
<p>ಕಸ ಸ್ವಚ್ಛಗೊಳಿಸುವಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರು ಬಂಗಾರದ ಗಂಟನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.</p><img><p>ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬುವವರು ಭಾನುವಾರ ಬೆಳಿಗ್ಗೆ ಟಿ. ನಗರದ ಮುಪ್ಪತ್ತಮ್ಮನ್ ಕೋವಿಲ್ ರಸ್ತೆಯಲ್ಲಿ ಎಂದಿನಂತೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಅವರ ಗಮನ ಸೆಳೆಯಿತು. ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಪದ್ಮಾ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಬೃಹತ್ ಪ್ರಮಾಣದ ಚಿನ್ನದ ಆಭರಣಗಳಿದ್ದವು.</p><img><p>ಸಾಮಾನ್ಯವಾಗಿ ಅಷ್ಟು ದೊಡ್ಡ ಮೊತ್ತದ ಚಿನ್ನ ಕಂಡಾಗ ಯಾರೇ ಆದರೂ ಆಸೆ ಪಡುವುದು ಸಹಜ. ಆದರೆ ಪದ್ಮಾ ಅವರು ಒಂದು ಕ್ಷಣವೂ ಯೋಚಿಸದೆ ನೇರವಾಗಿ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಆ ಚೀಲವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ 45 ಸವರನ್ (ಸುಮಾರು 360 ಗ್ರಾಂ) ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 45 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ.</p><img><p>ಇದೇ ವೇಳೆ ನಂಗನಲ್ಲೂರು ನಿವಾಸಿ ರಮೇಶ್ ಎಂಬುವವರು ತಮ್ಮ 45 ಸವರನ್ ಚಿನ್ನ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾದ ರಮೇಶ್, ಶನಿವಾರ ಸಂಜೆ ಟಿ. ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನಿಟ್ಟು ಮರೆತು ಹೋಗಿದ್ದರು. ಪೊಲೀಸರು ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಅಸಲಿ ಮಾಲೀಕರೆಂದು ಖಚಿತಪಡಿಸಿಕೊಂಡು ಚಿನ್ನವನ್ನು ಹಸ್ತಾಂತರಿಸಿದರು.</p><img><p>ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಈ ಅಸಾಧಾರಣ ಪ್ರಾಮಾಣಿಕತೆಯನ್ನು ಕಂಡ ಪೊಲೀಸರು ಮತ್ತು ಸಾರ್ವಜನಿಕರು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಪ್ರಾಮಾಣಿಕತೆ ಎನ್ನುವುದು ಕೇವಲ ಮಾತಲ್ಲ, ಅದು ಜೀವನದ ಮೌಲ್ಯ’ ಎಂದು ಪೊಲೀಸರು ಪದ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅವರಿಗೆ ಸನ್ಮಾನ ಮಾಡಿದ್ದಾರೆ.</p>
Source link
ಕಸ ಗುಡಿಸುವಾಗ 'ರಸ್ತೆಯಲ್ಲಿ ಸಿಕ್ಕ ಬಂಗಾರದ ಗಂಟ'ನ್ನು ಮಾಲೀಕನಿಗೆ ವಾಪಸ್ ಕೊಟ್ಟ ಪೌರ ಕಾರ್ಮಿಕ ಮಹಿಳೆ!