
ಬೆಳಗಾವಿ, ಹಾವೇರಿ, ಮಾರ್ಚ್ 25: ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಡೇಬಜಾರ್ ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಏಕಾಏಕಿ ಬಂದ ಮಳೆಯಿಂದಾಗಿ ರಸ್ತೆಬದಿ ವ್ಯಾಪಾರ ಮಾಡುವ ತರಕಾರಿ ವ್ಯಾಪಾರಸ್ಥರು ತರಕಾರಿಗಳನ್ನು ಬಿಟ್ಟು ಮನೆಗೆ ತೆರಳಿದರು. ಪೋರ್ಟ್ ರಸ್ತೆಯಲ್ಲಿನ ಅಂಗಡಿಗಳಲ್ಲಿ ನೀರು ನುಗ್ಗಿದ್ದು, ವ್ಯಾಪಾರಸ್ಥರು ಪರದಾಡಿದ್ದಾರೆ. ನಗರದ ರಸ್ತೆಗಳು ನದಿಯಂತೆ ಮಾರ್ಪಟ್ಟಿದ್ದು, ಹಲವು ಬೈಕ್ಗಳು ಮುಳುಗಡೆಯಾಗಿವೆ. ಅಕಾಲಿಕ ಮಳೆಯಿಂದ ಬೆಳಗಾವಿ ನಗರ ನಿವಾಸಿಗಳು ತೀವ್ರ ತೊಂದರೆಗೀಡಾಗಿದ್ದಾರೆ.
ಇದೇ ರೀತಿ, ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಮಳೆಯ ರಭಸಕ್ಕೆ ಸಂತೆಯಲ್ಲಿದ್ದ ಬದನೆಕಾಯಿ, ಟೊಮ್ಯಾಟೊ ಸೇರಿದಂತೆ ಹಲವು ಕೊಚ್ಚಿ ಹೋಗಿ ನಾಶವಾಗಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ರಕ್ಷಿಸಲು ಪರದಾಡಿದರು. ಮಳೆಯಿಂದಾಗಿ ಹಾವೇರಿಯಲ್ಲಿಯೂ ಜನಜೀವನಕ್ಕೆ ಅಡ್ಡಿಯಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ