
ಈ ದಿನ ಸಂಜೆ ಹತ್ತು ನಿಮಿಷವಾದರೂ ಧ್ಯಾನ ಮಾಡಲು ಪ್ರಯತ್ನಿಸಿ. ಸೂರ್ಯ ನಾರಾಯಣನ ಸ್ಮರಣೆ, ಆರಾಧನೆಯಿಂದಾಗಿ ನಿಮಗೆ ಪದೇ ಪದೇ ಕಾಡುತ್ತಿರುವ ಹಿನ್ನಡೆಯಿಂದ ಹೊರಗೆ ಬರುವುದಕ್ಕೆ ಸಹಾಯ ಆಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಯಾರು ನಿಮ್ಮ ಕೆಲಸ, ಸೌಂದರ್ಯ, ನಿರ್ಧಾರಗಳನ್ನು ಹೊಗಳುತ್ತಿದ್ದರೋ ಅವರೇ ಈ ದಿನ ನಿಮ್ಮನ್ನು ಕಂಡೂ ಕಾಣದಂತೆ ಮುಂದಕ್ಕೆ ಸಾಗಿಬಿಡಬಹುದು. ನೀವು ಸಾಮಾನ್ಯ ದಿನಗಳಲ್ಲಿ ಯಾರ ಮಾತಿಗೆ ಬಹಳ ಖುಷಿಯಿಂದ ಇರುತ್ತಿದ್ದರೋ ಅದು ಈ ದಿನ ಸಾಧ್ಯವಾಗಲಿಲ್ಲ. ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ. ಬಿದ್ದು ಸಣ್ಣ- ಪುಟ್ಟ ಗಾಯವಾದರೂ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಯಾರೋ ನಿಮ್ಮನ್ನು ಮೂದಲಿಸಿದರು ಅಥವಾ ಹಂಗಿಸಿದರು ಎಂಬ ಕಾರಣಕ್ಕೆ ಅವರಿಗೆ ಏನೋ ಮಾಡಬೇಕು ಎಂದು ಹೊರಟುಬಿಡಬೇಡಿ. ಇನ್ನು ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸುವುದು ಕೂಡ ಸರಿಯಲ್ಲ. ನಿಮ್ಮಲ್ಲಿ ಕೆಲವರಿಗೆ ವೇರಿಕೋಸ್ ನಂಥ ಸಮಸ್ಯೆಗಳು ಉಲ್ಬಣಗೊಳ್ಳಬಹುದು ಅಥವಾ ಕಾಣಿಸಬಹುದು. ತಕ್ಷಣ ವೈದ್ಯರ ಬಳಿ ಸೂಕ್ತೋಪಚಾರ ತೆಗೆದುಕೊಳ್ಳುವ ಕಡೆಗೆ ಗಮನ ನೀಡುವುದು ಕ್ಷೇಮ, ನೆನಪಿನಲ್ಲಿರಲಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಷೇರು, ಮ್ಯೂಚುವಲ್ ಫಂಡ್, ಡಿಬೆಂಚರ್, ಪರ್ಪೆಚುವಲ್ ಬಾಂಡ್, ಗೋಲ್ಡ್ ಹೀಗೆ ಯಾವುದಾದರೊಂದು ಹೂಡಿಕೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ಅಥವಾ ನಿಮಗೆ ಆಪ್ತರಾದವರು ಹಿಂತಿರುಗಿಸಬೇಕಾದ ಹಣದ ಬದಲಿಗೆ ಇಂಥದ್ದು ಯಾವುದಾದರೂ ಒಂದರ ಮೇಲೆ ನಿಮ್ಮ ಹೆಸರಲ್ಲಿ ಹಣ ಹೂಡಿಕೆ ಮಾಡಬಹುದು. ಇನ್ನು ನಿಮ್ಮಲ್ಲಿ ಕೆಲವರು ವಿಲಾಸಿ ಕಾರು ಖರೀದಿಗೆ ಮನಸ್ಸು ಮಾಡುವ ಯೋಗ ಇದೆ.
ಲೇಖನ- ಸ್ವಾತಿ ಎನ್.ಕೆ.