Headlines

ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಮಕ್ಮಲ್​​ ಟೋಪಿ: ನಾಲ್ವರ ವಿರುದ್ಧ ದೂರು ದಾಖಲು

ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಮಕ್ಮಲ್​​ ಟೋಪಿ: ನಾಲ್ವರ ವಿರುದ್ಧ ದೂರು ದಾಖಲು


ಬೆಂಗಳೂರು, ಮಾರ್ಚ್ 04: ಯುವತಿಗೆ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಆಯೇಷಾ ಖಥುಮ್ ಎಂಬಾಕೆಗೆ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಮೂಲಕ ಸಂತ್ರಸ್ತ ಯುವತಿಗೆ ಡಾ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರೋದೇನು?

ವಂಚನೆ ಬಗ್ಗೆ ಆಯೇಷಾ ಖಥಮ್ ಅವರ ತಂದೆ ಲಾಲ್ ಬಾಬು ಅವರ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದ್ವಿತೀಯ ಪಿಯುಸಿ ಮತ್ತು NLT ಪರೀಕ್ಷೆಗಳನ್ನು ಬರೆದಿದ್ದ ಯುವತಿ MBBS ಗೆ ಸೇರಿಕೊಳ್ಳುವ ಬಗ್ಗೆ ಯೋಚಿಸಿ, ಒಳ್ಳೆಯ ಕಾಲೇಜಿನಲ್ಲಿ ಸೀಟ್ ಮಾಡಲು ಪ್ರಯತ್ನಿಸಿದರು. ಈ ನಡುವೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು. ಈತ ತನಗೆ ಕಿಮ್ಸ್‌ ಮೆಡಿಕಲ್ ಕಾಲೇಜಿನ ಪ್ರೆಸಿಡೆಂಟ್ ಪರಿಚಯವಿತ್ತು ಹೇಳಿ ಡಾ. ಶರತ್ ಕೆ.ಪಿ. ಎಂಬುವವರನ್ನು ಪರಿಚಯಿಸಿದ್ದ. ಅದರಂತೆ ಬನಶಂಕರಿ 2ನೇ ಹಂತದಲ್ಲಿ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಶರತ್ ಭೇಟಿಯಾಗಿದ್ದರು. ಈ ವೇಳೆ ಕಾಲೇಜಿನಲ್ಲಿ ನಂಬರ್ ನಲ್ಲಿ ಆಯೇಷಾ ಖಥಮ್ ಗೆ ಸೀಟ್ ಕೊಡಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆಯಲಾಗಿದೆ.

ಇದನ್ನೂ ಓದಿ: ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್‌ಸಿ; ವಿರೋಧದ ನಡುವೆ ವಿದ್ಯುತ್ ದರ ಏರಿಕೆ

ನಂತರ ಹೋಟೆಲ್ ಒಂದರಲ್ಲಿ ಭೇಟಿಯಾದ ಆರೋಪಿಗಳು ಕೊಡುಗೆಯಾಗಿ 25 ಲಕ್ಷ ಹಣ ಕೊಟ್ಟರೆ ಸೀಟ್ ಪಕ್ಕಾ ಎಂದಿದ್ದರು. ಇವರ ಮಾತು ನಂಬಿ ಯುವತಿ ಕಡೆಯವರು ಹಂತ ಹಂತವಾಗಿ ಯುಪಿಐ, ಚೆಕ್ ರೂಪದಲ್ಲಿ 10 ಲಕ್ಷ ರೂ. ಹಣ. ಬಳಿಕ ಆರೋಪಿಗಳ ಡಿಮ್ಯಾಂಡ್ ಹಿನ್ನೆಲೆ ಉಳಿದವ 15 ಲಕ್ಷವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಪೂರ್ತಿ ಹಣ ಕೈಸೇರಿದ ಮೇಲೆ ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದು, ಮೆಡಿಕಲ್ ಸೀಟ್ ಕೊಡಿಸದೇ ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಡಾ. ಕೆ.ಪಿ ಶರತ್ ಎಂಬ ವ್ಯಕ್ತಿ ಕಿಮ್ಸ್ ಕಾಲೇಜಿನ ಪ್ರೆಸಿಡೆಂಟ್ ಅಲ್ಲ ಎಂಮಬ ವಿಚಾರ ಬಯಲಾಗಿದೆ. ಅಂತಿಮವಾಗಿ ತಾವು ಮೋಸ ಹೋಗಿದ್ದು ಅರಿತ ಯುವತಿ ಕಡೆಯವರು ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *