ಚಿಕ್ಕಬಳ್ಳಾಪುರ, ಫೆಬ್ರವರಿ 06: ಪ್ರೇಮಿಗಳ ವಿಶೇಷ ದಿನವಾದ ವ್ಯಾಲೆಂಟೈನ್ಸ್ ಡೇಗೆ (ಪ್ರೇಮಿಗಳ ದಿನ) ಸದ್ಯ ದಿನಗಣನೆ ಶುರುವಾಗಿದೆ. ಪ್ರೀತಿ ಪೇಮಕ್ಕೆ ಹೆಚ್ಚು ಹೆಸರು ವಾಸಿಯಾಗಿರುವ ತಾಣವೆಂದರೆ ನಂದಿಗಿರಿಧಾಮ (ನಂದಿ ಬೆಟ್ಟಗಳು). ಪ್ರೇಮಿಗಳ ದಿನದಂದು ಈ ತಾಣಕ್ಕೆ ಹೆಚ್ಚಾಗಿ ಪ್ರೇಮಿಗಳು ಆಗಮಿಸಿ ಕಾಲಕಳೆಯುತ್ತಾರೆ. ಆದರೆ ಈ ಭಾರಿಯ ವ್ಯಾಲೆಂಟೈನ್ಸ್ ಡೇಗೆ ಅಂದರೆ ಫೆಬ್ರವರಿ 14 ರಂದು ವಿಶ್ವವಿಖ್ಯಾತ ನಂದಿಗಿರಿಧಾಮ ಬಂದ್ ಆಗಲಿದೆ.
ನಂದಿಗಿರಿಧಾಮ ಬಂದ್
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಧಾಮಕ್ಕೆ ಸಾಕಷ್ಟು ಜನರ ಭೇಟಿ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರಣಯ ಪಕ್ಷಿಗಳ ಕಲರವೇ ಹೆಚ್ಚಾಗಿರುತ್ತಿದೆ. ಈ ದಿನದಂದು ಕೆಲ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡರೆ, ಮತ್ತೆ ಕೆಲವರು ಒಬ್ಬರಿಗೊಬ್ಬರು ತಬ್ಬಿ ಮುದ್ದಾಡುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ. ಆದರೆ ಈ ಭಾರಿ ಪ್ರೇಮಿಗಳ ದಿನಾಚರಣೆಗೆ ಅಂದರೆ ಫೆ.14ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿಗಿರಿಧಾಮ ಬಂದ್ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಆದೇಶದಿಂದ ಕ್ರಮಕೈಗೊಳ್ಳಲು, ಡಿಸಿ ಜಿ.ಪ್ರಭು ಆದೇಶ ಹೊರಡಿಸಿದೆ.
ಆದೇಶದಲ್ಲೇನಿದೆ?
ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಆಚರಣೆ ಪ್ರಯುಕ್ತ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳವಾದ ನಂದಿಗಿರಿಧಾಮ ಠಾಣಾ ವ್ಯಾಪ್ತಿಯ ನಂದಿ ಬೆಟ್ಟಕ್ಕೆ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಸಲುವಾಗಿ ರಾಜ್ಯ ಮತ್ತು ಹೊರಗೆ ಸಾವಿರಾರು ಸಂಖ್ಯೆಗಳ ಪ್ರೇಮಿಗಳು, ಅಲ್ಲಿಗೆ ಆಗಮಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನಂದಿಗಿರಿಧಾಮ ಪ್ರವಾಸ ಹೋಗ್ತೀರಾ? ಈ ವಿಚಾರ ತಿಳಿದಿರಲೇಬೇಕು: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಅಂಕಿ-ಅಂಶಗಳ ಪ್ರಕಾರ ನಂದಿಗಿರಿಧಾಮಕ್ಕೆ ವಿಶೇಷ ದಿನಗಳಲ್ಲಿ (ಭಾನುವಾರ, ಶನಿವಾರ ಹಾಗೂ ರಜೆ ದಿನಗಳಲ್ಲಿ) ಸುಮಾರು 16-18 ಸಾವಿರ ಹಾಗೂ 3000-3500 ದ್ವಿಚಕ್ರ ವಾಹನಗಳು ಹಾಗೂ 1500-1700 ನಾಲ್ಕು ಚಕ್ರ (ಕಾರು) ಇತರೆ ವಾಹನಗಳು ಆಗಮಿಸುವ ಮೂಲಕ ಪೊಲೀಸ್ ಇಲಾಖೆಯಿಂದ ವಾಹನ ಸಂಚಾರ ನಿಯಂತ್ರಣಕ್ಕೆ ಚಾಲನೆ ನೀಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 5000-6000, 1000-1500 ದ್ವಿಚಕ್ರವಾಹನಗಳು ಹಾಗೂ 500-700 ನಾಲ್ಕು ಚಕ್ರ (ಕಾರು) ಇತರೆ ವಾಹನಗಳು ಆಗಮಿಸುತ್ತವೆ.
ನಂದಿಗಿರಿಧಾಮಕ್ಕೆ ಹೋಗಲು ಮತ್ತು ಬರಲು ಒಂದೇ ರಸ್ತೆಯ ವಾಹನ ದಟ್ಟಣೆ ಹೆಚ್ಚಲಿದೆ. ಪ್ರೇಮಿಗಳ ದಿನ ಶನಿವಾರದಂದು ನಿರೀಕ್ಷೆಗೆ ಮೀರಿ 15-20 ಸಾವಿರ ಸರಬರಾಜು, ಪ್ರೇಮಿಗಳು ಹಾಗೂ 05-06 ಸಾವಿರ ವಾಹನಗಳು ಆಗಮಿಸುವ ಸಂಭವವಿದೆ. ನಂದಿ ಗಿರಿಧಾಮದ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ವ್ಯವಸ್ಥೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಇದನ್ನೂ ಓದಿ: ಪ್ರವಾಸಿತಾಣ ನಂದಿಗಿರಿಧಾಮ 1 ತಿಂಗಳು ಬಂದ್: ವೀಕೆಂಡ್ನಲ್ಲಿ ಮಾತ್ರ ಓಪನ್..!
ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗೆ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ವೇಳೆ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯ ವರ್ತನೆಗಳನ್ನು ಮಾಡಿ ಈ ಆಚರಣೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರು ಭಾಗವಹಿಸುವುದರಿಂದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು, ಇತರರಿಗೆ ತೊಂದರೆ ನೀಡುವುದು ಮತ್ತು ಬೆಟ್ಟದ ಮೇಲೆ ನಿಷೇಧಿತ ಅಪಾಯಗಳ ಸ್ಥಳಗಳಿಗೆ ಹೋಗುವ ಸಾಧ್ಯತೆಗಳು ಇರುತ್ತವೆ. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಸಹ ಯಾವುದೇ ಪ್ರಯೋಜನಗಳು ಆಗುವ ಸಾಧ್ಯತೆಯಿಲ್ಲ. ಯಾವುದೇ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.