
ಬೆಂಗಳೂರು, ನವೆಂಬರ್ 10: ಕಾರ್ತಿಕ ಮಾಸವು ಧಾರ್ಮಿಕ ಆಚರಣೆಗಳಿಗೆ, ವಿಶೇಷವಾಗಿ ದೀಪ ಮತ್ತು ಸ್ನಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ತಿಂಗಳು. ಈ ಮಾಸದ ನದಿಗಳಲ್ಲಿ, ದೇವಾಲಯಗಳಲ್ಲಿ ಮತ್ತು ಪುಣ್ಯಕ್ಷೇತ್ರಗಳಲ್ಲಿ ಸ್ನಾನದಷ್ಟೇ ದೀಪ ಪ್ರಜ್ವಲನ ಮತ್ತು ದೀಪದಾನಕ್ಕೂ ಹೆಚ್ಚಿನ ಮಹತ್ವವಿದೆ. ಮನೆಯಲ್ಲಿ ದೀಪವನ್ನು ಸದಾಕಾಲ ಆರದಂತೆ ಉರಿಸುವುದರಿಂದ ಆ ಮನೆಗೆ ಸರ್ವಶ್ರೇಷ್ಠ ಶುಭವಾಗುವುದು ಎಂದು ನಂಬಲಾಗಿದೆ. ಇದು ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣನಾದ ಶಿವನ ಕೃಪೆಯನ್ನು ತಂದುಕೊಡುತ್ತದೆ ಮತ್ತು ಅಪಮೃತ್ಯುವಿನಿಂದ ದೂರವಿರಿಸುತ್ತದೆ. ಗೋಧಿ ಹಿಟ್ಟಿನ, ಅಕ್ಕಿ ಹಿಟ್ಟಿನ, ಅಥವಾ ಮಣ್ಣಿನ ದೀಪಗಳನ್ನು ಬಳಸಬಹುದು. ಬಿಲ್ವ ವೃಕ್ಷಕ್ಕೆ ನೀರೆರೆದು ದೀಪವಿಡುವುದು, ಹಸುವಿಗೆ ದೀಪಾರತಿ ಮಾಡುವುದು ಕೂಡ ಪುಣ್ಯದಾಯಕ. ಕನಿಷ್ಠ ಮೂರು ಸೋಮವಾರಗಳಿಂದ ದೀಪದಾನ ಮಾಡಿದವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ.