ಚಿಕ್ಕಬಳ್ಳಾಪುರ, ಡಿಸೆಂಬರ್ 17: ಅವನು 14 ವರ್ಷದ ಅಪ್ರಾಪ್ತ ಬಾಲಕನಿರತನಾಗಿ ಮನೆಗಳ್ಳತನಕ್ಕೆ ಇಳಿದಿದ್ದ. ಇದೀಗ ಆತನಿಗೆ 38 ವರ್ಷ. ಮನೆಗಳ್ಳತನ (ಕಳ್ಳತನ) ಮಾಡಿ ಜೈಲಿಗೆ ಹೋಗುವುದು ಆತನ ಕಾಯಕವಾಗಿದೆ. ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 96 ಮನೆಗಳ್ಳತನ ಮಾಡಿ ಜೈಲಿಗೆ ಹೋಗಿದ್ದ. ಆದರೆ ಜಾಣನಿನ ಮೇಲೆ ಆಚೆ ಬಂದಿದ್ದೆ ತಡ, ಮತ್ತೆ ತನ್ನ ಕಾಯಕಕ್ಕೆ ಇಳಿದಿದ್ದ. 97ನೇ ಮನೆ ಕಳ್ಳತನ ಮಾಡಿ ಇದೀಗ ಆಸಾಮಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಕುಖ್ಯಾತ ಕಳ್ಳನ ಹೆಸರು ರಾಹುಲ್ ಕುಮಾರ್ ಶರ್ಮಾ ಅಲಿಯಾಸ್ ಭರತ್ ಕುಮಾರ್. ಇತ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿ. ರಾಹುಲ್ ತಾನು 14 ವರ್ಷ ಮನೆಯಲ್ಲಿ ಕಳ್ಳತನ ಮಾಡಿ ಜೈಲು ಪಾಲಾಗಿದ್ದ. ಬುದ್ಧಿ ಕಲಿಯದೆ ಮನೆ ಕಳ್ಳತನ ಮಾಡುವುದು ಮೋಜಿ, ಮಸ್ತಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ವಂಚನೆಗೆ ಹೆದರಿ ಫ್ಲಾಟ್, ಸೈಟ್ ಮಾರಿದ್ದಲ್ಲದೆ ಸಾಲ ಮಾಡಿ 2 ಕೋಟಿ ರೂ. ಕಳೆದುಕೊಂಡ ಮಹಿಳಾ ಟೆಕ್ಕಿ
ಈಗ ಈತನ ವಯಸ್ಸು 38 ವರ್ಷ. ಆದರೂ ಬುದ್ಧಿ ಕಲಿತಂತಿಲ್ಲ. ತೆಲಂಗಾಣ, ಆಂಧ್ರದಲ್ಲಿ ಬರೋಬ್ಬರಿ 96 ಮನೆಗಳ್ಳತನ ಮಾಡಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಈಗ 97ನೇ ಬಾರಿಗೆ ಚಿಕ್ಕಬಳ್ಳಾಪುರದ ಬಳಿ ಅಣಕನೂರು ಗ್ರಾಮದಲ್ಲಿ ಮನೆಗಳ್ಳತನ ಮಾಡಿ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೋಷ್ ನಗರಕ್ಕೆ ಅಲ್ಲಾ ಭಕಾಶ್ ಎಂಬ ಸ್ನೇಹಿತನನ್ನು ನೋಡಲು ಚಿಕ್ಕಬಳ್ಳಾಪುರಕ್ಕೆ ರಾಹುಲ್ ಆಗಮಿಸಿದ್ದರು. ವಾಪಸ್ ಮರಳುವಾಗ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರಿನಲ್ಲಿ ನಾಗರಾಜ್ ಎ.ಎಂ ಎಂಬವರ ಮನೆಗೆ ಕನ್ನ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದೆ. ನವೆಂಬರ್ 27 ರಂದು ಘಟನೆ ನಡೆದಿತ್ತು.
ಇದನ್ನೂ ಓದಿ: ಮದ್ವೆಗಾಗಿ ಅಣ್ಣ ಮಾಡಿಸಿಟ್ಟಿದ್ದ ಒಡವೆ ಕಳ್ಳತನ: ಕಷ್ಟಪಟ್ಟು ದುಡಿದು ತಂದ ಚಿನ್ನ ಕಳೆದುಕೊಂಡ ಸಹೋದರರು ಕಣ್ಣೀರು
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ರಾಹುಲ್ ಕಳ್ಳತನ ಮಾಡಿದ್ದು ಗೊತ್ತಾಗಿದೆ. ರಾಹುಲ್ ಗೆ ಆತನ ಸ್ನೇಹಿತ ಅಲ್ಲಾ ಭಕಾಶ್ ಹಾಗೂ ಆಂಧ್ರದ ಸೈಯದ್ ದಾವೂದ್ ಸಾಥ್ ನೀಡಿದ್ದು ಗೊತ್ತಾಗಿದೆ. ಇದರಿಂದ ಮೂವರನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಅಪ್ರಾಪ್ತ ಬಾಲಕನಿರುವಾಗಲೇ ಕಳ್ಳತನ ಮಾಡಿದ್ದ ರಾಹುಲ್ ಎಂಬ ಬಾಲಕ, ಇದೀಗ ಕುಖ್ಯಾತ ಮನೆಗಳ್ಳನಾಗಿದ್ದರೆ ವಿಪರ್ಯಾಸವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.