ಬೆಂಗಳೂರು, (ಅಕ್ಟೋಬರ್ 28): ಲಾಲ್ ಬಾಗ್ನಲ್ಲಿ ಟನಲ್ ರಸ್ತೆ ನಿರ್ಮಾಣ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದ್ದು, ಇದರ ನಡುವೆ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ, ಈ ವೇಳೆ ತೇಜಸ್ವಿ ಸೂರ್ಯ ಅವರ ಕೆಲ ಮಾತಿಗೆ ಡಿಕೆಶಿ ಸಮ್ಮತಿಸಿಲ್ಲ.
ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಅವರು ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ. ಟನಲ್ ರಸ್ತೆ ಬದಲಾಗಿ ಮೆಟ್ರೋ ಬರಬೇಕು. ಖಾಸಗಿ ಬಸ್ಸುಗಳಿಗೆ ಅವಕಾಶವಿದೆ. ಬಿಎಂಎಲ್ ಟಿ ಫೀಡರ್ ಬಸ್ ಮಾಡಬೇಕು. ಮೆಟ್ರೋ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಹಣ ಕೂಡ ಬೇಕು ಅಲ್ವಾ ಎಂದು ಪ್ರಶ್ನಿಸಿದ.
ದೆಹಲಿಯಿಂದ ಎಷ್ಟು ಹಣ ಬಂದಿದೆ ಎಂದು ಕೇಳಿದೆ. ನಾನು ಕೂಡ ಪಿಎಂ ಅವರನ್ನ ಭೇಟಿ ಮಾಡಲು ಬರುತ್ತೇನೆ. ಹಣ ಕೊಡಿಸಿ ಎಂದಿದ್ದೇನೆ. ಲಾಲ್ ಬಾಗ್ ನಲ್ಲಿ ಸಣ್ಣ ಜಾಗ ಅಷ್ಟೇ ಬೇಕು ಇಲ್ಲಂದ್ರೆ ನೀವೇ ಜಾಗ ತೋರಿಸಬೇಕು ಎಂದಿದ್ದೇನೆ. ಟನಲ್ ರಸ್ತೆ ಬೇಡವೇ ಬೇಡ. ಆದರೆ ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ ಎಂದ ತೇಜಸ್ವಿ ಸೂರ್ಯ ಜತೆಗಿನ ಮಾತುಕತೆ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.
ಅವರಿಗೆ ಏನೂ ಬೇಕಾದರೂ ಪಿಐಎಲ್ ಹಾಕಲಿ. ನಾವು ಮರುಪರಿಶೀಲನೆ ಮಾಡುತ್ತೇವೆ ಎಂದಿದ್ದೇವೆ. ಎಲ್ಲಾ ಸ್ಟಡಿ ಮಾಡಿದ್ದೀನಿ ಅದ್ರೆ ನಾನು ಅವರ ಸಲಹೆಗೆ ಗೌರವ ನೀಡುತ್ತೇನೆ. ಖಾಲಿ ಟ್ರಂಕ್ ಅಂದ್ರೆ ಹಣ ತರಬೇಕು. ಪಿಎಂಗೆ ಹೇಳಿ ಹಣ ಕೇಳಬೇಕು. ಎಲ್ಲರೂ ಸಲಹೆ ಕೊಡ್ತಾರೆ ಟ್ವೀಟ್ ಮಾಡ್ತಾರೆ. ಆದರೆ ಹಣ ತರಬೇಕು ಎಂದು ತೇಜಸ್ವಿ ಸೂರ್ಯಗೆ ಟಾಂಗ್ ಕೊಟ್ಟರು.