ಬೆಂಗಳೂರು, ಜನವರಿ 18: ಮಾಘ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳು. ಇದು ವ್ರತಗಳು, ದಾನ ಮತ್ತು ಸ್ನಾನಗಳಿಗೆ ಮಹತ್ವದ ಕಾಲವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ನದಿ ಸ್ನಾನವು ಕೇವಲ ದೈಹಿಕ ಶುದ್ಧಿಯಿಲ್ಲದೆ, ಮಾನಸಿಕ ಮತ್ತು ಪಾಪಗಳ ನಿವಾರಣೆಗೆ ಕಾರಣವೆಂದು ನಂಬಲಾಗಿದೆ. ಮಾಟ, ಮಂತ್ರ, ದುಷ್ಟ ಶಕ್ತಿಗಳ ಕಾಟವನ್ನು ಕಡಿಮೆ ಮಾಡುವ ಶಕ್ತಿ ಮಾಘ ಸ್ನಾನಕ್ಕಿದೆ.
ಗಂಗಾ, ಕಾವೇರಿ, ಪ್ರಯಾಗ, ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ನದಿ ಹಾಗೂ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದು ಶ್ರೇಷ್ಠ. ಸೂರ್ಯಾರಾಧನೆಗೆ ಮಾಘ ಮಾಸ ಉತ್ತಮವಾಗಿದ್ದು, “ನಮಸ್ಕಾರ ಪ್ರಿಯೋ ಭಾನು” ಎಂಬ ನುಡಿಯಂತೆ ಸೂರ್ಯನಮಸ್ಕಾರವು ಆರೋಗ್ಯ ಮತ್ತು ಶುಭವನ್ನು ತರುತ್ತದೆ. ಈ ಮಾಸದಲ್ಲಿ ವಿಷ್ಣು, ಶಿವ ಹಾಗೂ ದುರ್ಗಾ, ಸರಸ್ವತಿ, ಮಹಾಲಕ್ಷ್ಮಿಯಂತಹ ತ್ರಿಶಕ್ತಿಗಳ ಪೂಜೆಗೆ ವಿಶೇಷ ಪ್ರಾಶಸ್ತ್ಯವಿದೆ. ದೀಪಾರಾಧನೆ, ಅನ್ನದಾನ, ಉಪ್ಪಿನ ದಾನ, ಬೆಲ್ಲದ ದಾನ ಹಾಗೂ ಸಿಹಿ ಪದಾರ್ಥಗಳ ದಾನ ಮಾಡುವುದು ಪುಣ್ಯಕರ. ಮಾಘ ಮಾಸದ ಪೂರ್ತಿ ದಿನವೂ ವಿಶೇಷವಾಗಿದ್ದು, ಎಲ್ಲವೂ ನಂಬಿಕೆಯ ಆಧಾರದಲ್ಲಿ ಮಾನವನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.