
<p>ಬೆಂಗಳೂರು: ಎಂ ಎಸ್ ಧೋನಿ ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ಟೀಂ ಇಂಡಿಯಾ ಎನ್ನುವ ಹೆಗ್ಗಳಿಕೆ ಧೋನಿಗಿದೆ. ಆದ್ರೆ ರಾಹುಲ್ ದ್ರಾವಿಡ್ ಒಂದು ತಪ್ಪು ತೀರ್ಮಾನ ಮಾಡಿದ್ದಿದ್ರೆ ಬಹುಶಃ ಧೋನಿ ನಾಯಕನಾಗಿ ನಮಗೆ ಸಿಗುತ್ತಿರಲಿಲ್ಲ. ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.</p><p> </p><img><p>ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ದಿಕ್ಕನ್ನೇ ಬದಲಿಸಿದ ನಾಯಕ. ಆದರೆ ಧೋನಿ ನಾಯಕನಾಗಲು ರಾಹುಲ್ ದ್ರಾವಿಡ್ ತೆಗೆದುಕೊಂಡ ಆ ಒಂದು ದಿಟ್ಟ ತೀರ್ಮಾನ ಕಾರಣ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.</p><img><p>2007 ಟೀಂ ಇಂಡಿಯಾ ಪಾಲಿಗೆ ಅತ್ಯಂತ ಕರಾಳ ವರ್ಷವಾಗಿತ್ತು. ಆ ವರ್ಷ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಎದುರು ಸೋತು ಗ್ರೂಪ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.</p><img><p>ಆ ಸಂದರ್ಭದಲ್ಲಿ ಟೀಂ ಇಂಡಿಯಾ ಆತ್ಮವಿಶ್ವಾಸ ಸಂಪೂರ್ಣ ನೆಲಕಚ್ಚಿತ್ತು. ಅದರಲ್ಲೂ ಬಾಂಗ್ಲಾದೇಶ ಎದುರು ಭಾರತ ಸೋಲಿನ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಲು ಮನಸ್ಸು ಮಾಡಿದ್ದರು.</p><img><p>ಆ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಹೊಸ ನಾಯಕ ಹಾಗೂ ಹೊಸ ಹುಮ್ಮಸ್ಸು ಇರುವ ಆಟಗಾರರ ಅಗತ್ಯವಿತ್ತು. ಯಾಕೆಂದರೆ ಅದೇ ವರ್ಷ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಪರಿಚಯಿಸಲಾಯಿತು.</p><img><p>2007ರ ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ದೇಶಗಳು ಬಲಿಷ್ಠ ತಂಡವನ್ನು ಆಯ್ಕೆ ಮಾಡಿದವು. ಭಾರತ ತಂಡದ ಆಯ್ಕೆ ಮಾಡುವ ವಿಚಾರ ಬಂದಾಗ ರಾಹುಲ್ ದ್ರಾವಿಡ್ ತಾವು ನಾಯಕರಾಗಲ್ಲ ಎಂದು ಮೊದಲು ಘೋಷಿಸಿದರು.</p><img><p>ಇಷ್ಟಕ್ಕೆ ಸುಮ್ಮನಾಗದ ದ್ರಾವಿಡ್, ಈ ಟೂರ್ನಿಗೆ ಯುವ ತಂಡ ಆಡಲು ಹೋಗಲಿ ಎಂದು ಸಲಹೆ ನೀಡಿದರು. ಸಚಿನ್ ಹಾಗೂ ಗಂಗೂಲಿ ಟಿ20 ವಿಶ್ವಕಪ್ ಆಡಲು ರೆಡಿಯಾಗಿದ್ರು. ಆದ್ರೆ ಇದು ಹೊಸ ಫಾರ್ಮ್ಯಾಟ್, ಹೀಗಾಗಿ ಯುವಪಡೆ ಆಡಲಿ ಎಂದು ಸಲಹೆ ನೀಡಿದರು.</p><img><p>ಇದಾದ ನಂತರ ರಾಹುಲ್ ದ್ರಾವಿಡ್, ಟಿ20 ವಿಶ್ವಕಪ್ ಟೂರ್ನಿಗೆ ಎಂ ಎಸ್ ಧೋನಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಲಿ ಎಂದು ಸಲಹೆ ನೀಡಿದರು. ರಾಂಚಿಯ ಕ್ರಿಕೆಟಿಗ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಕೇವಲ ಎರಡು-ಮೂರು ವರ್ಷಗಳಾಗಿದ್ದವು.</p><img><p>ಎಲ್ಲರೂ ಧೋನಿಯ ಸಾಮರ್ಥ್ಯವನ್ನು ಅನುಮಾನಿಸಿದರು. ಇನ್ನು ರವಿಶಾಸ್ತ್ರಿ, ಧೋನಿಯಿಂದ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ ಎಲ್ಲಾ ನಂಬಿಕೆಯನ್ನು ಸುಳ್ಳು ಮಾಡಿ ಧೋನಿ, ಹೆಡ್ ಕೋಚ್ ಇಲ್ಲದೇ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟರು.</p><img><p>ಇದಾದ ಬಳಿಕ 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ನಾಯಕನಾಗಿ ಧೋನಿ ಅಪರೂಪದ ಸಾಧನೆ ಮಾಡಿದರು. ಒಂದು ವೇಳೆ ದ್ರಾವಿಡ್, ಟಿ20 ವಿಶ್ವಕಪ್ಗೆ ನಾಯಕನಾಗಿ ಧೋನಿ ಹೆಸರು ಸೂಚಿಸದೇ ಇದ್ದಿದ್ದರೇ, ಬಹುಶಃ ನಾಯಕನಾಗಿ ಧೋನಿ ನಮಗೆ ಸಿಗುತ್ತಿರಲಿಲ್ಲವೇನೋ? ನೀವೇನಂತೀರಾ?</p>
Source link
ರಾಹುಲ್ ದ್ರಾವಿಡ್ ಅದೊಂದು ತಪ್ಪು ತೀರ್ಮಾನ ಮಾಡಿದ್ರೆ ಧೋನಿ ಕ್ಯಾಪ್ಟನ್ ಆಗ್ತಾನೇ ಇರಲಿಲ್ಲ!