ದಳಪತಿ ವಿಜಯ್ (ತಲಪತಿ ವಿಜಯ್) ತಮ್ಮ ಕೊನೆಯ ಸಿನಿಮಾಕ್ಕೆ ‘ಜನ ನಾಯಕನ್’ ಎಂದು ಹೆಸರಿಟ್ಟಿದ್ದಾರೆ. ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದು, ಸಿನಿಮಾವನ್ನು ತಮ್ಮ ರಾಜಕೀಯ ಅಜೆಂಡಕ್ಕೆ ಪ್ರಚಾರ ಕೊಡಲು ಟೂಲ್ ಆಗಿ ಬಳಸುತ್ತಿದ್ದಾರೆ. ವಿಪರ್ಯಾಸವೆಂದರೆ ‘ಜನ ನಾಯಕನ್’ (ಜನ ನಾಯಕ) ಎಂದು ಹೆಸರಿಟ್ಟುಕೊಂಡು ಬೆಂಗಳೂರಿನ ಸಿನಿಮಾ ಪ್ರೇಮಿಗಳ ಲೂಟಿಗೆ ಇಳಿದಿದ್ದಾರೆ ನಟ ವಿಜಯ್ ಮತ್ತು ‘ಜನ ನಾಯಕನ್’ ಚಿತ್ರತಂಡ. ಹೇಗದು? ವಿವರ ಇಲ್ಲಿದೆ ನೋಡಿ…
‘ಜನ ನಾಯಕನ್’ ತಮಿಳು (ಕನ್ನಡ ಡಬ್ ಇಲ್ಲ) ಸಿನಿಮಾ ಜನವರಿ 09 ರಂದು ಬಿಡುಗಡೆಯಾಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಜನವರಿ 09 ರಂದು ಬೆಳಿಗ್ಗೆ 6:30ಕ್ಕೆ ವಿಶೇಷ ಪ್ರದರ್ಶನವಾಗುತ್ತಿತ್ತು, ಬೆಂಗಳೂರಿನಲ್ಲೂ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ದರ 1000 ರೂಪಾಯಿಗಳಿಗೆ ಹೆಚ್ಚಿದೆ. ಪ್ರಸ್ತುತ ಸಿಂಗಲ್ ಓಪನ್ ಚಿತ್ರಮಂದಿರಗಳಲ್ಲಿ ಮಾತ್ರವೇ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಸಿಂಗಲ್ ಓಪನ್ನಲ್ಲಿ ಟಿಕೆಟ್ ದರ 800 ರಿಂದ ಪ್ರಾರಂಭವಾಗುತ್ತಿದೆ, ಕೆಲವೆಡೆ 1200-1500 ರೂಪಾಯಿಗಳನ್ನು ಸಹ ನಿಗದಿಪಡಿಸಲಾಗಿದೆ.
ಮಧ್ಯಮ ವರ್ಗದ ಚಿತ್ರಮಂದಿರಗಳು ಎನಿಸಿಕೊಂಡ ವೀರೇಶ್, ನವರಂಗ ಅಂಥಾ ಚಿತ್ರಮಂದಿರಗಳಲ್ಲಿಯೂ ಸಹ ‘ಜನ ನಾಯಕ’ ಸಿನಿಮಾದ ಟಿಕೆಟ್ನ ಆರಂಭಿಕ ದರವೇ 800 ರೂಪಾಯಿಗಳಿವೆ. ಬಾಲ್ಕನಿ ಟಿಕೆಟ್ ದರ 1000 ರೂಪಾಯಿಗಳು. ಮಲ್ಟಿಪ್ಲೆಕ್ಸ್ಗಳಲ್ಲಿ ಮುಂಗಡ ಬುಕಿಂಗ್ ಇನ್ನೂ ಪ್ರಾರಂಭವಾಗುವುದಿಲ್ಲ, ಸಿಂಗಲ್ ಓಪನ್ನಲ್ಲಿ 1000 ರೂಪಾಯಿ ಇರುವ ಟಿಕೆಟ್ ದರ ಮಲ್ಟಿಪ್ಲೆಕ್ಸ್ಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ. ಒಟ್ಟಾರೆ, ವಿಜಯ್, ಬೆಂಗಳೂರಿನ ಸಿನಿಮಾ ಪ್ರೇಮಿಗಳು ದೋಚಲೆಂದೇ ಬಂದಂತಿದೆ.
ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಕನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್ಡೇಟ್
ಲೂಟಿಗೆ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದೆ ‘ಜನ ನಾಯಕನ್’ ಚಿತ್ರತಂಡ, ಏಕೆಂದರೆ ಈ ಮುಂಗಡ ಬುಕಿಂಗ್, ವಿಶೇಷ ಶೋ ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ. ಚೆನ್ನೈ, ಹೈದರಾಬಾದ್ನಲ್ಲಿ ಇನ್ನೂ ಮುಂಗಡ ಬುಕಿಂಗ್ ಆರಂಭವೇ ಆಗಿಲ್ಲ. ಆರಂಭದ ಸಹ ಚನ್ನೈನಲ್ಲಿ ತೀರ ಹೆಚ್ಚೆಂದರೆ 300 ರೂಪಾಯಿ ವಿಶೇಷ ಶೋಗೆ ಹಾಗೂ 100 ರೂಪಾಯಿ ಸಾಮಾನ್ಯ ಶೋಗೆ ಬೆಲೆ ಇರಲಿದೆ. ವಿಜಯ್ ಅವರ ಈ ಹಿಂದಿನ ಸಿನಿಮಾಗಳಿಗೆ ಚೆನ್ನೈನಲ್ಲಿ ಇಷ್ಟು ಟಿಕೆಟ್ ಬೆಲೆ ಇತ್ತು. ಹೈದರಾಬಾದ್ನಲ್ಲಿಯೂ ಇದೇ ಪರಿಸ್ಥಿತಿ ಇರಲಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
‘ಜನ ನಾಯಕನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆ. ರಾಜಕೀಯ ಪಕ್ಷ ಕಟ್ಟಿರುವ ವಿಜಯ್, ‘ಜನ ನಾಯಕನ್’ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ‘ಜನ ನಾಯಕನ್’ ಸಿನಿಮಾ ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರಿಮೇಕ್ ಆಗಿದ್ದು, ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ, ಮಲಯಾಳಂ ನಟಿ ಮಮಿತಾ ಬಿಜು ಸಹ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್. ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್. ಕನ್ನಡದ ‘ಸಖತ್’, ‘ಬೈ ಟು ಲವ್’ ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್, ಪ್ರಸ್ತುತ ‘ಟಾಕ್ಸಿಕ್’, ಧ್ರುವ ಸರ್ಜಾ ನಟನೆಯ ‘ಕೇಡಿ’ ಸಿನಿಮಾಗಳನ್ನೂ ನಿರ್ಮಾಣ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ