ಬೆಂಗಳೂರು, ನವೆಂಬರ್ 21: ರಾಜ್ಯ ಕಾಂಗ್ರೆಸ್ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ಗರಿಗೆದರಿವೆ. ಡಿಸಿಎಂ ಡಿಕೆ ಶಿವಕುಮಾರ್ ಬಣ ಮತ್ತು ಸಿಎಂ ಸಿದ್ದರಾಮಯ್ಯ ಬಣದ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡುವಂತೆ ಹಲವು ಶಾಸಕರು ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದಾರೆ, ಇತ್ತ ಸಿದ್ದರಾಮಯ್ಯ ಬಣದಿಂದಲೂ ಪ್ರತಿತಂತ್ರ ಸಿದ್ಧವಾಗಿದೆ. ಇಂದು ಸಂಜೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಈ ನಡುವೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೂ ಕಾಂಗ್ರೆಸ್ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ, ಅಲ್ಲಿಯೂ ಸಿಎಂ ಮತ್ತು ಡಿಸಿಎಂ ಬಣಗಳ ತಿಕ್ಕಾಟ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರ ಆಪ್ತರೂ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಕಡೆ ಡಿಕೆ ಸುರೇಶ್ ಗೆ ಪಟ್ಟಕಟ್ಟಲು ಡಿಕೆಶಿ ಸಿದ್ದತೆ ಮಾಡುಕೊಂಡರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಆಪ್ತರು ಅಧ್ಯಕ್ಷ ಗಿರಿಯತ್ತ ಚಿತ್ತನೆಟ್ಟಿದ್ದಾರೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಶುರುವಾಗಿದೆ. ಈ ಸ್ಥಾನದ ಆಕಾಂಕ್ಷಿಗಳಾಗಿರುವ ಡಿಕೆ ಸುರೇಶ್, ಕೆ.ವೈ. ನಂಜೇಗೌಡ, ಭೀಮಾ ನಾಯ್ಕ್, ಈ ರೇಸ್ಗೆ ರಾಘವೇಂದ್ರ ಹಿಟ್ನಾಳ್ ಕೂಡ ಎಂಟ್ರಿಯಾಗಿರೋದು ಪೈಪೋಟಿ ಹೆಚ್ಚಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.