
<p>ಮಾಜಿ ಸಿಎಂ ಹೆಚ್ಡಿಕೆ ಅವರು ಸಿಎಂ ಕುರಿತು ನೀಡಿದ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರವಾಗಿದ್ದು, ಅವರ ಬೆಳವಣಿಗೆಯನ್ನು ಸಹಿಸಲಾಗದೆ ಜೆಡಿಎಸ್ ನಾಯಕರು ಅವರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p><img><p><strong>ಬೆಂಗಳೂರು:</strong> ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ ಅವರು, ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರದ ಪ್ರತಿಬಿಂಬ ಎಂದು ಆರೋಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, “ಭಾರಿ ಕೈಗಾರಿಕಾ ಸಚಿವರು ನಮ್ಮ ಮುಖ್ಯಮಂತ್ರಿಯ ಬಗ್ಗೆ ‘ಲೀಸ್ ಸಿಎಂ’ ಎಂದು ಹೇಳಿಕೆ ನೀಡಿರುವುದು ಅತ್ಯಂತ ಅಸಹ್ಯಕರ. ದೇವೇಗೌಡರು ಹಿಂದೆ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಎಷ್ಟು ಅನ್ಯಾಯ ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ, ಅವರಿಗೂ ಗೊತ್ತಿದೆ” ಎಂದು ಹೇಳಿದರು.</p><img><p>ಬೇರೆ ಯಾರ ಮೇಲಾದರೂ ಇಂತಹ ಕುತಂತ್ರಗಳು ನಡೆದಿದ್ದರೆ ಅವರ ರಾಜಕೀಯ ಜೀವನವೇ ಅಂತ್ಯವಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ದೃತಿಗೆಡಲಿಲ್ಲ. ಅವರು ಹೋರಾಟದ ಮೂಲಕ ಮುಂದೆ ಬಂದವರು. ಕಾಂಗ್ರೆಸ್ನಲ್ಲಿ ಇದ್ದಾಗ ಕಾಂಗ್ರೆಸ್ಗೆ ನಿಷ್ಠರಾಗಿದ್ದರು. ಅದಕ್ಕೂ ಮೊದಲು ನಿಮ್ಮ ಪಕ್ಷದಲ್ಲಿದ್ದಾಗಲೂ ಪಕ್ಷದ ನಿಯಮ ಪಾಲಿಸಿದ್ದರು. ಅರಸು ಅವರ ನಂತರ ರಾಜ್ಯದಲ್ಲಿ ದೊಡ್ಡ ಒಬಿಸಿ ನಾಯಕನಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ. ಇದನ್ನು ಸಹಿಸಲಾಗದೆ ನಿರಂತರವಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.</p><img><p>ಜೆಡಿಎಸ್ ಯುವ ನಾಯಕರು ಟಾಕ್ಸಿಕ್ ಟೀಸರ್ ನಂತೆ ಏಐ ವಿಡಿಯೋ ಮಾಡಿರುವ ‘ಡ್ಯಾಡಿ ಇಸ್ ಹೋಮ್’ ಎಂಬ ಟೀಸರ್ ಸಾಲಿಗೂ ಪ್ರದೀಪ್ ಈಶ್ವರ್ ತೀವ್ರ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಡ್ಯಾಡಿನಾ? ನಿಖಿಲ್ ಕುಮಾರಸ್ವಾಮಿ ಡ್ಯಾಡಿನಾ? ಎಂಬ ಗೊಂದಲ ಜನರಲ್ಲಿ ಇದೆ. ಕುಮಾರಸ್ವಾಮಿ ಡ್ಯಾಡಿ ಆಗಿದ್ರೆ ದೇವೇಗೌಡರು ಮತ್ತೆ ಸಿಎಂ ರೇಸ್ಗೆ ಬರ್ತಾರಾ? ಎಂದು ಪ್ರಶ್ನಿಸಿದರು. “ಡ್ಯಾಡಿ ಇಸ್ ಹೋಮ್ ವಿತ್ ಹೂಮ್? ಅದು ಕಾಂಗ್ರೆಸ್ನೊ, ಬಿಜೆಪಿನೊ ಎಂಬುದೇ ಸ್ಪಷ್ಟವಿಲ್ಲ” ಎಂದು ಟೀಕಿಸಿದರು.</p><img><p>2028ರಲ್ಲಿ ಸಿಎಂ ಆಗಬೇಕು ಎಂಬ ಕನಸು ಕಾಣುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಬಿಜೆಪಿ ನಾಯಕರು ಕೈಕಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಪ್ರತಿಯೊಂದು ಫೈಲ್ಗೂ ಮೋದಿ, ಅಮಿತ್ ಶಾ, ಸಂತೋಷ್ ಜಿ.ಎಸ್. ಒಪ್ಪಿಗೆ ಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಇಳಿದಿದ್ದಾರೆ” ಎಂದು ಹೇಳಿದರು. ಲೋಕಲ್ ಚುನಾವಣೆಗಳನ್ನು ಪ್ರತ್ಯೇಕ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಜೊತೆ ಮೈತ್ರಿ ಯಾಕೆ? ಭಯನಾ ಸರ್? ಎಂದು ಪ್ರಶ್ನಿಸಿದರು.</p><img><p>ನೀವು ಲಕ್ನಿಂದ ಸಿಎಂ ಆದವರು. ನಮ್ಮ ಜಮೀರ್ ಅಣ್ಣ ಕಾರ್ ಡ್ರೈವಿಂಗ್ ಮಾಡಿ, ನೀವೆಲ್ಲ ಬಸ್ನಲ್ಲಿ ಹೋಗಿದ್ದೀರಾ. ಆಗ ಕಾಂಗ್ರೆಸ್ ಶಾಸಕರ ಆಶೀರ್ವಾದದಿಂದ ಸಿಎಂ ಆದ್ರಿ. ಆದರೆ ಡಿಕೆ ಶಿವಕುಮಾರ್ ಹಾಗಲ್ಲ. ಅವರು ಸ್ವಂತ ಶಕ್ತಿಯಿಂದ ಬೆಳೆದ ನಾಯಕ ಎಂದು ಹೇಳಿದರು. ನಿಮಗೆ ಒಕ್ಕಲಿಗ ಸಮುದಾಯದ ನಾಯಕ ಬೆಳೆಯುವುದು ಇಷ್ಟವಿಲ್ಲವೇ? ಡಿಕೆ ಶಿವಕುಮಾರ್ ಒಕ್ಕಲಿಗರ ಪರಮೋಚ್ಚ ನಾಯಕನಾಗಿಬಿಡುತ್ತಾರೆ ಎಂಬ ಭಯವೇ? ಒಕ್ಕಲಿಗ ಲೀಡರ್ ಬೆಳೆಯಬಾರ್ದಾ?</p><img><p>ಒಕ್ಕಲಿಗರ ಕಂಟ್ರೋಲ್ ಕುಮಾರಸ್ವಾಮಿ ಮನೆಯಂಗಳದಿಂದ ಡಿಕೆಶಿ ಮನೆಗೆ ಬಂದುಬಿಟ್ಟಿದೆ. ಕರ್ನಾಟಕದ ಒಕ್ಕಲಿಗರು ಒಪ್ಪಿಕೊಂಡಿರುವ ನಾಯಕ ಡಿಕೆ ಶಿವಕುಮಾರ್” ಎಂದು ಹೇಳಿದರು. “ಡಿಕೆ ಶಿವಕುಮಾರ್ ಅವರನ್ನು ಬೆಳಿಗ್ಗೆ-ಸಂಜೆ ಎನ್ನದೆ ನಿರಂತರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೆ ಬಂದು ಕನಕಪುರದಲ್ಲಿ ಬಂಡೆಯಂತೆ ನಿಂತವರು ಅವರು. ಯಾಕೆ ವಿನಾ ಕಾರಣ ಟಾರ್ಗೆಟ್ ಮಾಡ್ತೀರಾ?” ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.</p>
Source link
ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?