಾನೆ. ಕಾಂಟ್ರಾಕ್ಟ್ ಆಧಾರದ ಮೇಲೆ ದರೋಡೆ ನಡೆಸಲು ಸುಪಾರಿ ನೀಡಿದ್ದ ಚಾಲಾಕಿ ವ್ಯಕ್ತಿಯ ಪತ್ತೆಗೆ ಸಿಸಿಬಿ (CCB) ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದರೋಡೆ

ಚಿನ್ನದ ವ್ಯಾಪಾರಿ ಸುದೀನ್ ಎಂಬುವವರು ಆಭರಣಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ದಿನ ಅವರು ದೂರದ ಊರಿಗೆ ಬಂದು ವ್ಯಾಪಾರ ನಡೆಸುತ್ತಿದ್ದಾಗ, ನಾಲ್ವರ ಗ್ಯಾಂಗ್ ಅವರ ಎದುರು ಬಂದಿದೆ. ತಾವು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಎಂದು ಸುಳ್ಳು ಹೇಳಿ, ‘ನಾವು ರೇಡ್ ಮಾಡಲು ಬಂದಿದ್ದೇವೆ’ ಎಂದು ಬೆದರಿಸಿ, ಸುದೀನ್ ಬಳಿ ಇದ್ದ ಬರೋಬ್ಬರಿ 3 ಕೆ.ಜಿ. ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ದರೋಡೆಕೋರರ ಮಾತಿಗೆ ಮರುಳಾಗಿ, ಅಥವಾ ಬೆದರಿಕೆಗೆ ಹೆದರಿ, ಸುದೀನ್ ಅವರು ಕೋಟಿ ಬೆಲೆ ಬಾಳುವ ಚಿನ್ನದ ಬ್ಯಾಗನ್ನು ಅವರಿಗೆ ಒಪ್ಪಿಸಿದ್ದಾರೆ. ಘಟನೆ ನಡೆದ ನಂತರ, ದರೋಡೆಕೋರರ ಗ್ಯಾಂಗ್ 3 ಕೋಟಿ ಮೌಲ್ಯದ ಚಿನ್ನದೊಂದಿಗೆ ಮಹಾರಾಷ್ಟ್ರದ ಕಡೆಗೆ ಪಲಾಯನ ಮಾಡಿದೆ.

ಸಿಸಿಬಿ ತನಿಖೆ: ಯುಪಿ ಮೂಲದ ಗ್ಯಾಂಗ್ ಅರೆಸ್ಟ್ 

ಈ ಘಟನೆ ಕುರಿತು ಸುದೀನ್ ದೂರು ನೀಡಿದ ನಂತರ, ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಸುಮಾರು ಎರಡು ವಾರಗಳ ನಿರಂತರ ಶೋಧದ ನಂತರ, ಪೊಲೀಸರು ನೂರಾರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಮೊಬೈಲ್ ಟವರ್ ಲೊಕೇಷನ್ ಡಂಪ್ ಮಾಡಿ, ನೂರಾರು ಮೊಬೈಲ್ ಸಂಖ್ಯೆಗಳನ್ನು ಟ್ರ್ಯಾಕ್ ಮಾಡಿದ್ದಾರೆ. ಇದೇ ಕಾರ್ಯಾಚರಣೆಯ ಫಲವಾಗಿ, ನಾಲ್ವರು ಕಳ್ಳರ ಸುಳಿವು ಸಿಕ್ಕಿದೆ. ಪೊಲೀಸರ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ ಉತ್ತರ ಪ್ರದೇಶಕ್ಕೆ (UP) ತೆರಳಿ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದಿದೆ. ಬಂಧಿತ ಕಾಂಟ್ರಾಕ್ಟ್ ದರೋಡೆಕೋರರ ಬಳಿಯಿಂದ ಪೊಲೀಸರು ಸದ್ಯಕ್ಕೆ ಕೇವಲ 56 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 7 ಲಕ್ಷ ರೂಪಾಯಿಗಳು ಎಂದು ತಿಳಿದುಬಂದಿದೆ.

ಕಹಾನಿ ಮೇ ಟ್ವಿಸ್ಟ್: ಅಸಲಿ ಕಳ್ಳರು ಯಾರು? 

ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದರೂ, 3 ಕೋಟಿ ಚಿನ್ನದಲ್ಲಿ ಇದುವರೆಗೂ ಕೇವಲ ಶೇ. 10 ರಷ್ಟೂ ಕೂಡ ರಿಕವರಿಯಾಗಿಲ್ಲ ಎಂಬುದು ತನಿಖೆಯಲ್ಲಿನ ದೊಡ್ಡ ಟ್ವಿಸ್ಟ್ ಆಗಿದೆ. ಉಳಿದ ಚಿನ್ನಾಭರಣಗಳು ಎಲ್ಲಿ ಹೋದವು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಬಂಧಿತರು ಕೇವಲ ಸುಪಾರಿ ಪಡೆದ ಕಾಂಟ್ರಾಕ್ಟ್ ದರೋಡೆಕೋರರಾಗಿದ್ದು, ಈ ಸುಲಿಗೆ ಹಿಂದಿನ ಮಾಸ್ಟರ್‌ಮೈಂಡ್ (ಸೂತ್ರಧಾರ) ಇನ್ನೂ ಎಸ್ಕೇಪ್ ಆಗಿದ್ದಾನೆ. ಈ ಚಾಲಾಕಿ ಸೂತ್ರಧಾರನೇ ಚಿನ್ನ ದರೋಡೆ ಮಾಡಲು ಈ ಗ್ಯಾಂಗ್‌ಗೆ ಸುಪಾರಿ (ಕಾಂಟ್ರಾಕ್ಟ್) ನೀಡಿದ್ದ ಎನ್ನಲಾಗಿದೆ. ಕೇವಲ 7 ಲಕ್ಷ ರೂಪಾಯಿ ಚಿನ್ನ ಮಾತ್ರ ಸಿಕ್ಕಿರುವುದು, ಬಂಧಿತರು ಅಸಲಿ ಕಳ್ಳರಲ್ಲ, ಕೇವಲ ಪಾತ್ರಧಾರಿಗಳು ಎಂಬುದನ್ನು ಬಲಪಡಿಸಿದೆ. ಸಂಪೂರ್ಣ ಚಿನ್ನವನ್ನು ವಶಪಡಿಸಿಕೊಳ್ಳಲು ಮತ್ತು ಈ ದರೋಡೆಯ ಹಿಂದಿನ ಅಸಲಿ ಸೂತ್ರಧಾರನನ್ನು ಪತ್ತೆಹಚ್ಚಲು ಖಾಕಿ ಪಡೆ ತೀವ್ರ ಶೋಧ ನಡೆಸುತ್ತಿದೆ. ಆದಷ್ಟು ಬೇಗ ಆ ಮಾಸ್ಟರ್‌ಮೈಂಡ್‌ನನ್ನು ಬಂಧಿಸಿ, ಉಳಿದ ಚಿನ್ನವನ್ನು ವಶಪಡಿಸಿಕೊಳ್ಳುವ ವಿಶ್ವಾಸ ಪೊಲೀಸರಲ್ಲಿದೆ.



Source link

Leave a Reply

Your email address will not be published. Required fields are marked *